ಹೊಸನಗರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿಯಲ್ಲಿ ಯಶಸ್ವಿ 1897ನೇ ಮದ್ಯವರ್ಜನಾ ಶಿಬಿರಕ್ಕೆ ಚಾಲನೆ
ಹೊಸನಗರ : ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಬೆಳ್ತಂಗಡಿ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನ ಮುಕ್ತಿ ಮತ್ತು ಸಂಶೋಧನಾ ಕೇಂದ್ರ, ಶಿವಮೊಗ್ಗದ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ, ಶ್ರೀ ರಾಮಚಂದ್ರಪುರ ಮಠ, ಶ್ರೀ ಕ್ಷೇತ್ರ ಸಿಗಂದೂರು, ಪಟ್ಟಣ ಪಂಚಾಯತ್ ಹೊಸನಗರ, ನವ ಜೀವನ ಸಮಿತಿ, ಗಾಯತ್ರಿ ಮಂದಿರ ವ್ಯವಸ್ಥಾಪನ ಸಮಿತಿಗಳ ಸಂಯುಕ್ತಾಶ್ರಯದಲ್ಲಿ ಇಂದು ಪಟ್ಟಣದ ಶ್ರೀ ಗಾಯತ್ರಿ ಮಂದಿರದಲ್ಲಿ 1897ನೇ ಮದ್ಯವರ್ಜನ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.
ನ್ಯೂಸ್ ಪೋಸ್ಟ್ಮಾರ್ಟಮ್ ಮಾಸಪತ್ರಿಕೆಯ PDF ಪ್ರತಿಯನ್ನು ಡೌನ್ಲೋಡ್ ಮಾಡಿಕೊಂಡು ಓದಲು ಕ್ಲಿಕ್ ಮಾಡಿ
ಜಿಲ್ಲಾ ಜನಜಾಗೃತಿ ಯೋಜನೆಯ ಸದಸ್ಯ ಎನ್.ಆರ್. ದೇವಾನಂದ್ ಅಧ್ಯಕ್ಷತೆಯಲ್ಲಿ, ಮೂಲೆಗದ್ದೆ ಶಿವಯೋಗಾಶ್ರಮದ ಶ್ರೀ ಶ್ರೀ ಅಭಿನವ ಚನ್ನಬಸವ ಮಹಾಸ್ವಾಮಿಗಳು ಇಂದು ಶಿಬಿರವನ್ನು ಉದ್ಘಾಟಿಸಿ, ದುಶ್ಚಟಗಳಿಂದ ದೂರವಿದ್ದು ಪ್ರೀತಿ ವಿಶ್ವಾಸಗಳ ಮೂಲಕ ಮನಃಪರಿವರ್ತನೆ ಮಾಡಿಕೊಂಡು ಹೊಸ ಜೀವನವನ್ನು ಆರಂಭಿಸುವಂತೆ ಕರೆ ನೀಡಿದರು. ಶ್ರೀಕ್ಷೇತ್ರ ಧರ್ಮಸ್ಥಳದಿಂದ ಇದೊಂದು ಪವಾಡ ಸದೃಶ ಕಾರ್ಯಕ್ರಮವಾಗಿದೆ ಎಂದ ಶ್ರೀಗಳು, ಈಗಾಗಲೇ ಶ್ರೀ ಕ್ಷೇತ್ರ ಧರ್ಮಸ್ಥಳದ ಮದ್ಯವರ್ಜನ ಶಿಬಿರಗಳಿಂದ ಒಂದೂವರೆ ಲಕ್ಷಕ್ಕೂ ಹೆಚ್ಚು ಜನ ಮದ್ಯ ವರ್ಜಿಸಿದ ಪರಿಣಾಮ ಈ ಕುಟುಂಬಗಳು ಎಲ್ಲರಂತೆ ಉತ್ತಮ ಸಂಸಾರಸ್ಥರಾಗಿ ಜೀವನ ನಿರ್ವಹಣೆ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಶಿಬಿರದ ಕುರಿತು ಪ್ರಾಸ್ತಾವಿಕ ಮಾತುಗಳನ್ನಾಡಿದ ಯೋಜನಾಧಿಕಾರಿ ನಾಗರಾಜ್ ಕುಲಾಲ್ ಅವರು, ಮದ್ಯವರ್ಜನ ಶಿಬಿರ ಎನ್ನುವುದು ಒಂದು ರೀತಿಯಲ್ಲಿ ಪುನರ್ಜನ್ಮ ನೀಡುವಂತಹ ಕಾರ್ಯಕ್ರಮ. ಈ ಎಂಟು ದಿನಗಳ ಶಿಬಿರದಲ್ಲಿ ಆತ್ಮವಿಶ್ವಾಸವನ್ನು ಮೂಡಿಸಲಾಗುತ್ತದೆ. ಮಹಾತ್ಮ ಗಾಂಧೀಜಿಯವರು ಕಂಡಂತಹ ಸ್ವಾಸ್ಥ್ಯ ಸಮಾಜವನ್ನು ನಿರ್ಮಿಸುವುದೇ ಈ ಶಿಬಿರದ ಉದ್ದೇಶವಾಗಿದೆ ಎಂದು ಶಿಬಿರದ ಉದ್ದೇಶವನ್ನು ವಿವರಿಸಿದರು.
ಯೋಜನೆಯ ಜಿಲ್ಲಾ ನಿರ್ದೇಶಕ ಮುರಳೀಧರ ಶೆಟ್ಟಿ, ಸಿಪಿಐ ಗುರಣ್ಣ ಎಸ್. ಹೆಬ್ಬಾಳ್, ಪ ಪಂ ಮಾಜಿ ಅಧ್ಯಕ್ಷ ಹೆಚ್. ಎನ್. ಶ್ರೀಪತಿ ರಾವ್, ಒಕ್ಕೂಟದ ಅಧ್ಯಕ್ಷೆ ವಸಂತಿ ರಮೇಶ್, ಮಹಿಳಾ ಸಿರಿ ಕನ್ನಡ ವೇದಿಕೆಯ ಶ್ರೀಮತಿ ಶಶಿಕಲಾ ಮಲ್ಲಪ್ಪ, ತಾಲ್ಲೂಕು ಪಂಚಾಯತ್ ಮಾಜಿ ಅಧ್ಯಕ್ಷೆ ಶ್ರೀಮತಿ ನಾಗರತ್ನ ದೇವರಾಜ್, ಪಟ್ಟಣ ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ಕೃಷ್ಣವೇಣಿ, ವರ್ತಕರ ಸಂಘದ ವಿಜೇಂದ್ರ ಶೇಟ್ ಮೊದಲಾದವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಶ್ರೀಮತಿ ನಾಗರತ್ನ ದೇವರಾಜ್ ಪ್ರಾರ್ಥಿಸಿದರು. ಯೋಜನಾಧಿಕಾರಿ ಪ್ರದೀಪ್ ಸ್ವಾಗತಿಸಿದರು. ಯೋಜನಾಧಿಕಾರಿ ನಾಗರಾಜ್ ಕುಲಾಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಜನ ಜಾಗೃತಿಯ ನಾರಾಯಣ ಕಾಮತ್ ವಂದಿಸಿದರು.
ಕಾಮೆಂಟ್ಗಳಿಲ್ಲ