ಹುಂಚ ನವೋದಯ ಪರೀಕ್ಷೆ ಉಚಿತ ತರಬೇತಿ ಶಿಬಿರದ ಮಕ್ಕಳ ಅಪರೂಪದ ಶೈಕ್ಷಣಿಕ ಪ್ರವಾಸ ಮತ್ತು ನವೋದಯ ವಿದ್ಯಾರ್ಥಿಗಳೊಂದಿಗೆ ಸಂವಾದ
ಹೊಸನಗರ : ಇಲ್ಲಿನ ಹುಂಚ ಉಚಿತ ತರಬೇತಿ ಶಿಬಿರದ ವಿದ್ಯಾರ್ಥಿಗಳು ಸೇರಿದಂತೆ ಶಿವಮೊಗ್ಗ ಜಿಲ್ಲಾ ಮಟ್ಟದ ವಿವಿಧ ಬ್ಲಾಕ್ಗಳ ಗ್ರಾಮೀಣ ಭಾಗದ 5ನೇ ತರಗತಿಯ 130 ವಿದ್ಯಾರ್ಥಿಗಳು ಇತ್ತೀಚೆಗೆ ಪಿಎಂ ಶ್ರೀ ನವೋದಯ ವಿದ್ಯಾಲಯಕ್ಕೆ ಪ್ರವಾಸ ಕೈಗೊಂಡು, ನವೋದಯ ಕ್ಯಾಂಪಸ್ಸಿನ ನೋಟ, ಶಾಲೆಯ ವ್ಯವಸ್ಥೆಗಳು ಮತ್ತು ಸೌಲಭ್ಯಗಳನ್ನು ಪರಿಶೀಲಿಸಿದರಲ್ಲದೇ, ಪರೀಕ್ಷೆಯ ತಯಾರಿ ಬಗ್ಗೆ ಅಲ್ಲಿನ ವಿದ್ಯಾರ್ಥಿಗಳೊಂದಿಗೆ ಸಂವಾದವನ್ನು ನಡೆಸಿದರು.
ಪಿಎಂ ಶ್ರೀ ನವೋದಯ ಶಿವಮೊಗ್ಗ ಹಾಗೂ ಹಳೆ ವಿದ್ಯಾರ್ಥಿಗಳ - ಮಿಲನ ಅಲ್ಯುಮ್ನಿ ಅಸೋಸಿಯೇಷನ್ನಿನ ಮಾರ್ಗದರ್ಶನದಲ್ಲಿ ಈ ಪ್ರವಾಸವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಪ್ರವಾಸ ಮತ್ತು ಸಂವಾದದ ಕಾರ್ಯಕ್ರಮದಲ್ಲಿ ಪ್ರಸ್ತುತ ಪ್ರಭಾರಿ ಪ್ರಾಚಾರ್ಯರಾದ ಜಾನ್ಸನ್ ಪಿ. ಜೇಮ್ಸ್ ಅವರು ಮಾತನಾಡಿ, ಪಿ ಎಂ ಶ್ರೀ ನವೋದಯ ಶಾಲೆ ಶಿವಮೊಗ್ಗ ಜಿಲ್ಲೆಯ ಅತ್ಯಂತ ಉತ್ತಮ ಮತ್ತು ಶ್ರೇಷ್ಠ ಶಾಲೆ. ಇಲ್ಲಿ ಶಿಕ್ಷಣ ಪಡೆದ ಮಕ್ಕಳು ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಬದುಕು ರೂಪಿಸಿಕೊಂಡಿದ್ದಾರೆ. ನೀವೆಲ್ಲರೂ ಪರೀಕ್ಷೆಗೆ ಉತ್ತಮ ತಯಾರಿ ನಡೆಸಿ ತೇರ್ಗಡೆಯಾಗಿ ನಮ್ಮ ನವೋದಯ ಶಾಲೆಗೆ ಸೇರಿಕೊಳ್ಳಬೇಕು ಎಂದು ಪ್ರವಾಸದಲ್ಲಿ ಬಂದಿದ್ದ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ನವೋದಯ ಮತ್ತು ಮೊರಾರ್ಜಿ ಶಾಲಾ ಪರೀಕ್ಷೆಗಳ ಉಚಿತ ತರಬೇತಿ ಶಿಬಿರದ ಸಂಸ್ಥಾಪಕರಾದ ಪ್ರಕಾಶ್ ಜೋಯ್ಸ್ ಅವರು ಈ ಸಂದರ್ಭದಲ್ಲಿ ಮಾತನಾಡಿ, ಗ್ರಾಮೀಣ ಭಾಗದ ಮಕ್ಕಳು ಉತ್ತಮ ಭವಿಷ್ಯ ರೂಪಿಸಿಕೊಳ್ಳಲಿ ಎಂದು ನಾವು ಈ ಉಚಿತ ನವೋದಯ ತರಬೇತಿ ಶಿಬಿರದ ಕಲ್ಪನೆಯನ್ನು ಸಾಕಾರಗೊಳಿಸಿದ್ದೇವೆ ಮತ್ತು ಮಕ್ಕಳಿಗೆ ಪ್ರೇರಣೆ ದೊರೆಯಲಿ ಎಂದು ಇಂತಹ ಒಂದು ಪ್ರವಾಸವನ್ನು ಆಯೋಜಿಸಿದ್ದೇವೆ. ಇದರ ಸಂಪೂರ್ಣ ಉಪಯೋಗವನ್ನು ಮಕ್ಕಳು ಪಡೆದುಕೊಂಡು, ನವೋದಯ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಬೇಕು ಎಂದು ಆಶಿಸಿದರು.
ಮಕ್ಕಳ ಸಂವಾದ ಕಾರ್ಯಕ್ರಮದಲ್ಲಿ ನವೋದಯ ಪರೀಕ್ಷೆ ಬಗ್ಗೆ ತಯಾರಿ, ಸಮಯ ನಿರ್ವಹಣೆ, ಮಾನಸಿಕ ಸಾಮರ್ಥ್ಯ, ಗಣಿತ, ಕನ್ನಡ ವಿಷಯಗಳ ಬಗ್ಗೆ ಸುದೀರ್ಘ ಚರ್ಚೆ ನಡೆಸಲಾಯಿತಲ್ಲದೇ, ನವೋದಯ ಶಾಲೆಯ 6ನೇ ತರಗತಿ ಮಕ್ಕಳಿಂದ ಪ್ರತ್ಯುತ್ತರ ಪಡೆಯಲಾಯಿತು.
ಈ ಕಾರ್ಯಕ್ರಮದಲ್ಲಿ ಹಳೆ ನವೋದಯ ವಿದ್ಯಾರ್ಥಿ ಬಳಗ ಹಾಗೂ ಶಿಬಿರದ ಸಹ ಸಂಸ್ಥಾಪರಾದ ಪುನೀತ್, ಡಾ. ಕೆ. ಎಂ. ಸುನೀಲ್ ಕುಮಾರ್, ಎಂ. ಪಿ. ನವೀನ್ ಕುಮಾರ್, ಡಾ. ಕೆ. ಪಿ. ಸುನೀಲ್ ಕುಮಾರ್, ಶಿವಮೂರ್ತಿ ಮತ್ತು ಶಿಬಿರದ ಶಿಕ್ಷಕರಾದ ರಂಗನಾಥ್, ಶಿವಕುಮಾರ್, ಇಮ್ರಾನ್, ಪ್ರದೀಪ್, ಪೂರ್ಣೇಶ್, ಲಕ್ಷ್ಮೀ, ಆಶಾ, ಶ್ರೀಧರ್ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಪಿ ಎಂ ಶ್ರೀ ನವೋದಯ ಶಿವಮೊಗ್ಗ ಶಾಲೆಯ ಸಾಧನೆಯನ್ನು ಶ್ಲಾಘಿಸಿ, ಪ್ರಾಚಾರ್ಯರಾದ ಜಾನ್ಸನ್ ಅವರನ್ನು ಸನ್ಮಾನಿಸಲಾಯಿತು.
ಇದೊಂದು ಅಪರೂಪದ ಹಾಗೂ ಹೊಸನಗರ ತಾಲ್ಲೂಕಿನ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಮೊದಲ ಅನುಭವವಾಗಿದ್ದ ಈ ಶೈಕ್ಷಣಿಕ ಪ್ರವಾಸವನ್ನು ಹಳೆ ವಿದ್ಯಾರ್ಥಿಗಳ ಬಳಗ ಮಿಲನ ಮತ್ತು ನವೋದಯ ಮತ್ತು ಮೊರಾರ್ಜಿ ಶಾಲೆ ಪ್ರವೇಶ ಪರೀಕ್ಷೆಗಳ ಉಚಿತ ತರಬೇತಿ ಶಿಬಿರ ಸಂಸ್ಥೆಯಿಂದ ಹಮ್ಮಿಕೊಳ್ಳಲಾಗಿತ್ತು.
ಈ ಸಂಸ್ಥೆಯಿಂದ ಕಳೆದ ಮೂರು ವರ್ಷಗಳಿಂದ 209 ಮಕ್ಕಳು ಉಚಿತ ತರಬೇತಿ ಪಡೆದು, ಒಟ್ಟು 6 ಮಕ್ಕಳು ನವೋದಯ ಶಾಲೆಗೆ ಮತ್ತು 54 ಮಕ್ಕಳು ಮೊರಾರ್ಜಿ ವಸತಿ ಶಾಲೆಗಳಿಗೆ ತೇರ್ಗಡೆಯಾಗಿದ್ದಾರೆ. ಮುಖ್ಯವಾಗಿ ಈ ಸಂಸ್ಥೆಯಿಂದ ಗ್ರಾಮೀಣ ಭಾಗದ ಮಕ್ಕಳು 1.68 ಕೋಟಿ ರೂಪಾಯಿ ಮೌಲ್ಯದ ಶೈಕ್ಷಣಿಕ ಉಪಯೋಗವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಪಡೆದುಕೊಂಡಿದ್ದಾರೆ. ಪ್ರಸಕ್ತ ವರ್ಷದಲ್ಲಿ ಈ ಸಂಸ್ಥೆ ಹುಂಚ, ಕೋಣಂದೂರು ಮತ್ತು ಶಿಕಾರಿಪುರದ ನೆಲವಾಗಿಲು ಗ್ರಾಮಗಳಲ್ಲೂ ಕಾರ್ಯ ನಡೆಸುತ್ತಿದೆ.
ಈ ಕಾರ್ಯಕ್ರಮವು ಮಕ್ಕಳಲ್ಲಿ ತಮ್ಮ ಗುರಿಯನ್ನು ಸಾಧಿಸಲು ಮತ್ತಷ್ಟು ಪ್ರೇರಣೆ ನೀಡಿ, ನವೋದಯ ಶಾಲೆಗಳ ವೈಶಿಷ್ಟ್ಯಗಳನ್ನು ಕಂಡು ಕಲಿಯುವ ಒಂದು ಅವಕಾಶ ಮತ್ತು ವೇದಿಕೆಯಾಗಿ ಮಾದರಿಯಾಯಿತು.
ಕಾಮೆಂಟ್ಗಳಿಲ್ಲ