ನಾಗರಕೊಡಿಗೆಯ ತ್ರಿಣಿವೆ ಸಹಕಾರಿ ಸಂಘದ ಆಡಳಿತ ಮಂಡಳಿ ನೂತನ ಅಧ್ಯಕ್ಷರಾಗಿ 4ನೇ ಬಾರಿಗೆ ಗುರುಶಕ್ತಿ ವಿದ್ಯಾಧರ ಮತ್ತು ಉಪಾಧ್ಯಕ್ಷರಾಗಿ 3ನೇ ಬಾರಿಗೆ ಎಸ್.ಡಿ. ಲಕ್ಷ್ಮಣಗೌಡ ಅವಿರೋಧ ಆಯ್ಕೆ
ಹೊಸನಗರ : ರಾಜ್ಯದ ಪ್ರತಿಷ್ಠಿತ ಸಹಕಾರಿ ಸಂಘಗಳಲ್ಲಿ ಒಂದಾದ ತಾಲ್ಲೂಕಿನ ನಾಗರಕೊಡಿಗೆಯ ತ್ರಿಣಿವೆ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸಿದ್ದ ಎಲ್ಲಾ 12 ನಿರ್ದೇಶಕರು ಅವಿರೋಧ ಆಯ್ಕೆಯಾದದ್ದು ವಿಶೇಷ. ಇಂದು ನಡೆದ ಸಂಘದ ಚುನಾವಣಾ ಪ್ರಕ್ರಿಯೆಯಲ್ಲಿ ಸತತ 4ನೇ ಬಾರಿಗೆ ಅಧ್ಯಕ್ಷರಾಗಿ ಹೆಚ್. ಎನ್. ವಿದ್ಯಾಧರ ಹಾಗೂ ಸತತ 3ನೇ ಬಾರಿಗೆ ಉಪಾಧ್ಯಕ್ಷರಾಗಿ ಎಸ್.ಡಿ. ಲಕ್ಷ್ಮಣ ಗೌಡ ಅವಿರೋಧವಾಗಿ ಆಯ್ಕೆಯಾದರು.
ನ್ಯೂಸ್ ಪೋಸ್ಟ್ಮಾರ್ಟಮ್ ಮಾಸಪತ್ರಿಕೆಯ PDF ಪ್ರತಿಯನ್ನು ಡೌನ್ಲೋಡ್ ಮಾಡಿಕೊಂಡು ಓದಲು ಕ್ಲಿಕ್ ಮಾಡಿ
ನೆಲ್ಲುಂಡೆ ಸಾಮಾನ್ಯ-ಸಾಲಗಾರರ ಕ್ಷೇತ್ರದಿಂದ ಎನ್.ಆರ್. ವರುಣ್, ಕಲ್ಲುವೀಡಿ ಅಬ್ಬಿಗಲ್ಲಿನ ಎಸ್ಟಿ/ಸಾಲಗಾರರ ಕ್ಷೇತ್ರದಿಂದ ಆರ್. ರಾಜಕುಮಾರ್, ತೊಗರೆ ಪ್ರವರ್ಗ ಎ ಸಾಲಗಾರರ ಕ್ಷೇತ್ರದಿಂದ ಟಿ.ಎನ್. ಶ್ರೀಪತಿ, ಕುಂಬತ್ತಿ ಸಾಮಾನ್ಯ ಮಹಿಳೆ ಸಾಲಗಾರರ ಕ್ಷೇತ್ರದಿಂದ ರಾಜಶ್ರೀ ಎಸ್. ರಾವ್, ತ್ರಿಣಿವೆ ಸಾಮಾನ್ಯ ಸಾಲಗಾರರ ಕ್ಷೇತ್ರದಿಂದ ಜಿ.ಎನ್. ಸುಧೀರ್, ತ್ರಿಣಿವೆ ಎಸ್ಸಿ/ಸಾಲಗಾರರ ಕ್ಷೇತ್ರದಿಂದ ಹಾಲಮ್ಮ, ತ್ರಿಣಿವೆಯ ಸಾಮಾನ್ಯ ಮಹಿಳೆ/ಸಾಲಗಾರರ ಕ್ಷೇತ್ರದಿಂದ ವಿಜಯಲಕ್ಷ್ಮೀ, ಹನಿಯಾ ಸಾಮಾನ್ಯ/ಸಾಲಗಾರರ ಕ್ಷೇತ್ರದಿಂದ ಎಸ್.ಎನ್. ಗುರುರಾಜ, ನೆಲ್ಲುಂಡೆ ಸಾಮಾನ್ಯ/ಸಾಲಗಾರರ ಕ್ಷೇತ್ರದಿಂದ ಎಸ್.ಎಂ. ವಿನಾಯಕ, ಬಿಳ್ಳೋಡಿ ಪ್ರವರ್ಗ ಬಿ/ಸಾಲಗಾರರ ಕ್ಷೇತ್ರದಿಂದ ಹೆಚ್.ಪಿ. ಉದಯಗೌಡ, ತೊಗರೆ ಸಾಮಾನ್ಯ/ಸಾಲಗಾರರಲ್ಲದ ಕ್ಷೇತ್ರದಿಂದ ಹೆಚ್.ಎನ್. ವಿದ್ಯಾಧರ ಹಾಗೂ ಸಾಲಗೇರಿ ಸಾಮಾನ್ಯ/ಸಾಲಗಾರರ ಕ್ಷೇತ್ರದಿಂದ ಎಸ್.ಡಿ. ಲಕ್ಷ್ಮಣ ಅವಿರೋಧ ಆಯ್ಕೆಯಾಗಿದ್ದಾರೆ. ಇವರಲ್ಲಿ ಎಸ್.ಎಂ. ವಿನಾಯಕ, ವಿಜಯಲಕ್ಷ್ಮೀ, ಉದಯ, ಗುರುರಾಜ ನೂತನ ನಿರ್ದೇಶಕರಾಗಿ ಆಯ್ಕೆಯಾದವರು.
ಆಯ್ಕೆ ಪ್ರಕ್ರಿಯೆ ನಂತರ, ಪತ್ರಕರ್ತರೊಂದಿಗೆ ಮಾತನಾಡಿದ ತ್ರಿಣಿವೆ ಸಹಕಾರಿ ಸಂಘದ ನೂತನ ಅಧ್ಯಕ್ಷ ಮತ್ತು ಶಿಮೂಲ್ ಅಧ್ಯಕ್ಷರೂ ಆದ ಗುರುಶಕ್ತಿ ವಿದ್ಯಾಧರ್, ಸಂಘ ಸ್ಥಾಪನೆಗೊಂಡು 75 ವಸಂತಗಳೇ ಸಂದಿದ್ದರೂ ಒಮ್ಮೆಯೂ ಚುನಾವಣೆ ಎದುರಿಸದೇ, ಪ್ರತಿ ಬಾರಿಯೂ ನಿರ್ದೇಶಕರು ಅವಿರೋಧ ಆಯ್ಕೆಯಾಗಿ ಆಡಳಿತ ಮಂಡಳಿ ರಚಿಸುವ ಮೂಲಕ ಸಂಘವು ರಾಜ್ಯದಲ್ಲೇ ವಿಶಿಷ್ಟ ಸಾಧನೆ ಮೆರೆದಿದೆ ಎಂದು ತಿಳಿಸಿದರು.
CLICK ಮಾಡಿ - ನಿಟ್ಟೂರು ಮರಕುಟಿಗ ಕ್ರಾಸ್ ಬಳಿ ಜೀಪ್ ಮತ್ತು ಟೆಂಪೋ ಟ್ರಾವೆಲರ್ ನಡುವೆ ಅಪಘಾತ
1949ರಲ್ಲಿ ಕೇವಲ ರೂ 1900 ಮೊತ್ತ ಶೇರು ಬಂಡವಾಳದಲ್ಲಿ ಆರಂಭಗೊಂಡಿದ್ದ ಸಂಘವು ಇಂದು ವಾರ್ಷಿಕ ರೂ 90 ಕೋಟಿ ವಹಿವಾಟು ನಡೆಸಿದೆ. ರೂ. 28 ಕೋಟಿ ಠೇವಣಿ ಸಂಗ್ರಹಿಸಿ, ರೂ 25 ಕೋಟಿ ಸಾಲ ನೀಡಿದೆ. ಬೆಳೆಸಾಲ, ಕೃಷಿಸಾಲ, ವಾಹನ ಸಾಲ, ಅಡಮಾನ ಸಾಲ, ಖಾತೆ ಮೇಲಿನ ಸಾಲ ಸೇರಿದಂತೆ ಹಲವು ಬಗೆಯ ಸಾಲ ಸೌಲಭ್ಯಗಳನ್ನು ಶೇರುದಾರರಿಗೆ ನೀಡಿ ಲಾಭದಲ್ಲಿ ಸಾಗಿದೆ. ಕೆಲವೇ ದಶಕಗಳ ಹಿಂದೆ ಕೇವಲ ರೂ. 28 ಕೋಟಿ ವಾರ್ಷಿಕ ವಹಿವಾಟು ನಡೆಸುತ್ತಿದ್ದ ಈ ಸಂಘಕ್ಕೆ ಬೆನ್ನೆಲುಬಾಗಿ ಸಹಕಾರಿ ಧುರೀಣ ಡಾ. ಆರ್. ಎಂ. ಮಂಜುನಾಥಗೌಡರು ನಿಂತ ಬಳಿಕ ಸಂಘವು ಸತತ ಯಶಸ್ಸು ಗಳಿಸಿದೆ. ಕುಗ್ರಾಮ ಒಂದರ ಸಹಕಾರಿ ಆಗಿದ್ದ ನನ್ನನ್ನು ಸಹ ರಾಜ್ಯಮಟ್ಟದಲ್ಲಿ ಗುರುತಿಸುವಂತೆ ಶಿಮೂಲ್ನಂಥ ಪ್ರತಿಷ್ಠಿತ ಸಂಸ್ಥೆಗೆ ಎರಡು ಬಾರಿ ಅಧ್ಯಕ್ಷನಾಗಿ ಆಯ್ಕೆ ಮಾಡಿ, ಕಾರ್ಯ ನಿರ್ವಹಿಸುವಂತೆ ಮಾಡಲು ಆರ್ಎಂಎಂ ಪ್ರೋತ್ಸಾಹವೇ ಕಾರಣವೆಂದರು.
ಗ್ರಾಮದ ಹಿರಿಯರ ದೂರದರ್ಶಿತ್ವದೊಂದಿಗೆ ಸ್ಥಾಪನೆಗೊಂಡಿದ್ದ ಈ ಸಂಘದ ಏಳಿಗೆಗೆ ತಾವು ಸದಾ ಕಟಿಬದ್ಧರಾಗಿದ್ದು, ನೂತನ ಆಡಳಿತ ಮಂಡಳಿ ಸಲಹೆ ಸಹಕಾರದೊಂದಿಗೆ ಸ್ವಚ್ಛ, ಶುದ್ಧ, ಪಾರದರ್ಶಕ ಆಡಳಿತವನ್ನು ಮುಂದೆಯೂ ನೀಡುವ ಭರವಸೆ ನೀಡಿದರು.
ಚುನಾವಣಾ ಅಧಿಕಾರಿಯಾಗಿ ತೋಟಗಾರಿಕೆ ಸಹಾಯಕ ನಿರ್ದೇಶಕ ಕರಿಬಸವನಾಯ್ಕ ಚುನಾವಣೆ ಪ್ರಕ್ರಿಯೆಗಳನ್ನು ಅಚ್ಚುಕಟ್ಟಾಗಿ ನಡೆಸಿಕೊಟ್ಟರು.
ಗ್ರಾಮಸ್ಥರಾದ ನಾಗರಕೊಡಿಗೆ ಗಣೇಶ್ ಮೂರ್ತಿ, ನಾಗರಕೊಡಿಗೆ ಬಸಪ್ಪಗೌಡ, ಸಂಘದ ಮಾಜಿ ನಿರ್ದೇಶಕ ಮೂಡಬಾಗಿಲು ರಮಾನಂದ, ಸದಾನಂದ, ನಾಗರಕೊಡಿಗೆ ಶಶಿಕುಮಾರ್, ಸಾಲಗೇರಿ ಗಣಪತಿ ಭಟ್, ತೊಗರೆ ಪ್ರಸಾದ್ ಭಟ್, ತೊಗರೆ ಹರೀಶ್ಗೌಡ ಮೊದಲಾದವರು ಇದ್ದರು.
ಕಾಮೆಂಟ್ಗಳಿಲ್ಲ