Sports Post

ಪುಸ್ತಕ ಖರೀದಿಗೆ ಇಲ್ಲಿ ಕ್ಲಿಕ್‌ ಮಾಡಿ

ಈಗ ಬಂದ ಸುದ್ದಿ...

ಶ್ರೀಕ್ಷೇತ್ರ ಹೊಂಬುಜದಲ್ಲಿ ಗುರುಪೂರ್ಣಿಮೆ - ಗುರು ಎಂದರೆ ಭಗವಂತ : ಪರಮಪೂಜ್ಯ ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ

ರಿಪ್ಪನ್‌ಪೇಟೆ : ಜೈನಾಗಮದ ಶಾಸ್ತ್ರದಲ್ಲಿ ಶ್ರೀ ಮಹಾವೀರ ತೀರ್ಥಂಕರರು ಸಮವಸರಣದಲ್ಲಿ ವಿರಾಜಮಾನರಾಗಿದ್ದಾಗ ಅವರು ಸಮಸ್ತರಿಗೂ ಗುರು ಆಗಿದ್ದರೆಂಬ ಉಲ್ಲೇಖವಿದೆ. ಉತ್ಕೃಷ್ಟ ಮೌಲ್ಯಗಳ ಪರಿಪಾಲನೆಗೆ ಶ್ರೀ ಮಹಾವೀರರ ಉಪದೇಶಗಳು ಗುರುಸ್ಥಾನದಲ್ಲಿ ತಿಳಿಸಿದ ಮುಕ್ತಿ ಪಥದಲ್ಲಿ ಆಚರಿಸಲ್ಪಡುವ ನಿಯಮಗಳಷ್ಟೇ ಅಲ್ಲದೇ, ಶಾಂತಿ ನೆಮ್ಮದಿಯ ಆರೋಗ್ಯಪೂರ್ಣ ಜೀವನ ನಿರ್ವಹಣೆಗೆ ನೀಡಿದ ಧರ್ಮಸಂದೇಶವಾಗಿದೆ. ಆಷಾಢ ಶುದ್ಧ ಪೂರ್ಣಿಮೆಯಂದು ಗುರುಪೂರ್ಣಿಮಾ ಎಂದು ಆಚರಿಸುವುದು ಅಂದಿನಿಂದ ಆರಂಭವಾಯಿತು ಎಂದು ಹೊಂಬುಜ ಜೈನ ಮಠದ ಪೀಠಾಧೀಶರಾದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳು ತಿಳಿಸಿದರು. 

ಇತ್ತೀಚೆಗೆ ಹೊಂಬುಜದಲ್ಲಿ ಗುರು ಪೂರ್ಣಿಮೆಯ ವಿಶೇಷ ಪೂಜೆ ನೆರವೇರಿದ ಬಳಿಕ ಭಕ್ತವೃಂದದವರನ್ನು ಆಶೀರ್ವದಿಸಿ ಶ್ರೀಗಳು ಪ್ರವಚನ ನೀಡಿದರು.

ನೋಂಪಿ ಆಚರಣೆಯ ಪದ್ಧತಿಯು ಮಾನವ ಕಲ್ಯಾಣದ ಸಂಕೇತವಾಗಿದ್ದು, ತ್ರಿಕರಣಪೂರ್ವಕ ಪೂಜಾ ವಿಧಿ, ಶಾಸ್ತ್ರ ಪಠಣದಿಂದ ಕಾಯಾ-ವಾಚಾ-ಮನಸಾ ನಿರ್ಮಲವಾಗುವ ಮರ್ಮವಿದೆ ಎಂದು  ಹೇಳಿದ ಅವರು, ಗುರು ಎಂದರೆ ಭಗವಂತ ಎಂದು ತಿಳಿಸಿದರು.

ಶ್ರೀ ಕುಂದಕುಂದ ವಿದ್ಯಾಪೀಠದ ವಿದ್ಯಾರ್ಥಿವೃಂದ, ಹೊಂಬುಜ ಜೈನ ಸಮಾಜ ಬಾಂಧವರು, ಶ್ರೀ ಪದ್ಮಾಂಬ ಜೈನ ಮಹಿಳಾ ಮಂಡಲದ ಶ್ರಾವಿಕೆಯರು, ಪರವೂರ ಭಕ್ತರು ಪೂಜಾ ವಿಧಿ-ವಿಧಾನಗಳಲ್ಲಿ ಭಾಗವಹಿಸಿ, ಪೂಜ್ಯ ಶ್ರೀಗಳಿಗೆ ಭಕ್ತಿಪೂರ್ವಕ ನಮನಗಳನ್ನು ಸಮರ್ಪಿಸಿದರು. ಶ್ರೀ ಪಾರ್ಶ್ವನಾಥ ಸ್ವಾಮಿ, ಶ್ರೀಮಹಾವೀರ ಸ್ವಾಮಿ, ಜಗನ್ಮಾತೆ ಶ್ರೀ ಪದ್ಮಾವತಿ ದೇವಿ ಸನ್ನಿಧಿಯಲ್ಲಿ ಪರಂಪರಾಗತ ಪೂಜಾ ವಿಧಾನಗಳು ನೆರವೇರಿದವು.

ಕಾಮೆಂಟ್‌ಗಳಿಲ್ಲ