ಹೊಸನಗರ ಪಟ್ಟಣದಲ್ಲೇ ಧರೆ ಕುಸಿತದ ಭೀತಿ - ಕೃಷಿ ಜಮೀನಿಗೆ ನುಗ್ಗುತ್ತಿರುವ ಮಳೆ ನೀರಿನಿಂದ ಕಂಗಾಲಾದ ರೈತ - ನಷ್ಟ ತಪ್ಪಿಸಲು ತಡೆಗೋಡೆ ನಿರ್ಮಾಣಕ್ಕೆ ಒತ್ತಾಯ
ಹೊಸನಗರ: ಇತ್ತೀಚೆಗೆ ತಾಲ್ಲೂಕಿನೆಲ್ಲೆಡೆ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಪಟ್ಟಣದ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ಲೇಔಟಿಗೆ ಹೊಂದಿಕೊಂಡಿರುವ ಧರೆ ಕುಸಿಯುವ ಭೀತಿ ಎದುರಾಗಿದ್ದು, ಮಳೆ ಹೀಗೆ ಮುಂದುವರೆದಲ್ಲಿ ಧರೆ ಕುಸಿದು ಹತ್ತಾರು ಎಕರೆ ಅಡಿಕೆ ತೋಟ ಮತ್ತು ಭತ್ತದ ಗದ್ದೆಗಳಿಗೆ ವ್ಯಾಪಕ ಹಾನಿ ಉಂಟಾಗುವ ಆತಂಕ ರೈತರನ್ನು ಬೆಂಬಿಡದೆ ಕಾಡುತ್ತಿದೆ.
ಪಟ್ಟಣದ ಮಾರಿಗುಡ್ಡ, ಕೈಗಾರಿಕಾ ವಲಯ, ಎಪಿಎಂಸಿ, ಕೋರ್ಟ್ ಹಿಂಭಾಗ ಸೇರಿದಂತೆ ಹಲವೆಡೆ ಸುರಿದ ಮಳೆ ನೀರು ಮಾವಿನ ಕೊಪ್ಪ ಗ್ರಾಮದ ರತ್ನಾಕರ ಬಿನ್ ಹಿರಿಯಣ್ಣಯ್ಯ ಎನ್ನುವವರ (ಸರ್ವೆ ನಂಬರ್ 18) ಕೃಷಿ ಜಮೀನಿನಲ್ಲಿರುವ ಹಳ್ಳದ ಮೂಲಕ ಹಾದು ಹೋಗುತ್ತಿದೆ. ಆದರೆ ಭಾರೀ ಮಳೆಯಿಂದ ನೀರು ಹೆಚ್ಚಾಗಿ ಹರಿದು ಬರುತ್ತಿರುವ ಕಾರಣ, ಜಮೀನಿನ ದಂಡೆ ಒಡೆದು ನೀರು ಕೃಷಿ ಭೂಮಿಗೆ ನುಗ್ಗಿ ಹಾನಿ ಉಂಟಾಗಿದೆ. ಕೆಎಸ್ಎಸ್ಐಡಿಸಿಎಲ್ ಲೇಔಟಿನಲ್ಲಿ ಮಳೆ ನೀರು ಸರಾಗವಾಗಿ ಹರಿಯಲು ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದಿರುವುದೇ ಈ ಎಲ್ಲಾ ಪ್ರಮಾದಗಳಿಗೆ ಕಾರಣವಾಗಿದೆ ಎನ್ನುವುದು ಕೃಷಿಕರ ದೂರಾಗಿದೆ.
ಆದ್ದರಿಂದ ಸಂಭವನೀಯ ಹೆಚ್ಚಿನ ಅವಘಡ ತಪ್ಪಿಸಲು ಸಂಬಂಧ ಪಟ್ಟ ಇಲಾಖೆ ಅಧಿಕಾರಿ ವರ್ಗ ಸ್ಥಳಕ್ಕೆ ಭೇಟಿ ನೀಡಿ, ಸೂಕ್ತ ಕ್ರಮಕ್ಕೆ ಮುಂದಾಗುವಂತೆ ರೈತ ರತ್ನಾಕರ ತಾಲ್ಲೂಕು ಆಡಳಿತವನ್ನು ಒತ್ತಾಯಿಸಿದ್ದಾರೆ.
ಕಾಮೆಂಟ್ಗಳಿಲ್ಲ