ಹೊಸನಗರ ಜಿಮ್ಮಿ ಜಾರ್ಜ್ ವಾಲಿಬಾಲ್ ಸಂಸ್ಥೆಯ ಉಚಿತ ವಾಲಿಬಾಲ್ ತರಬೇತಿ ಶಿಬಿರಕ್ಕೆ ಚಾಲನೆ
ಹೊಸನಗರ : ಯಾವುದೇ ಕ್ರೀಡಾ ತರಬೇತಿ ಶಿಬಿರಗಳು ಕ್ರೀಡೆಯನ್ನು ಪ್ರೋತ್ಸಾಹಿಸುವಂತಹ ಒಂದು ಒಳ್ಳೆಯ ಕಾರ್ಯಕ್ರಮವಾಗಿದೆ. ಈ ನಿಟ್ಟಿನಲ್ಲಿ ಹೊಸನಗರ ಜಿಮ್ಮಿ ಜಾರ್ಜ್ ವಾಲಿಬಾಲ್ ಸಂಸ್ಥೆ ರಾಷ್ಟ್ರೀಯ ತರಬೇತುದಾರರಾದ ದಿವಂಗತ ಜಾನ್ ವಿಲ್ಸನ್ ಗೋನ್ಸಾಲ್ವಿಸ್ ಅವರ ಸ್ಮರಣಾರ್ಥ ಈ ವಾಲಿಬಾಲ್ ತರಬೇತಿ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಮ್ಮಿ ಜಾರ್ಜ್ ವಾಲಿಬಾಲ್ ಸಂಸ್ಥೆಯ ಅಧ್ಯಕ್ಷರಾದ ಎಂ. ಎನ್. ಸುಧಾಕರ್ ತಿಳಿಸಿದರು.
ಉಚಿತ ವಾಲಿಬಾಲ್ ತರಬೇತಿ ಶಿಬಿರಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ಬಹಳಷ್ಟು ವರ್ಷಗಳಿಂದ ಹೊಸನಗರದ ಜಿಮ್ಮಿ ಜಾರ್ಜ್ ವಾಲಿಬಾಲ್ ಸಂಸ್ಥೆ ಹಲವಾರು ಕ್ರೀಡಾಪಟುಗಳಿಗೆ ಪೂರಕವಾಗುವಂತಹ ಇಂತಹ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಲೇ ಬಂದಿದೆ. ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಕ್ರೀಡಾಕೂಟಗಳನ್ನು ಆಯೋಜಿಸಿ ಯಶಸ್ವಿಯಾದಂತಹ ಈ ಸಂಸ್ಥೆ, ಇದರ ಪದಾಧಿಕಾರಿಗಳು, ಸದಸ್ಯರು ಹಾಗೂ ಹಲವು ದಾನಿಗಳ ಸಹಕಾರದಿಂದ ಇಂತಹ ವಿಶೇಷ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಿದೆ ಎಂದರು.
ಪೋಷಕರು ಸಹ ಶಿಕ್ಷಣಕ್ಕೆ ಎಷ್ಟು ಆದ್ಯತೆಯನ್ನು ನೀಡುತ್ತಾರೋ ಕ್ರೀಡೆಗೂ ಸಹ ಅಷ್ಟೇ ಆದ್ಯತೆಯನ್ನು ನೀಡಬೇಕು. ದೇಶದ ಅತ್ಯುನ್ನತ ಹುದ್ದೆಗಳನ್ನು ಅಲಂಕರಿಸಿರುವವರಲ್ಲಿ ಬಹಳಷ್ಟು ಕ್ರೀಡಾಪಟುಗಳು ಇದ್ದಾರೆ ಎನ್ನುವುದನ್ನು ಪೋಷಕರು ಅರ್ಥ ಮಾಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಸಂಸ್ಥೆ ಪ್ರತಿ ವರ್ಷವೂ ಇಂತಹದ್ದೊಂದು ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದೆ ಎಂದರು.
ಈ ಸಂದರ್ಭದಲ್ಲಿ ತಾಲ್ಲೂಕು ದಂಡಾಧಿಕಾರಿಗಳಾದ ರಶ್ಮಿ ಹೆಚ್.ಜೆ, ಸಂಸ್ಥೆಯ ಮಾಜಿ ಅಧ್ಯಕ್ಷ ಇಲಿಯಾಸ್, ಎಂ.ಪಿ. ಸುರೇಶ್, ಪಟ್ಟಣ ಪಂಚಾಯಿತಿ ಸದಸ್ಯ ಗುರುರಾಜ್, ನಾಗೇಶ್, ಉಷಾ ಗೋನ್ಸಾಲ್ವಿಸ್ ಮುಂತಾದವರು ಉಪಸ್ಥಿತರಿದ್ದರು.
ಕಾಮೆಂಟ್ಗಳಿಲ್ಲ