ಹೊಸನಗರ ಪಟ್ಟಣ ಪಂಚಾಯತಿ ಸಾಮಾನ್ಯ ಸಭೆಯಲ್ಲಿ ಮಾರ್ದನಿಸಿದ ಮಳಿಗೆ ಬಾಕಿ ವಸೂಲಿ ವಿಷಯ | ನೂತನ ಕಚೇರಿಗೆ ಶಾಸಕ ಬೇಳೂರು ವಿಶೇಷ ಅನುದಾನ ತರುವತ್ತ ಗಮನ ಹರಿಸಲಿ - ಸದಸ್ಯರ ಒಕ್ಕೊರಲಿನ ಆಗ್ರಹ
ಹೊಸನಗರ : ಇಲ್ಲಿನ ಪಟ್ಟಣ ಪಂಚಾಯಿತಿಗೆ ಸೇರಿದ ಹತ್ತನೇ ಹಣಕಾಸು ಮಳಿಗೆ, ಹಳೇ ಕೋರ್ಟ್ ಸರ್ಕಲ್ ಮಳಿಗೆ, ಎಸ್ ಬಿ ಐ ಮುಂಭಾಗದ ಮಳಿಗೆ, ಬಸ್ ನಿಲ್ದಾಣದ ಮಳಿಗೆ ಹಾಗೂ ಮೀನು ಮಾರುಕಟ್ಟೆಗಳ ಬಾಡಿಗೆ ಬಾಬ್ತು ಜೂನ್ 24ರ ಅಂತ್ಯಕ್ಕೆ ಸುಮಾರು 40,32,476 ರೂಪಾಯಿ ಬಾಕಿ ಉಳಿದಿದೆ. ಇದನ್ನು ಕಾನೂನು ಮೂಲಕ ಕ್ರಮ ಕೈಗೊಂಡು ವಸೂಲಿಗೆ ಕೂಡಲೇ ಮುಂದಾಗುವಂತೆ ಹೊಸನಗರ ಪಟ್ಟಣ ಪಂಚಾಯಿತಿಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರು ಒಕ್ಕೊರಲಿನಿಂದ ಅಧಿಕಾರಿಗಳಿಗೆ ಆಗ್ರಹಿಸಿದರು.
ಕಳೆದ ಹತ್ತಾರು ವರ್ಷಗಳಿಂದ ಸುಮಾರು 30 ಮಂದಿ ಟೆಂಡರ್ದಾರರು ಮಳಿಗೆ ಬಾಡಿಗೆಯನ್ನೇ ಸರಿಯಾಗಿ ಪಾವತಿಸಿಲ್ಲ. ಈ ಹಿಂದಿನ ಅಧಿಕಾರಿಗಳು ಈವರೆಗೆ ಏನು ಮಾಡುತ್ತಾ ಕುಳಿತಿದ್ದರು?! ಇದರಿಂದ ಪಟ್ಟಣದ ಅಭಿವೃದ್ಧಿ ಕಾರ್ಯಗಳಿಗೆ ಭಾರೀ ಹಿನ್ನಡೆಯಾಗಿದೆ. ಆದ್ದರಿಂದ ಈ ಕೂಡಲೇ ಬಾಕಿ ಬಾಡಿಗೆ ವಸೂಲಿಗೆ ಕ್ರಮ ವಹಿಸುವಂತೆ ಸಭೆ ತಾಕೀತು ಮಾಡಿತು.
ಇದಕ್ಕೆ ಮುಖ್ಯಾಧಿಕಾರಿ ಉತ್ತರ ನೀಡಿ, ಪ್ರತಿ ಬಾರಿ ಬಾಡಿಗೆ ವಸೂಲಿಗೆ ಸಿಬ್ಬಂದಿಗಳು ಮುಂದಾದಾಗ, ರಾಜಕೀಯ ವ್ಯಕ್ತಿಗಳ ಮೂಲಕ ಪ್ರಭಾವ ಬೀರಲಾಗುತ್ತಿದೆ. ಸಿಬ್ಬಂದಿಗಳು ಸರಿಯಾದ ಕ್ರಮ ವಹಿಸದಂತೆ ತಡೆಯಲಾಗಿದೆ. ಚುನಾಯಿತ ಜನಪ್ರತಿನಿಧಿಗಳಾಗಲಿ, ಪ್ರಭಾವಿ ವ್ಯಕ್ತಿಗಳಾಗಲಿ ನಮ್ಮ ಕರ್ತವ್ಯಕ್ಕೆ ಅಡ್ಡಿ ಪಡಿಸದೆ ಇದ್ದಲ್ಲಿ ಶೀಘ್ರದಲ್ಲೇ ಈ ಮಳಿಗೆಗಳ ಬಾಡಿಗೆ ಬಾಕಿ ವಸೂಲಿಗೆ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದ ಬೆನ್ನಲ್ಲೇ ಸಭೆ ನಿರ್ಧಾರ ಅಂಗೀಕರಿಸಿತು.
ಪಟ್ಟಣ ಪಂಚಾಯಿತಿ ವಾರ್ಷಿಕ ಆದಾಯ ರೂ 56 ಲಕ್ಷ ಇದ್ದು ಮುಂದಿನ ಸಾಲಿನ ಆಯ-ವ್ಯಯಕ್ಕೆ ರೂ 64 ಲಕ್ಷ ಹೊಂದಿರುವುದು ಸ್ವಾಗತಾರ್ಹ ಸಂಗತಿ. ಈ ಹಣವನ್ನು ಪಟ್ಟಣದ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಮೀಸಲಿಡಬೇಕೇ ಹೊರತು, ಹೊಸ ಕಚೇರಿ ನಿರ್ಮಾಣಕ್ಕೆ ಕೂಡದು ಎಂದು ಸದಸ್ಯರೊಬ್ಬರು ಸಭೆಯ ಗಮನಕ್ಕೆ ತಂದರು. ಉಳಿದ ಸದಸ್ಯರು ಈ ಪ್ರಸ್ತಾಪಕ್ಕೆ ಒಪ್ಪಿಗೆ ಸೂಚಿಸಿದ್ದು ವಿಶೇಷವಾಗಿತ್ತು. ಜೊತೆಗೆ ನೂತನ ಕಚೇರಿ ನಿರ್ಮಾಣಕ್ಕೆ ತೆರಿಗೆ ಹಣವನ್ನು ಬಳಸುವ ಬದಲು ಶಾಸಕ ಬೇಳೂರು ವಿಶೇಷ ಅನುದಾನ ತರುವತ್ತ ಗಮನ ಹರಿಸಲಿ ಎಂದು ಸೂಚಿಸಲಾಯಿತು.
ಸದಸ್ಯೆ ಕೃಷ್ಣವೇಣಿ ಮಾತನಾಡಿ, ಇಲ್ಲಿನ ಶಿವಪ್ಪನಾಯಕ ಮಾರುಕಟ್ಟೆಯಲ್ಲಿ ಹಲವು ನ್ಯೂನತೆಗಳಿವೆ. ಭದ್ರತೆಗೆ ಮಾರುಕಟ್ಟೆ ಸುತ್ತ ತಂತಿ ಬೇಲಿ ಹಾಗೂ ಹೆಚ್ಚುವರಿ ಶೌಚಾಲಯ ನಿರ್ಮಾಣ ಶೀಘ್ರವಾಗಿ ಆಗಬೇಕಿದೆ. ಅಲ್ಲದೇ ಮಳೆಗಾಲದಲ್ಲಿ ಸಾರ್ವಜನಿಕ ಕುಡಿಯುವ ನೀರಿನ ಬಾವಿಗಳ ಸ್ವಚ್ಛತೆ ಸರಿಯಾದ ಕ್ರಮವಲ್ಲ. ಸೋರುತ್ತಿರುವ ನಮ್ಮ ಕಚೇರಿಯ ಕೆಲವು ಭಾಗದಲ್ಲಿ ಮೊದಲು ಎ.ಸಿ. ಶೀಟ್ ಅಳವಡಿಸಿ ಎಂದು ಸಭೆಯ ಗಮನ ಸೆಳೆದರು.
ಸಭೆಯಲ್ಲಿ ಬಸ್ ನಿಲ್ದಾಣದ ಹೈ ಮಾಸ್ಕ್ ಕಂಬಕ್ಕೆ ಹೊಸ ದೀಪ ಅಳವಡಿಸುವುದು, ನೀರು ಸರಬರಾಜು ವಾರ್ಷಿಕ ಟೆಂಡರ್ ಕರೆಯುವುದು, ಸರ್ವೆ ನಂಬರ್ 40 ಹಾಗೂ 158ರ ಆಶ್ರಯ ಕಾಲೋನಿ ಫಲಾನುಭವಿಗಳ ನಿವೇಶನಗಳಿಗೆ ಪಿಐಡಿ ನೀಡುವುದು, ಬಸ್ ನಿಲ್ದಾಣ ಸೋರಿಕೆ ತಡೆ, ಪಂಚಾಯಿತಿ ವ್ಯಾಪ್ತಿಯನ್ನು ಹೆಚ್ಚಿಸಿ ಪುರಸಭೆ ದರ್ಜೆಗೆ ಏರಿಸಲು ಅಗತ್ಯ ಸಂಗತಿ ಕುರಿತಂತೆ ಸಭೆಯಲ್ಲಿ ಚರ್ಚೆ ನಡೆಯಿತು.
ತಹಶೀಲ್ದಾರ್ ರಶ್ಮಿ ಹೆಚ್.ಜೆ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿದ್ದು, ಸದಸ್ಯರಾದ ಗುರುರಾಜ, ನಾಗರಾಜ, ಅಶ್ವಿನಿ, ಸಿಂಥಿಯಾ, ಶಾಹಿನ, ಚಂದ್ರಕಲಾ, ಗಾಯತ್ರಿ, ನಾಮನಿರ್ದೇಶಿತ ಸದಸ್ಯರಾದ ಹೆಚ್.ಎಂ. ನಿತ್ಯಾನಂದ, ಕೆ.ಎಸ್. ಗುರುರಾಜ್, ನೇತ್ರ ಸುಬ್ರಾಯ ಭಟ್, ಮುಖ್ಯಾಧಿಕಾರಿ ಎನ್.ಕೆ. ಸುರೇಶ್, ಕಂದಾಯ ನಿರೀಕ್ಷಕ ಮಂಜುನಾಥ್, ಸಿಬ್ಬಂದಿಗಳಾದ ಉಮಾಶಂಕರ್, ಲಕ್ಷಣ, ಸುಮಿತ್ರಾ, ಪರಶುರಾಮ, ಗೌರೀಶ್, ನೇತ್ರಾವತಿ, ಇಂಜಿನಿಯರ್ ವಿಠಲ್ ಹೆಗಡೆ ಉಪಸ್ಥಿತರಿದ್ದರು.
ಕಾಮೆಂಟ್ಗಳಿಲ್ಲ