ಕೃಷಿ ಸಖಿಯರಿಗೆ ಮೂಲಭೂತ ಸೌಕರ್ಯ ಒದಗಿಸಲು ಹೊಸನಗರ ತಾಲ್ಲೂಕು ಶರಾವತಿ ಕೃಷಿ ಸಖಿಯರ ಒಕ್ಕೂಟ ಅಗ್ರಹ
ಹೊಸನಗರ : ಕೃಷಿ ಸಖಿಯರನ್ನು ಕೃಷಿ ಇಲಾಖೆಯ ವ್ಯಾಪ್ತಿಗೆ ಸೇರ್ಪಡೆಗೊಳಿಸುವುದು ಸೇರಿದಂತೆ ಹಲವು ಮೂಲಭೂತ ಸೌಕರ್ಯ ಒದಗಿಸುವಂತೆ ಆಗ್ರಹಿಸಿ ಹೊಸನಗರ ತಾಲ್ಲೂಕು ಶರಾವತಿ ಕೃಷಿ ಸಖಿಯರ ಒಕ್ಕೂಟದವರು ಇಂದು ಸಚಿವರು, ಸಂಸದರು ಹಾಗೂ ಶಾಸಕರಿಗೆ ಮನವಿ ಸಲ್ಲಿಸಿದರು.
ಕರ್ನಾಟಕ ರಾಜ್ಯ ರಾಷ್ಟ್ರೀಯ ಜೀವನೋಪಾಯ ಅಭಿಯಾನ ಸಂಜೀವಿನಿ ಯೋಜನೆಯಡಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ತರಬೇತಿ ಪಡೆದು, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕೃಷಿ ಸಖಿಯರಾಗಿ ಕಳೆದ ಎರಡು ಮೂರು ವರ್ಷಗಳಿಂದ ಕನಿಷ್ಠ ಗೌರವಧನದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಗ್ರಾಮ ಪಂಚಾಯಿತಿ ಮಟ್ಟದ ಗ್ರಾಮೀಣ ಪ್ರದೇಶದ ಕುಗ್ರಾಮಗಳಿಗೂ ಭೇಟಿ ನೀಡಿ ಆನ್ಲೈನ್ ಆಫ್ ಲೈನ್ ಸೇವೆ ಸಲ್ಲಿಸುತ್ತಿದ್ದಾರೆ. ಸರ್ಕಾರದ ಕಾರ್ಯಕ್ರಮಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಗ್ರಾಮೀಣ ಜನರಿಗೆ ತಲುಪಿಸಲು ಕೃಷಿ ಇಲಾಖೆ ವ್ಯಾಪ್ತಿಗೆ ಕೃಷಿ ಸಖಿಯರನ್ನು ಸೇರ್ಪಡೆಗೊಳಿಸುವ ಮೂಲಕ ಸರ್ಕಾರಿ ಸೌಲಭ್ಯಗಳನ್ನು ಎಲ್ಲ ವರ್ಗದವರಿಗೂ ಒದಗಿಸುವ ನಿಟ್ಟಿನಲ್ಲಿ ತಮ್ಮ ಕನಿಷ್ಠ ಬೇಡಿಕೆಗಳನ್ನು ಕಲ್ಪಿಸಿಕೊಡಬೇಕೆಂದು ಆಗ್ರಹಿಸಿ, ಇಂದು ಕೃಷಿ ಸಚಿವರಿಗೆ, ಶಾಸಕರು, ಅರಣ್ಯ ಮತ್ತು ಕೈಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಬೇಳೂರು ಗೋಪಾಲಕೃಷ್ಣ, ಶಾಸಕ ಆರಗ ಜ್ಞಾನೇಂದ್ರ, ಸಂಸದರಾದ ಬಿ. ವೈ. ರಾಘವೇಂದ್ರ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕರಿಗೆ ಹೊಸನಗರ ತಾಲ್ಲೂಕು ಶರಾವತಿ ಕೃಷಿ ಸಖಿಯರ ಒಕ್ಕೂಟದ ಗೌರವಾಧ್ಯಕ್ಷೆ ಹೆಚ್. ಜೆ. ಜಯಲಕ್ಷ್ಮಿ, ಅಧ್ಯಕ್ಷೆ ಕೆ. ಸುಪ್ರೀತ, ಪ್ರಧಾನ ಕಾರ್ಯದರ್ಶಿ ಹೆಚ್. ಎಂ. ಗಾಯತ್ರಿ ಮತ್ತಿತರ ಪದಾಧಿಕಾರಿಗಳು ಮನವಿ ಸಲ್ಲಿಸಿದರು.
ಕೃಷಿ ಸಖಿಯರನ್ನು ಕೃಷಿ ಇಲಾಖೆಯ ವ್ಯಾಪ್ತಿಗೆ ಸೇರ್ಪಡೆಗೊಳಿಸಬೇಕು, ಕೃಷಿ ಸಖಿಯರಿಗೆ ಗುರುತಿನ ಚೀಟಿ ಒದಗಿಸಬೇಕು, ಸರ್ಕಾರ ಗೌರವಧನವನ್ನು ನೇರವಾಗಿ ಸಖಿಯರಿಗೆ ತಲುಪಿಸಬೇಕು ಹಾಗೂ ವೇತನವನ್ನು 25 ಸಾವಿರ ರೂ.ಗಳಿಗೆ ನಿಗದಿಗೊಳಿಸಬೇಕು, ಸಖಿಯರಿಗೆ ವೇತನ ಸಹಿತ ಹೆರಿಗೆ ರಜೆ ನೀಡಬೇಕು, ಪ್ರಯಾಣ ಭತ್ಯೆಯನ್ನು 3000 ರೂ. ಗಳಿಗೆ ಹೆಚ್ಚಿಸಬೇಕು, ಇಎಸ್ಐ ಹಾಗೂ ಪಿಎಫ್ ಸೌಲಭ್ಯ ಒದಗಿಸಬೇಕು, ಆನ್ಲೈನಿನಲ್ಲಿ ಕರ್ತವ್ಯ ನಿರ್ವಹಿಸಲು ಉತ್ತಮ ಗುಣಮಟ್ಟದ ಸ್ಮಾರ್ಟ್ ಫೋನ್ ಅಥವಾ ಲ್ಯಾಪ್ ಟಾಪ್ ಒದಗಿಸಬೇಕು ಹಾಗೂ ಸಖಿಯರಿಗೆ ಸೇವಾ ಭದ್ರತೆ ನೀಡಬೇಕು ಸೇರಿದಂತೆ ಹಲವು ಬೇಡಿಕೆಗಳು ಮನವಿ ಪತ್ರದಲ್ಲಿದ್ದವು.
ಕಾಮೆಂಟ್ಗಳಿಲ್ಲ