ನಿಟ್ಟೂರಿನ ಕಲ್ಯಾಣಿ ಚೌಕ ಗ್ರಾಮಸ್ಥರಿಂದಲೇ ರಸ್ತೆ ರಿಪೇರಿ - ಗ್ರಾಮಾಡಳಿತಕ್ಕೆ ಛೀಮಾರಿ
ಹೊಸನಗರ : ತಾಲ್ಲೂಕಿನ ನಿಟ್ಟೂರು ಗ್ರಾಮದ ಹೆಬ್ಬಿಗೆ, ಬರುವೆ ಸಂಪರ್ಕಿಸುವ ಕಲ್ಯಾಣಿ ಚೌಕ ರಸ್ತೆ ನಿರಂತರ ಮಳೆಯಿಂದ ಕೆಸರುಗದ್ದೆಯಂತಾಗಿದ್ದು, ಗ್ರಾಮಾಡಳಿತ ಈ ಬಗ್ಗೆ ಗಮನ ಹರಿಸದ ಹಿನ್ನೆಲೆಯಲ್ಲಿ ಕಲ್ಯಾಣಿ ಚೌಕ ಗ್ರಾಮಸ್ಥರೇ ರಸ್ತೆಗೆ ಕಲ್ಲು ತಂದು ಹಾಕಿ, ರಿಪೇರಿ ಮಾಡಿಕೊಂಡಿದ್ದಾರೆ.
ಶಾಲಾ-ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಪ್ರತೀದಿನ ಕನಿಷ್ಠ 300 ರಿಂದ 400 ಜನ ಓಡಾಡುವ ಕಲ್ಯಾಣಿ ಚೌಕ ರಸ್ತೆಯ 3.5 ಕಿ.ಮೀಗಳಲ್ಲಿ, ಕಳೆದ 4 ವರ್ಷಗಳ ಹಿಂದೆ 1.5 ಕಿ.ಮೀ ರಸ್ತೆಯನ್ನು ಮಾತ್ರ ಸರ್ವಋತು ರಸ್ತೆಯನ್ನಾಗಿ ಮಾಡಲಾಗಿತ್ತು. ಉಳಿದ 1.5 ಕಿ.ಮೀ ಕಚ್ಚಾ ರಸ್ತೆಯಾಗಿದ್ದು ಓಡಾಡಲು ಸಾಧ್ಯವೇ ಇಲ್ಲ ಎನ್ನುವಂತಾಗಿದೆ. ಮಳೆಗಾಲದಲ್ಲಂತೂ ಅಕ್ಷರಶಃ ಕೆಸರುಗದ್ದೆಯಾಗಿ ಇಲ್ಲಿ ದಿನನಿತ್ಯ ಓಡಾಡುವವರು ಪಡುವ ಕಷ್ಟ ಹೇಳತೀರದಾಗಿದೆ. ಶಾಸಕರಿಗೂ ಮತ್ತು ಗ್ರಾಮ ಪಂಚಾಯಿತಿಗೆ ಸಾಕಷ್ಟು ಬಾರಿ ರಸ್ತೆ ಸರಿ ಪಡಿಸಿಕೊಡುವಂತೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಬೇಸತ್ತ ಗ್ರಾಮಸ್ಥರು ತಾವೇ ಸೇರಿ ವಾಹನದಲ್ಲಿ ಕಲ್ಲನ್ನು ತಂದು ಕೆಸರಾದ ಜಾಗಕ್ಕೆ ಹಾಕಿ ಸರಿಪಡಿಸಿಕೊಂಡಿದ್ದಾರೆ.
CLICK ಮಾಡಿ - ರವೀಶ್ ನಿಟ್ಟೂರು ಅವರಿಗೆ ಮಾತೃ ವಿಯೋಗ
ತನ್ನದೇ ಗ್ರಾಮದ ಜನರು ಓಡಾಟ ನಡೆಸಲು ಸಾಧ್ಯವಾಗದೇ ಪರದಾಡುತ್ತಿದ್ದರೂ ಇದು ತಮಗೆ ಸಂಬಂಧಿಸಿದ್ದೇ ಅಲ್ಲ ಎನ್ನುವಂತೆ ಮೌನವಾಗಿರುವ ಗ್ರಾಮಾಡಳಿತಕ್ಕೆ ಗ್ರಾಮಸ್ಥರು ಈ ಕಾರ್ಯದ ಮೂಲಕ ಛೀಮಾರಿ ಹಾಕಿದ್ದಾರೆ.
ರಸ್ತೆ ಸರಿ ಪಡಿಸುವ ಕಾರ್ಯದಲ್ಲಿ ನಿಸರ್ಗಧಾಮ ಮಂಜುನಾಥ ಶಾಸ್ತ್ರಿ, ಕೃಷ್ಣ ಕಲ್ಯಾಣಿ ಚೌಕ, ಸುಧೀಂದ್ರ ಕಲ್ಯಾಣಿ ಚೌಕ, ನಾಗರಾಜ ಕಲ್ಯಾಣಿ ಚೌಕ ಸೇರಿದಂತೆ ಗ್ರಾಮದ ಹಲವರು ಪಾಲ್ಗೊಂಡಿದ್ದರು.
ಕಾಮೆಂಟ್ಗಳಿಲ್ಲ