Sports Post

ಪುಸ್ತಕ ಖರೀದಿಗೆ ಇಲ್ಲಿ ಕ್ಲಿಕ್‌ ಮಾಡಿ

ಈಗ ಬಂದ ಸುದ್ದಿ...

ಹುಂಚದಲ್ಲಿ 4ನೇ ವರ್ಷದ ಉಚಿತ ನವೋದಯ - ಮೊರಾರ್ಜಿ ಶಾಲಾ ಪ್ರವೇಶ ಪರೀಕ್ಷಾ ತರಬೇತಿ ಶಿಬಿರಕ್ಕೆ ಚಾಲನೆ

ಹೊಸನಗರ : ಪರಮ ಪೂಜ್ಯ ಗುರುಗಳಾದ ಶ್ರೀ ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿಯವರ ಆಶೀರ್ವಾದದೊಂದಿಗೆ ಹುಂಚದಲ್ಲಿ ನಾಲ್ಕನೇ ವರ್ಷದ ನವೋದಯ ಮತ್ತು ಮೊರಾರ್ಜಿ ಶಾಲಾ ಪ್ರವೇಶ ಪರೀಕ್ಷೆಗಳ ಉಚಿತ ತರಬೇತಿ ಶಿಬಿರಕ್ಕೆ ಇತ್ತೀಚೆಗೆ ಚಾಲನೆ ನೀಡಲಾಯಿತು. 

ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಮುಖ್ಯ ಶಿಕ್ಷಕರಾದ ಮಂಜಪ್ಪ ಗುಳುಕೊಪ್ಪ ಅವರು ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆಗಳು ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಪೂರಕವಾಗಿದೆ ಎಂದರು. ಜೊತೆಗೆ 5ನೇ ತರಗತಿಯಲ್ಲೇ ಇದನ್ನು ಎದುರಿಸಲು ಉತ್ತಮವಾದ ವೇದಿಕೆ ಕಲ್ಪಿಸಿದ ನವೋದಯ ಹಳೆ ವಿದ್ಯಾರ್ಥಿ ಬಳಗ ಮತ್ತು ಹುಂಚ ಯುವ ತಂಡವನ್ನು ಶ್ಲಾಘಿಸಿದರು.

CLICK ಮಾಡಿ - ನಾಲ್ಕು ವರ್ಷಗಳ ನಂತರ ಹೊಸನಗರದಲ್ಲಿ ಪುನರಾರಂಭಗೊಂಡ ಪ್ರಧಾನಮಂತ್ರಿ ಜನೌಷಧಿ ಕೇಂದ್ರ

ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ನವೋದಯ ಮತ್ತು ಮೊರಾರ್ಜಿ ಶಾಲಾ ಪ್ರವೇಶ ಪರೀಕ್ಷಾ ಉಚಿತ ತರಬೇತಿ ಶಿಬಿರದ ಸಂಸ್ಥಾಪಕರಾದ ಕಾಗ್ನಿಜೆಂಟ್‌ ಉದ್ಯೋಗಿ ಪ್ರಕಾಶ್ ಜೋಯ್ಸ್ ಮಾತನಾಡಿ, ನವೋದಯ ಮತ್ತು ಮೊರಾರ್ಜಿ ವಸತಿ ಶಾಲೆಗಳು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅತ್ಯುತ್ತಮ ಶಿಕ್ಷಣ ಯೋಜನೆಗಳು. ನಮ್ಮ ಶಿಬಿರದ ಮೂಲ ಉದ್ದೇಶ, ಮಕ್ಕಳ ಕಲಿಕಾ ಜ್ಞಾನವನ್ನು ವೃದ್ಧಿಸುವುದು ಮತ್ತು ಸ್ಪರ್ಧಾತ್ಮಕ ಪರೀಕ್ಷೆಗೆ ಬೇಕಾದ ಜ್ಞಾನ, ಸಲಹೆ, ಸೂಚನೆಗಳನ್ನು ಈ ಕಾರ್ಯಕ್ರಮದ ಮೂಲಕ ಮಕ್ಕಳಲ್ಲಿ ಮತ್ತು ಪೋಷಕರಲ್ಲಿ ಮನವರಿಕೆ ಮಾಡಿಕೊಡುವುದು ಎಂದು ವಿವರಿಸಿದರು.

CLICK ಮಾಡಿ -5 ರಿಂದ 18 ವರ್ಷದೊಳಗಿನ ಮಕ್ಕಳಿಗೆ ಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿ - ಅರ್ಜಿ ಆಹ್ವಾನ

ಈ ಸಂದರ್ಭದಲ್ಲಿ ದ್ವಿತೀಯ ವರ್ಷದ ಶಿಬಿರದಲ್ಲಿ ಭಾಗಿಯಾದ ಎಲ್ಲಾ ಮಕ್ಕಳಿಗೆ ಅಭಿನಂದನಾ ಪತ್ರ ಮತ್ತು ಪರಿಸರ ಜಾಗೃತಿ ಮೂಡಿಸುವ ಉದ್ದೇಶದಿಂದ ನೆಡಲು ಸಸಿಗಳನ್ನು ಕೊಡಲಾಯಿತು. ಶಿಬಿರದ ಮೂಲಕ ಸಾಧನೆ ಮಾಡಿದ ಮಕ್ಕಳು ಮತ್ತು ಪೋಷಕರು ವೇದಿಕೆಯಲ್ಲಿ ತಮ್ಮ ಸಂತಸ ಹಾಗೂ ಅನಿಸಿಕೆಗಳನ್ನು ಹಂಚಿಕೊಂಡರು. ಮಕ್ಕಳ ಪ್ರೇರಣೆಗೆ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ಟೀಶರ್ಟ್, ನೋಟ್‌ಬುಕ್‌, ಪೆನ್, ಹಣ ಉಳಿತಾಯ ಹುಂಡಿ ಮತ್ತು ಅಧ್ಯಯನ ಸಾಮಾಗ್ರಿಗಳನ್ನು ಒಳಗೊಂಡ ’ಸ್ವಾಗತ ಕಿಟ್’ನ್ನು ನೀಡಲಾಯಿತು.

ಈ ಸಮಾರಂಭದಲ್ಲಿ ಶಿಬಿರದ ಯಶಸ್ಸಿಗೆ ಕಾರಣರಾದ ಶಿಬಿರದ ಸಂಚಾಲಕರಾದ ಪ್ರಕಾಶ್ ಜೋಯ್ಸ್, ಅಭಿಷೇಕ್, ಸಂಜಯ್, ನಾಗೇಶ್ ನಾಯ್ಕ್, ವಿನಯ್, ಶ್ರೀಕಾಂತ್, ಲಕ್ಷಣ್, ಶಿಕ್ಷಕರಾದ ಸಂತೋಷ್, ನವೀನ್, ಪ್ರಶಾಂತ್, ಆದಿತ್ಯ, ದಿನೇಶ್, ಶಿವಕುಮಾರ್, ಪ್ರಶಾಂತ್ ವಿ, ಅಕ್ಷತಾ, ಸವಿತಾ, ಶ್ರೀಕಾಂತ್ ಉಡುಪ, ಶ್ವೇತಾ, ಹಳೆ ನವೋದಯ ವಿದ್ಯಾರ್ಥಿಗಳಾದ ಪುನೀತ್, ಕೆ. ಎಂ. ಸುನಿಲ್, ರಮ್ಯಾ ರಾವ್, ಸಿಂಧು ಇವರೆಲ್ಲರ ಸಾಮಾಜಿಕ ಕಳಕಳಿ, ಕಾರ್ಯವನ್ನು ಶ್ಲಾಘಿಸಿ ಸನ್ಮಾನಿಸಲಾಯಿತು.

ಹುಂಚ ಜೈನ ಮಠದ ಕಾರ್ಯನಿರ್ವಾಹಕರಾದ ಪ್ರಕಾಶ್ ಮಗದಂ, ಊರಿನ ಹಿರಿಯರಾದ ಗೋಪಾಲರಾವ್ ಸಮಾರಂಭದಲ್ಲಿ ಉಪಸ್ಥಿತರಿದ್ದರು.

ತಾಲ್ಲೂಕಿನ ನವೋದಯ ಹಳೇ ವಿದ್ಯಾರ್ಥಿಗಳ ಪ್ರಶಂಸಾರ್ಹ ಕೆಲಸ

ತಾಲ್ಲೂಕಿನ ಹುಂಚದಲ್ಲಿ ನವೋದಯ ಮತ್ತು ಮೊರಾರ್ಜಿ ಶಾಲಾ ಪ್ರವೇಶ ಪರೀಕ್ಷೆಗಾಗಿ ಉಚಿತ ತರಬೇತಿ ಶಿಬಿರ 2021ರಲ್ಲಿ ಆರಂಭವಾಗಿದ್ದು, ಮಲೆನಾಡಿನ ಭಾಗದ ಈಗಾಗಲೇ ಪರೀಕ್ಷೆಗೆ ದಾಖಲಿಸಿಕೊಂಡ ವಿದ್ಯಾರ್ಥಿಗಳಿಗೆ ಉಚಿತವಾಗಿ ನವೋದಯ ಮತ್ತು ಮೊರಾರ್ಜಿ ಶಾಲೆಯ ಪರಿಚಯ, ಆಯ್ಕೆ ಪ್ರಕ್ರಿಯೆ ಮಾಹಿತಿ, ಕೋಚಿಂಗ್, ಮಾದರಿ ಪರೀಕ್ಷೆ, ಕಲಿಕಾ ಸಾಮಾಗ್ರಿಗಳು, ಸಮಯ ನಿರ್ವಹಣೆ ಮತ್ತು ಇತರೆ ಉಪಯುಕ್ತ ಮಾಹಿತಿಗಳನ್ನು ಉಚಿತವಾಗಿ ನೀಡುತ್ತಾ ಬರಲಾಗುತ್ತಿದೆ.

ಕಳೆದ ಮೂರು ವರ್ಷಗಳ ಶಿಬಿರದಲ್ಲಿ 209 ಮಕ್ಕಳು, 20ಕ್ಕೂ ಹೆಚ್ಚು ವಿವಿಧ ಶಾಲೆಗಳಿಂದ ಭಾಗವಹಿಸಿದ್ದು, 6 ಮಕ್ಕಳು ನವೋದಯ ಶಾಲೆಗೆ ಮತ್ತು 42 ಮಕ್ಕಳು ಮೊರಾರ್ಜಿ ಶಾಲೆಯ ಪ್ರವೇಶ ಪರೀಕ್ಷೆಯಲ್ಲಿ ತೇರ್ಗಡೆ ಆಗಿರುತ್ತಾರೆ. ಒಟ್ಟಾರೆ ಶಿಬಿರದಿಂದ 48 ಮಕ್ಕಳು, ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಒಟ್ಟು 1.68 ಕೋಟಿ ಮೌಲ್ಯದ ಶೈಕ್ಷಣಿಕ ಪ್ರಯೋಜನವನ್ನು ಪಡೆದುಕೊಂಡಿರುತ್ತಾರೆ. ಪ್ರಾರಂಭದಿಂದಲೂ ನವೋದಯದ ಹಳೇ ವಿದ್ಯಾರ್ಥಿಗಳ ಈ ತಂಡವು ಎಲ್ಲಾ ಸಂವಹನಗಳಿಗಾಗಿ ವಾಟ್ಸಪ್‌‌ ಗುಂಪನ್ನು ರಚಿಸಿ, ಆಸಕ್ತ ಪೋಷಕರಿಗೆ ಸ್ಪರ್ಧಾತ್ಮಕ ಪರೀಕ್ಷೆಯ ಬಗ್ಗೆ ಮಾಹಿತಿ ನೀಡುತ್ತಾ ಬರುತ್ತಿದೆ.

ಪ್ರಸಕ್ತ ಸಾಲಿನ ಶಿಬಿರಕ್ಕೆ ಹುಂಚ ಸುತ್ತಮುತ್ತಲಿನ 22ಕ್ಕೂ ಹೆಚ್ಚು ಶಾಲೆಗಳಿಂದ ಒಟ್ಟು 72 ಮಕ್ಕಳುಹೆಸರು ನೋಂದಾಯಿಸಿದ್ದು, ಶಿಬಿರ ಇದೇ ತಿಂಗಳಿನಿಂದ ಆರಂಭವಾಗಲಿದೆ. ಸತತ ನಾಲ್ಕು ತಿಂಗಳು, ಪ್ರತಿ ಭಾನುವಾರ ಮಕ್ಕಳಿಗೆ ಪ್ರವೇಶ ಪರೀಕ್ಷೆಗೆ ಉತ್ತಮ ತರಬೇತಿ ನೀಡಲಾಗುತ್ತದೆ.

ಜವಾಹರ ನವೋದಯ ವಿದ್ಯಾಲಯ ಗಾಜನೂರು 2025-26ನೇ ಸಾಲಿಗೆ 6ನೇ ತರಗತಿಗೆ ಪ್ರವೇಶ ಪಡೆಯಲು ಆನ್ ಲೈನ್ (ONLINE) ಅರ್ಜಿಗಳನ್ನು ಆಹ್ವಾನಿಸಲಾಗಿದೆ.

✅ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 16-09-2024

✅ ಪರೀಕ್ಷೆಯ ದಿನಾಂಕ 18-01-2025

✅ ಪರೀಕ್ಷೆಯ ಸಮಯ- ಬೆಳಿಗ್ಗೆ 11.30 ರಿಂದ 1.30 ರ ವರೆಗೆ

ಕಾಮೆಂಟ್‌ಗಳಿಲ್ಲ