ಗಾಂಧಿ - ಶಾಸ್ತ್ರಿ ಜಯಂತಿ ಅಂಗವಾಗಿ ಬಟ್ಟೆಮಲ್ಲಪ್ಪದಲ್ಲಿ ವಿದ್ಯಾರ್ಥಿಗಳಿಂದ ಶ್ರಮದಾನ | ಗಾಂಧೀ ಮತ್ತು ಸೇವೆ ಸಾರ್ವಕಾಲಿಕ ಸತ್ಯಗಳು - ಮಂಜುನಾಥ. ಕೆ. ಆರ್
ಹೊಸನಗರ : ಸೇವೆ ಮತ್ತು ಅಹಿಂಸೆ ತತ್ವಗಳು ಜಗತ್ತಿಗೆ ಗಾಂಧೀಜಿ ನೀಡಿದ ಸಾರ್ವಕಾಲಿಕ ಸತ್ಯಗಳು ಎಂದು ಹರಿದ್ರಾವತಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುನಾಥ್ ಕೆ. ಆರ್ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಬಟ್ಟೆಮಲ್ಲಪ್ಪ ಗ್ರಾಮದ ಸರ್ಕಲ್ಲಿನಲ್ಲಿ ಮಹಾತ್ಮ ಗಾಂಧಿ ಮತ್ತು ಶಾಸ್ತ್ರಿ ಅವರ ಜಯಂತಿ ಅಂಗವಾಗಿ ಇಲ್ಲಿನ ಶ್ರೀ ವ್ಯಾಸ ಮಹರ್ಷಿ ಗುರುಕುಲ ಹಾಗೂ ಚೆನ್ನಮ್ಮಾಜಿ ಪ್ರೌಢ ಶಾಲೆ ಸಂಯುಕ್ತವಾಗಿ ಹಮ್ಮಿಕೊಂಡಿದ್ದ ಶ್ರಮದಿನಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ಗಾಂಧೀಜಿ ಅವರ ಬಗ್ಗೆ ದಿನಕ್ಕೊಂದು ಕಥೆಗಳು ಹುಟ್ಟಿಕೊಳ್ಳುತ್ತಿವೆ. ಆದರೆ ಇತಿಹಾಸ ಎಂದೂ ಒಂದೇ ಆಗಿರುತ್ತದೆ. ಅದನ್ನು ತಿರುಚುವುದರಿಂದ ಯಾವುದೇ ಉಪಯೋಗ ಭಾರತಕ್ಕಾಗಲಿ, ಜಗತ್ತಿಗಾಗಲಿ ಇಲ್ಲವೇ ಮನುಷ್ಯ ಕುಲಕ್ಕಾಗಲಿ ಆಗುವುದಿಲ್ಲ. ಹೀಗಾಗಿ ಗಾಂಧಿಯವರ ಕುರಿತ ತಪ್ಪು ಕಲ್ಪನೆ ಮತ್ತು ಅಪಪ್ರಚಾರದಿಂದ ಹೊರಬರಬೇಕಿದೆ. ಗಾಂಧಿ ಹಾಗೂ ಶಾಸ್ತ್ರೀ ಜಗತ್ತಿನ ಎರಡು ಅಮೂಲ್ಯ ರತ್ನಗಳು ಎಂದರು.
ಶಾಂತಿ ಮತ್ತು ಸೇವೆಯ ಮೂಲಕ ಏನನ್ನು ಬೇಕಾದರೂ ಗೆಲ್ಲಬಹುದು ಎಂದು ತೋರಿಸಿಕೊಟ್ಟವರು ಮಹಾತ್ಮ ಗಾಂಧೀಜಿ. ಹೀಗಾಗಿ ಇಂದಿನ ತಲೆಮಾರಿಗೆ ಗಾಂಧೀಜಿ ಅವರ ತತ್ವ ಮತ್ತು ಆದರ್ಶಗಳು ದಾರಿ ದೀಪವಾಗಿವೆ ಎಂದು ಪಂಚಾಯಿತಿ ಅಭಿವೃದ್ದಿ ಅಧಿಕಾರಿ ರಾಘವೇಂದ್ರ ಹೇಳಿದರು.
ಭಾರತದ ಪ್ರಜಾಪ್ರಭುತ್ವ ಮತ್ತು ಜಾತ್ಯತೀತ ತತ್ವಗಳು ಜೀವಂತ ಉಳಿಯಬೇಕಾದರೆ ಗಾಂಧೀಜಿ ವಿಚಾರಧಾರೆಗಳು ನಿತ್ಯ ನೂತನ ಆಗಬೇಕಿವೆ ಎಂದ ಪಿಡಿಓ, ಮಕ್ಕಳು ಹೆಚ್ಚು ಹೆಚ್ಚು ಗಾಂಧೀ ವಿಚಾರಧಾರೆಗಳನ್ನು ಅರಿಯಬೇಕು ಎಂದರು.
ಈ ಸಂದರ್ಭದಲ್ಲಿ ಪಂಚಾಯಿತಿ ಸದಸ್ಯರಾದ ಗುರುಮೂರ್ತಿ ಒಡ್ಡಿಮನೆ, ಸಂತೋಷ, ಗುರುಕುಲ ಅಧ್ಯಕ್ಷ ಮಂಜುನಾಥ್ ಎಸ್. ಬ್ಯಾಣದ, ಮುಖ್ಯ ಶಿಕ್ಷಕರಾದ ಶಿವರಾಜ್, ಸಂಸ್ಥೆ ಕಾರ್ಯದರ್ಶಿ ರಶ್ಮಿ, ಚೆನ್ನಮ್ಮಾಜಿ ಶಾಲೆಯ ಮುಖ್ಯ ಶಿಕ್ಷಕ ಶಿವಾನಂದ್, ಪರುಶುರಾಮ ಮತ್ತು ಎರಡೂ ಸಂಸ್ಥೆಯ ಶಿಕ್ಷಕರು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಬಟ್ಟೆಮಲ್ಲಪ್ಪ ಸರ್ಕಲ್ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಎರಡೂ ಶಿಕ್ಷಣ ಸಂಸ್ಥೆಯ ಮಕ್ಕಳು ಮತ್ತು ಸಿಬ್ಬಂದಿ ಸ್ವಚ್ಚತಾ ಕಾರ್ಯ ಕೈಗೊಂಡರು.
ಕಾಮೆಂಟ್ಗಳಿಲ್ಲ