Sports Post

ಪುಸ್ತಕ ಖರೀದಿಗೆ ಇಲ್ಲಿ ಕ್ಲಿಕ್‌ ಮಾಡಿ

ಈಗ ಬಂದ ಸುದ್ದಿ...

ಕಾರಣಗಿರಿ ಗ್ರಾಮಭಾರತಿ ಟ್ರಸ್ಟ್ ಹಾಗೂ ಕಲಾದರ್ಶನ ಮಾಸಪತ್ರಿಕೆಯಿಂದ ಕಲಾದರ್ಶನ ನಾರದ ಪುರಸ್ಕಾರ ಪ್ರದಾನ

ಹೊಸನಗರ : ಮಾಧ್ಯಮಗಳು ಒಳ್ಳೆಯ ಸಂಗತಿಗಳ ಕುರಿತು ಹೆಚ್ಚು ಪ್ರಚಾರ ಮಾಡುವಂತಾಗಬೇಕೆಂದು ಕವಿ, ಸಾಮಾಜಿಕ ಕಾರ್ಯಕರ್ತ ಕೃಷ್ಣಪ್ರಸಾದ್ ಬದಿ ಹೇಳಿದರು.

ಕಾರಣಗಿರಿ ಗ್ರಾಮಭಾರತಿ ಟ್ರಸ್ಟ್, ಕಲಾದರ್ಶನ ಮಾಸಪತ್ರಿಕೆಯ ಆಶ್ರಯದಲ್ಲಿ ನಡೆದ ಕಲಾದರ್ಶನ ನಾರದ ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.

ಮಾಧ್ಯಮಗಳು ರಾಜಕೀಯ, ಅಪರಾಧ, ಕ್ರೀಡೆ, ಸಿನಿಮಾ ಸುದ್ದಿಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿವೆ. ಇದರ ಬದಲು ಹವಾಮಾನ ವೈಪರೀತ್ಯದಂತಹ ಸಮಸ್ಯೆಗಳು, ಕುಟುಂಬಗಳಲ್ಲಿನ ಸಮಸ್ಯೆ ಹಾಗೂ ಸಾಮರಸ್ಯದಂತಹ ವಿಷಯಗಳಿಗೆ ಹೆಚ್ಚು ಒತ್ತುಕೊಟ್ಟು ಜಾಗೃತಿ ಮೂಡಿಸಿದರೆ ಪ್ರತಿ ಮನೆ, ಗ್ರಾಮ, ದೇಶ ಚೆನ್ನಾಗಿರಲು ಸಾಧ್ಯ ಎಂದು ಅವರು ಹೇಳಿದರು.

ಹಿರಿಯ ಪತ್ರಕರ್ತ ಗೋಪಾಲಕೃಷ್ಣ ಆನವಟ್ಟಿ ಮಾತನಾಡಿ, ಸಮಾಜದ ಎಲ್ಲಾ ಕ್ಷೇತ್ರಗಳ ಜನರೂ ಕೆಟ್ಟವರಾದಂತೆ ಮಾಧ್ಯಮ ಕ್ಷೇತ್ರದಲ್ಲೂ ಕೆಲವರು ಕೆಟ್ಟವರಿದ್ದಾರೆ. ಆದರೆ ಸಮಾಜದ ಮೇಲೆ ಮಾಧ್ಯಮಗಳು ಹೆಚ್ಚು ಪ್ರಭಾವ ಬೀರುವುದರಿಂದ ಅದನ್ನು ಸರಿಯಾಗಿಡುವುದು ಅಗತ್ಯ ಎಂದರು.

ಪತ್ರಿಕಾ ಕ್ಷೇತ್ರದಲ್ಲಿ ಕೆಲಸ ಮಾಡುವುದು ತುಂಬಾ ಕಷ್ಟ. ಇವತ್ತಿನ ದಿನಗಳಿಗಿಂತ ಹಿಂದೆ ಬಹಳ ಕಷ್ಟವಿತ್ತು. ಅಂತಹ ಕಾಲದಲ್ಲಿ ಪತ್ರಿಕೆಗಳಲ್ಲಿ ಕೆಲಸ ಮಾಡಿದವರನ್ನು ಗುರುತಿಸಿ ನಾರದ ಪುರಸ್ಕಾರ ನೀಡಿರುವುದು ಶ್ಲಾಘನೀಯ ಎಂದರು.

ಇದೇ ಸಂದರ್ಭದಲ್ಲಿ ಯಕ್ಷಗಾನ ತರಗತಿಯನ್ನು ಉದ್ಘಾಟಿಸಿದ ಯಕ್ಷಗಾನ ಕಲಾವಿದ ಶ್ರೀಕಾಂತ್ ಹೊನ್ನೇಸರ ಮಾತನಾಡಿ, ಯಕ್ಷಗಾನ ಕಲಾವಿದರು ಪ್ರಚಾರಕ್ಕೋ, ಹಣಕ್ಕೋ ಕಲಿಯದೆ ಗುರುಮುಖೇನ ಕಲಿತು, ಪಾರಂಪರಿಕ ಕಲೆಯನ್ನು ಉಳಿಸುವ ಜೊತೆ ಸಮಾಜ ಜಾಗೃತಿಯ ಮಾಧ್ಯಮ ಮಾಧ್ಯಮವನ್ನಾಗಿಸಬೇಕೆಂದರು.

ಅಧ್ಯಕ್ಷತೆ ವಹಿಸಿದ್ದ ಕಾರಣಗಿರಿ ಕಲಾದರ್ಶನ ಪತ್ರಿಕೆಯ ಪ್ರಧಾನ ಸಂಪಾದಕ ಹಾದಿಗಲ್ಲು ಲಕ್ಷ್ಮೀನಾರಾಯಣ ಮಾತನಾಡಿ, ಪತ್ರಿಕೆ ಮತ್ತು ಯಕ್ಷಗಾನ ಎರಡೂ ಸಮಾಜದಲ್ಲಿ ಉತ್ತಮ ವಿಚಾರ ಮತ್ತು ಸಂಸ್ಕಾರ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಬೇಕೆಂದರು.

ಪತ್ರಿಕಾ ಕ್ಷೇತ್ರದಲ್ಲಿ ಹಲವು ವರ್ಷಗಳ ಕಾಲ ಅಮೂಲ್ಯ ಸೇವೆ ಸಲ್ಲಿಸಿದ ತೀರ್ಥಹಳ್ಳಿಯ ಆನಂತರಾಜ್ ಜೈನ್, ಶಿಕಾರಿಪುರದ ನೀಲಾಡಿ ರಾಮಚಂದ್ರ, ಹೊಸನಗರದ ಜಿ. ವಿ. ವೇಣುಗೋಪಾಲ, ತೀರ್ಥಹಳ್ಳಿಯ ಜಿ. ಆರ್. ಸತ್ಯನಾರಾಯಣ, ಕೋಣಂದೂರಿನ ದಿನೇಶ್ ರಾವ್ ಹಾಗೂ ಶಿವಮೊಗ್ಗದ ಎ.ಬಿ. ಮಂಜುನಾಥ್ ಬಸವಾನಿ ಇವರಿಗೆ ಕಲಾದರ್ಶನದ ಪುರಸ್ಕಾರ ನೀಡಿ ಗೌರವಿಸಲಾಯಿತು.

ಗ್ರಾಮ ಭಾರತದ ಗ್ರಾಮಭಾರತಿ ಟ್ರಸ್ಟಿನ ಗೌರವಾಧ್ಯಕ್ಷ ಎನ್. ಡಿ. ನಾಗೇಂದ್ರರಾವ್ ವೇದಿಕೆಯಲ್ಲಿದ್ದರು.

ಗಾಯತ್ರಿ ಅರುಣ ಪ್ರಾರ್ಥಿಸಿದರು. ರಾಮಚಂದ್ರ ಹೊರಣೇಬೈಲು ಸ್ವಾಗತಿಸಿ, ಕಲಾದರ್ಶನ ಸಂಪಾದಕ ಹನಿಯ ರವಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಅಶ್ವಿನಿ ಪಂಡಿತ್ ಕಾರ್ಯಕ್ರಮ ನಿರೂಪಿಸಿದರು. ವಸುಧಾ ಚೈತನ್ಯ ವಂದಿಸಿದರು. ಸರ್ವಜ್ಞ ಪತ್ರಿಕೆ ಸಂಪಾದಕ ಎಸ್‌. ಬಿ. ಮಠದ್, ಸಾಹಿತಿ ಡಾ. ಶಾಂತರಾಮ್ ಪ್ರಭು, ಡಾ. ರಾಮಚಂದ್ರರಾವ್, ರಾಮನ್ ಉಡುಪ, ಮಾಜಿ ಸೈನಿಕ ಕೆ. ಪಿ. ಕೃಷ್ಣಮೂರ್ತಿ, ನಿವೃತ್ತ ಪ್ರಾಚಾರ್ಯ ನಳಿನಚಂದ್ರ, ವಿನಾಯಕ ಪ್ರಭು ಮುಂತಾದವರು ಉಪಸ್ಥಿತರಿದ್ದರು.

ಕಾಮೆಂಟ್‌ಗಳಿಲ್ಲ