Sports Post

ಪುಸ್ತಕ ಖರೀದಿಗೆ ಇಲ್ಲಿ ಕ್ಲಿಕ್‌ ಮಾಡಿ

ಈಗ ಬಂದ ಸುದ್ದಿ...

ಸಕಲ ಸರ್ಕಾರಿ ಗೌರವಗಳೊಂದಿಗೆ ಪಂಚಭೂತದಲ್ಲಿ ಲೀನವಾದ ಸಂಕೂರಿನ ವೀರ ಯೋಧ ಜಿ.ಎಸ್‌.ಮಂಜುನಾಥ್‌ - ಕಂಬನಿ ಮಿಡಿದ ಹೊಸನಗರ ತಾಲ್ಲೂಕಿನ ಜನತೆ

ಹೊಸನಗರ : ತರಬೇತಿ ನೀಡುವ ವೇಳೆ ತಮ್ಮದೇ ಪ್ಯಾರಾಚೂಟ್ ತೆರೆಯದೇ ಮೃತರಾಗಿದ್ದ ಉತ್ತರ ಪ್ರದೇಶದ ಆಗ್ರಾ ವಾಯುಸೇನೆ ಪಿಟಿಎಸ್ ತರಬೇತಿ ಕೇಂದ್ರದ ಅಧಿಕಾರಿ ತಾಲ್ಲೂಕಿನ ಸಂಕೂರಿನ ಜಿ.ಎಸ್.ಮಂಜುನಾಥ್ ಅವರ ಪಾರ್ಥಿವ ಶರೀಶ ಶನಿವಾರ ರಾತ್ರಿ ಬೆಂಗಳೂರು ತಲುಪಿ, ಬಳಿಕ ಶಿವಮೊಗ್ಗದ ಮೂಲಕ ಇಂದು ಬೆಳಿಗ್ಗೆ 10-30ರ ಸುಮಾರಿಗೆ ಪಟ್ಟಣ ತಲುಪಿತು.

ನ್ಯೂಸ್‌ ಪೋಸ್ಟ್‌ಮಾರ್ಟಮ್ ಮಾಸಪತ್ರಿಕೆಯ PDF ಪ್ರತಿಯನ್ನು ಡೌನ್ಲೋಡ್ ಮಾಡಿಕೊಂಡು ಓದಲು ಕ್ಲಿಕ್ ಮಾಡಿ


ತಾಲ್ಲೂಕಿನ ಜೇನಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಂಕೂರು ಸಮೀಪದ ಗೋರನಗದ್ದೆ ವಾಸಿ ಕೃಷಿಕ ಜಿ.ಎಂ. ಸುರೇಶ್ ಅವರ ಪುತ್ರ ಮೃತ ಯೋಧ ಜಿ.ಎಸ್. ಮಂಜುನಾಥ್ (36) ಅವರ ಅಂತಿಮ ದರ್ಶನ ಪಡೆಯಲು ಪಟ್ಟಣದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ನೆರೆದಿದ್ದರು.

ವೀರ ಯೋಧನ ಪಾರ್ಥಿವ ಶರೀರ ಹೊತ್ತ ಭಾರತೀಯ ಸೇನಾ ವಾಹನ ಪಟ್ಟಣದ ಕೊಡಚಾದ್ರಿ ಸರ್ಕಾರಿ ಪ್ರಥಮದರ್ಜೆ ಕಾಲೇಜು ಸಮೀಪ ಆಗಮಿಸುತ್ತಿದ್ದಂತೆ ವಿವಿಧ ಸಂಘ-ಸಂಸ್ಥೆ ಪದಾಧಿಕಾರಿಗಳು, ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು, ಸರ್ಕಾರಿ ಇಲಾಖಾ ಸಿಬ್ಬಂದಿಗಳು ಸೇರಿದಂತೆ ಸಾವಿರಾರು ನಾಗರೀಕರು ರಸ್ತೆಯ ಇಕ್ಕೆಲದಲ್ಲಿ ನಿಂತು ವೀರ ಯೋಧ ’ಮಂಜುನಾಥ್ ಅಮರ್ ರಹೇ’ ಎಂಬ ಘೋಷಣೆ ಕೂಗುತ್ತಾ, ಯೋಧನ ಪಾರ್ಥಿವ ಶರೀರಕ್ಕೆ ಪುಷ್ಪ ನಮನದ ಮೂಲಕ ಅಶ್ರುತರ್ಪಣ ಸಲ್ಲಿಸುವ ದೃಶ್ಯ ಸಾಮಾನ್ಯವಾಗಿತ್ತು.

ಮೃತ ಯೋಧನ ಪಾರ್ಥಿವ ಶರೀರದ ಮೆರವಣಿಗೆಯು ಪಟ್ಟಣದ ಕೊಡಚಾದ್ರಿ ಕಾಲೇಜಿನಿಂದ ಆರಂಭಗೊಂಡು ಮಾವಿನಕೊಪ್ಪ ಸರ್ಕಲ್, ಹಳೇ ಕೋರ್ಟ್ ಸರ್ಕಲ್, ಬಸ್ ನಿಲ್ದಾಣ, ತಾಲ್ಲೂಕು ಕಚೇರಿ, ಶಿವಪ್ಪನಾಯ್ಕ ರಸ್ತೆಯ ಮೂಲಕ ಸಾಗಿ ಮೃತರ ಸ್ವಗ್ರಾಮ ಗೋರನಗದ್ದೆ ತಲುಪಿದಾಗ ಮಧ್ಯಾಹ್ನ ಸುಮಾರು ಗಂಟೆ ಒಂದಾಗಿತ್ತು. ಶನಿವಾರ ರಾತ್ರಿಯೇ ಗ್ರಾಮಕ್ಕೆ ಬೆಳಗಾವಿ ವಾಯುಪಡೆ ಸೈನಿಕರ ತುಕಡಿಯೊಂದು ಆಗಮಿಸಿ ಗ್ರಾಮದಲ್ಲಿ ಬೀಡು ಬಿಟ್ಟು ಮೃತರ ಅಂತ್ಯ ಸಂಸ್ಕಾರ ಕಾರ್ಯಕ್ಕೆ ನೆರವು ನೀಡಿತ್ತು. ತಹಶೀಲ್ದಾರ್ ರಶ್ಮಿ ನೇತೃತ್ವದಲ್ಲಿ ಸಿಪಿಐ ಗುರಣ್ಣ ಎಸ್. ಹೆಬ್ಬಾಳ್‌‌, ಪಿಎಸ್‌ಐ ಎಸ್.ಪಿ. ಪ್ರವೀಣ್‌ ಸೇರಿದಂತೆ ಹಲವು ಅಧಿಕಾರಿಗಳ ತಂಡ, ಮೃತ ಸೇನಾನಿ ಮಂಜುನಾಥರಿಗೆ ಸಕಲ ಸರ್ಕಾರಿ ಅಂತಿಮ ಗೌರವ ಸಲ್ಲಿಸಲು ಅಗತ್ಯ ಸಿದ್ಧತೆ ಮಾಡಿಕೊಂಡಿತ್ತು.

ಮೃತ ಯೋಧನ ಅಂತಿಮ ದರ್ಶನ ಪಡೆಯಲು ಆಗಮಿಸಿದ್ದ ಜನರ ಸಂಖ್ಯೆ ಹೆಚ್ಚಾಗಿ ಒತ್ತಡ ಹೆಚ್ಚಾಗುತ್ತಿದ್ದಂತೆ ಸಾರ್ವಜನಿಕ ದರ್ಶನಕ್ಕೆ ಸುಮಾರು 2 ಗಂಟೆಗೂ ಹೆಚ್ಚು ಕಾಲ ಅನುವು ಮಾಡಿಕೊಡಲಾಯಿತು. 

ಶಾಸಕ ಗೋಪಾಲಕೃಷ್ಣ ಬೇಳೂರು, ಪೊಲೀಸ್ ಇಲಾಖೆಗೆ ಮೃತ ಯೋಧನಿಗೆ ಅಂತಿಮ ಗೌರವ ಸಲ್ಲಿಸಲು ಸೂಚನೆ ನೀಡುತ್ತಿದ್ದಂತೆ, ಪೊಲೀಸ್ ಇಲಾಖೆ ಗಾಳಿಯಲ್ಲಿ ಮೂರು ಸುತ್ತು ಕುಶಾಲು ತೋಪು ಹಾರಿಸುವ ಮೂಲಕ ಮೃತರಿಗೆ ಗೌರವ ಸಲ್ಲಿಸಿತು. ನಂತರದಲ್ಲಿ ಬೆಳಗಾವಿ ವಾಯುಪಡೆ ಸೇನಾನಿಗಳು ಮೂರು ಸುತ್ತು ಕುಶಾಲು ತೋಪು ಹಾರಿಸಿ ಮೃತ ಯೋಧನಿಗೆ ಗೌರವ ಸಲ್ಲಿಸಿದರು.

ಮಾಜಿ ಸಚಿವ ಹರತಾಳು ಹಾಲಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್, ಜಿಲ್ಲಾ ಪೊಲೀಸ್ ಹೆಚ್ಚುವರಿ ವರಿಷ್ಠಾಧಿಕಾರಿ ಅನಿಲ್ ಕುಮಾರ್ ಭೂಮರೆಡ್ಡಿ, ಸಾಗರ ವಿಭಾಗಾಧಿಕಾರಿ ಯತೀಶ್. ಆರ್, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಆಲುವಳ್ಳಿ ವೀರೇಶ್, ತಾ.ಪಂ. ಮಾಜಿ ಸದಸ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ.ಚಂದ್ರಮೌಳಿ, ತಾಲ್ಲೂಕು ಬಿಜೆಪಿ ಅಧ್ಯಕ್ಷ ಮತ್ತಿಮನೆ ಸುಬ್ರಹ್ಮಣ್ಯ ಸೇರಿದಂತೆ ಸಾವಿರಾರು ಮಂದಿ ಅಗಲಿದ ಯೋಧನ ಅಂತಿಮ ದರ್ಶನ ಪಡೆದರು.

ನಿನ್ನೆಯಿಂದ ಇಡೀ ಗ್ರಾಮವೇ ಶೋಕಸಾಗರದಲ್ಲಿ ಮುಳುಗಿದ್ದು, ಮೃತ ಯೋಧನ ದೇಶ ಸೇವೆಯ ಕೆಚ್ಚನ್ನು ಕಣ್ಣೀರಿನೊಂದಿಗೆ ಮಾತುಗಳನ್ನಾಗಿಸುತ್ತಿದ್ದ ಗ್ರಾಮಸ್ಥರು ಯೋಧನ ಅಗಲಿಕೆಗೆ ಮರುಗುತ್ತಿದ್ದದ್ದು ಕಂಡು ಬಂತು.

ಅಗಲಿದ ಯೋಧನ ಪಾರ್ಥಿವ ಶರೀರಕ್ಕೆ ಸಹೋದರ ಯುವರಾಜ್ ಅಗ್ನಿ ಸ್ಪರ್ಶ ಮಾಡಿದರು. ವಾಯು ಸೇನಾ ಅಧಿಕಾರಿಗಳು ಮೃತ ಯೋಧನ ಕುಟುಂಬವರ್ಗಕ್ಕೆ ರಾಷ್ಟ್ರಧ್ವಜ ಹಸ್ತಾಂತರಿಸುವ ಮೂಲಕ ಸಕಲ ಸರ್ಕಾರಿ ಗೌರವಗಳೊಂದಿಗೆ ತಾಲ್ಲೂಕಿನ ವೀರ ಯೋಧ ಮಂಜುನಾಥ್‌ ಪಂಚಭೂತಗಳಲ್ಲಿ ಲೀನವಾದರು.

ಕಾಮೆಂಟ್‌ಗಳಿಲ್ಲ