ಹೊಸನಗರ ತಾಲ್ಲೂಕು ಉಸ್ತುವಾರಿ ಅಧಿಕಾರಿಯಾಗಿ ರವಿಚಂದ್ರ ನಾಯಕ್ - ಈ ಉಸ್ತುವಾರಿ ಅಧಿಕಾರಿ ನಿರ್ವಹಿಸಬೇಕಾದ ಕಾರ್ಯಗಳೇನು ಗೊತ್ತಾ?!
ಹೊಸನಗರ : ರಾಜ್ಯದ ಸಾಮಾಜಿಕ, ಆರ್ಥಿಕ ಮತ್ತು ಭೌತಿಕ ಅಭಿವೃದ್ಧಿ ಕಾರ್ಯಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು 2023ರ ಡಿಸೆಂಬರ್ 30ರಿಂದಲೇ ಜಾರಿಗೆ ಬರುವಂತೆ ಪ್ರತೀ ತಾಲ್ಲೂಕಿಗೆ ಒಬ್ಬರಂತೆ ತಾಲ್ಲೂಕು ಉಸ್ತುವಾರಿ ಅಧಿಕಾರಿಗಳನ್ನಾಗಿ ನೇಮಕ ಮಾಡಿ ಆದೇಶಿಸಿದ್ದು, ಹೊಸನಗರ ತಾಲ್ಲೂಕಿಗೆ ಹಿರಿಯ ಶ್ರೇಣಿಯ ಕೆಎಎಸ್ ಅಧಿಕಾರಿ ರವಿಚಂದ್ರ ನಾಯಕ್ ಅವರನ್ನು ತಾಲ್ಲೂಕು ಉಸ್ತುವಾರಿ ಅಧಿಕಾರಿಯಾಗಿ ನೇಮಕ ಮಾಡಿ ಆದೇಶಿಸಿದೆ. ಕರ್ನಾಟಕ ಆಡಳಿತ ಸೇವೆಯ ಅಧಿಕಾರಿಗಳನ್ನು ತಾಲ್ಲೂಕು ಉಸ್ತುವಾರಿ ಅಧಿಕಾರಿಯಾಗಿ ನೇಮಿಸುವ ಮೂಲಕ ಆಡಳಿತಕ್ಕೆ ಚುರುಕು ನೀಡಲು ರಾಜ್ಯ ಸರ್ಕಾರ ಮುಂದಾಗಿದೆ.
ಹೀಗೆ ಹೊಸನಗರ ತಾಲ್ಲೂಕಿಗೆ
ನೇಮಕಗೊಂಡ ತಾಲ್ಲೂಕು ಉಸ್ತುವಾರಿ ಅಧಿಕಾರಿ ನಿರ್ವಹಿಸಬೇಕಾದ ಕಾರ್ಯಗಳೇನು ಎನ್ನುವ ಅರಿವು ತಾಲ್ಲೂಕಿನ
ಜನರಿಗೆ ಇರಬೇಕಾದದ್ದು ಅಗತ್ಯ.
ತಾಲ್ಲೂಕು ಉಸ್ತುವಾರಿ ಅಧಿಕಾರಿಗಳು
ನಿರ್ವಹಿಸಬೇಕಾದ ಕಾರ್ಯಗಳು :
1. ಸರ್ಕಾರವು ನೂತನವಾಗಿ ಘೋಷಣೆ ಮಾಡಿರುವ ಐದು ಗ್ಯಾರಂಟಿ
ಯೋಜನೆಗಳ(ಗೃಹಲಕ್ಷ್ಮಿ, ಗೃಹಜ್ಯೋತಿ, ಅನ್ನಭಾಗ್ಯ, ಶಕ್ತಿ ಯೋಜನೆ, ಯುವನಿಧಿ) ಅನುಷ್ಠಾನದ ಬಗ್ಗೆ
ಪರಿಶೀಲನೆ ನಡೆಸುವುದು.
2. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳ
ಹಾಗೂ ಅಲ್ಪಸಂಖ್ಯಾತರ ವಿದ್ಯಾರ್ಥಿ ನಿಲಯಗಳಿಗೆ ಹಾಗೂ ವಸತಿ ನಿಲಯಗಳಿಗೆ ಅನಿರೀಕ್ಷಿತ ಭೇಟಿ ನೀಡಿ
ಪರಿಶೀಲಿಸಿ, ನ್ಯೂನತೆಗಳನ್ನು ಸರಿಪಡಿಸಲು ಕ್ರಮ ವಹಿಸುವುದು.
3. ಶಿಕ್ಷಣದ ಗುಣಮಟ್ಟವನ್ನು ಸುಧಾರಿಸಲು ಶಾಲೆ, ಕಾಲೇಜು
ಹಾಗೂ ಐಟಿಐಗಳಿಗೆ ಭೇಟಿ ನೀಡಿ ಸಮಸ್ಯೆಗಳನ್ನು ಅಧ್ಯಯಿಸಿ, ಸೂಕ್ತ ಪರಿಹಾರ ಕಂಡುಕೊಳ್ಳುವುದು ಹಾಗೂ
ಶಾಲಾ ಕಟ್ಟಡ ದುರಸ್ತಿ, ಹೊಸ ಕಟ್ಟಡಗಳ ನಿರ್ಮಾಣ ಇತ್ಯಾದಿ ಕಾಮಗಾರಿಗಳ ಪರಿಶೀಲನೆ ನಡೆಸುವುದು.
4. ಸ್ವಂತ ಕಟ್ಟಡ ಇಲ್ಲದಿರುವ ಅಂಗನವಾಡಿಗೆ ನಿವೇಶನವನ್ನು
ಒದಗಿಸುವ ಬಗ್ಗೆ ಪರಿಶೀಲನೆ ಹಾಗೂ ನಿರ್ಮಾಣ ಹಂತದಲ್ಲಿರುವ ಅಂಗನವಾಡಿ ಕಟ್ಟಡಗಳ ಕಾಮಗಾರಿಗಳನ್ನು ಪರಿಶೀಲಿಸುವುದು
ಹಾಗೂ ತಾಲ್ಲೂಕಿನಲ್ಲಿರುವ ಅಪೌಷ್ಟಿಕ ಮಕ್ಕಳ ವಿವರ ಪಡೆದು, ನಿರಂತರವಾಗಿ ಸರ್ಕಾರದ ಅಪೌಷ್ಟಿಕತೆ ನಿವಾರಣೆ
ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಲು ಕ್ರಮ ವಹಿಸುವುದು.
5. ಗ್ರಾಮೀಣಾಭಿವೃದ್ಧಿ, ನಗರಾಭಿವೃದ್ಧಿ, ಇಂಧನ, ಜಲಸಂಪನ್ಮೂಲ,
ಲೋಕೋಪಯೋಗಿ, ಕೃಷಿ, ತೋಟಗಾರಿಕೆ ಇಲಾಖೆಗಳಲ್ಲಿನ ಪ್ರಮುಖ ಕಾರ್ಯಕ್ರಮಗಳಾದ ಕುಡಿಯುವ ನೀರು, ರಸ್ತೆಗಳು,
ವಿದ್ಯುಚ್ಛಕ್ತಿ, ಮೇವು ಲಭ್ಯತೆ, ಬೀಜ ಮತ್ತು ರಸಗೊಬ್ಬರ, ಮಧ್ಯಾಹ್ನದ ಬಿಸಿಯೂಟ, ನರೇಗಾ, ಸಾಮಾಜಿಕ
ಭದ್ರತೆಯಡಿ ನೀಡುತ್ತಿರುವ ಪಿಂಚಣಿ ಕಾರ್ಯಕ್ರಮಗಳ ಆರ್ಥಿಕ ಮತ್ತು ಭೌತಿಕ ಪ್ರಗತಿ ಪರಿಶೀಲನೆ ನಡೆಸುವುದು.
6. ತಾಲ್ಲೂಕಿನ ಯುವಕರಿಗೆ ಉದ್ಯೋಗಾಧಾರಿತ ತರಬೇತಿ ಕುರಿತು
ಸಮನ್ವಯ ಹಾಗೂ ಸಾಲ ಮಂಜೂರಾತಿಗೆ ಬೇಕಾದ ಅವಶ್ಯ ಸಲಹೆ ನೀಡಲು ಕ್ರಮ ವಹಿಸುವುದು ಹಾಗೂ ತಾಲ್ಲೂಕಿನ
ಯುವಕ-ಯುವತಿಯರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಯೋಜನೆಗಳಡಿಯಲ್ಲಿ ಅವರ ವೃತ್ತಿನೈಪುಣ್ಯತೆ
(skill) ಹೆಚ್ಚಿಸಿ ಅವರ ಜೀವನೋಪಾಯವನ್ನು
ಸದೃಢಗೊಳಿಸಲು ಕ್ರಮ ವಹಿಸುವುದು.
7. ತಾಲ್ಲೂಕಿನಲ್ಲಿ ಗೃಹ ಮತ್ತು ಸಣ್ಣ ಕೈಗಾರಿಕೆಗಳನ್ನು
ಗುರುತಿಸಿ, ಅವರಿಗೆ ಸರ್ಕಾರದ ಸವಲತ್ತುಗಳ ಬಗ್ಗೆ ಅರಿವು ಮೂಡಿಸುವುದು ಹಾಗೂ ಉದ್ಯೋಗಾವಕಾಶ ಕಲ್ಪಿಸುವ
ಬಗ್ಗೆ ಕ್ರಮ ವಹಿಸುವುದು.
8. ಖಾಸಗಿ ಸಾಮಾಜಿಕ ಜವಾಬ್ದಾರಿ(Corporate Social
Responsibility)
ಯೋಜನೆಯಡಿಯಲ್ಲಿ ವಿವಿಧ ಕಂಪನಿಗಳಿಂದ ಶಾಸನಬದ್ಧವಾದ ಆರ್ಥಿಕ ಸಹಾಯ ಪಡೆದು ತಾಲ್ಲೂಕಿನ, ಶೈಕ್ಷಣಿಕ,
ಆರೋಗ್ಯ, ಸ್ವಚ್ಛತೆ ಹಾಗೂ ನೈಸರ್ಗಿಕ ಕಾರ್ಯಗಳನ್ನು ನಿರ್ವಹಿಸಲು ಕ್ರಮ ವಹಿಸುವುದು.
ಉದಾಹರಣೆಗೆ: ತಾಲ್ಲೂಕಿನ ಜಲಮೂಲಗಳ ಜೀರ್ಣೋದ್ಧಾರ ಮಾಡುವ
ಬಗ್ಗೆ ಕ್ರಮ ವಹಿಸುವುದು.
9. ಪ್ರತಿ ಗ್ರಾಮ ಪಂಚಾಯತಿವಾರು ಕುಡಿಯುವ ನೀರಿನ ವ್ಯವಸ್ಥೆ,
ಓವರ್ಹೆಡ್ ಟ್ಯಾಂಕ್ಗಳ ಸ್ವಚ್ಛತೆ ಮತ್ತು impounding reservoirಗಳನ್ನು ಪರಿಶೀಲಿಸಿ ವರದಿ
ಸಲ್ಲಿಸುವುದು ಹಾಗೂ ಅತಿವೃಷ್ಟಿ ಮತ್ತು ಅನಾವೃಷ್ಟಿಗಳಂತಹ ಸಂದರ್ಭದಲ್ಲಿ ತಾಲ್ಲೂಕಿನ ವಿವಿಧ ಅಧಿಕಾರಿಗಳೊಂದಿಗೆ
ಸಮನ್ವಯ ಸಾಧಿಸಿ ಪ್ರಕೃತಿ ವಿಕೋಪಕ್ಕೀಡಾದ ಪ್ರದೇಶಗಳಲ್ಲಿ ತುರ್ತು ಕ್ರಮ ವಹಿಸುವುದು.
10. ತಾಲ್ಲೂಕಿನಲ್ಲಿ ದೌರ್ಜನ್ಯ ಪ್ರಕರಣಗಳನ್ನು ಪರಿಶೀಲಿಸಿ
ಕ್ರಮ ವಹಿಸಲು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ವಹಿಸುವುದು.
11. ಪ್ರತಿ ತಾಲ್ಲೂಕಿಗೆ ಸಂಬಂಧಪಟ್ಟಂತೆ, ನಿಯೋಜಿಸಲ್ಪಟ್ಟ
ಕೆ.ಎ.ಎಸ್ ಅಧಿಕಾರಿಯು ಪ್ರತಿ ಮಾಹೆ ಕನಿಷ್ಠ ಎರಡು ಬಾರಿ ಭೇಟಿ ನೀಡುವುದು. ಸದರಿ ಭೇಟಿ ಸಮಯದಲ್ಲಿ
ಇಲಾಖೆಗಳ ಕಾರ್ಯ ಪರಿಶೀಲನೆ, ಇಲಾಖೆಗಳು ಕೈಗೊಂಡಿರುವ ವಿವಿಧ ಯೋಜನೆಗಳಡಿ ಅಭಿವೃದ್ಧಿ ಯೋಜನೆಗಳ ಸ್ಥಳಪರಿಶೀಲನೆ
ಮಾಡುವುದರೊಂದಿಗೆ ನಗರ ಸ್ಥಳೀಯ ಸಂಸ್ಥೆ, ಗ್ರಾಮೀಣ ಸ್ಥಳೀಯ ಸಂಸ್ಥೆಗಳು(ಪಂಚಾಯತ್) ತಯಾರಿಸುವ ಕ್ರಿಯಾಯೋಜನೆಗಳ
ಪರಿಶೀಲನೆ ಮಾಡುವುದು ಹಾಗೂ ಸದರಿ ಕಾರ್ಯ ಯೋಜನೆಗಳನ್ನು ನಾಗರಿಕ ಸ್ನೇಹಮಯ ಮಾಡಲು ಸೂಕ್ತ ಸಲಹೆಗಳನ್ನು
ನೀಡುವುದು, ಸರ್ಕಾರದ ಹಿತದೃಷ್ಟಿಗೆ ಧಕ್ಕೆಯಾಗದಂತಹ ರೀತಿಯಲ್ಲಿ ತಮ್ಮ ಮಟ್ಟದಲ್ಲಿ ಹೊಸ ಉಪಕ್ರಮಗಳನ್ನು
ತೆಗೆದುಕೊಳ್ಳುವುದು.
12. ತಾಲ್ಲೂಕು ಉಸ್ತುವಾರಿ ಅಧಿಕಾರಿಗಳು ಮೇಲ್ಕಂಡ ಕಾರ್ಯಗಳನ್ನು
ಅತ್ಯಂತ ಬದ್ಧತೆಯಿಂದ ನಿರ್ವಹಿಸಲು ಸೂಚಿಸಿದೆ ಹಾಗೂ ಪ್ರತಿಮಾಹೆ ತಾವು ನಿರ್ವಹಿಸಿದ ಕಾರ್ಯವರದಿಯನ್ನು
ಸರ್ಕಾರಕ್ಕೆ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯವರಿಗೆ ಹಾಗೂ ಜಿಲ್ಲಾಧಿಕಾರಿಯವರಿಗೆ ಸಲ್ಲಿಸುವುದು.
13. ತಾಲ್ಲೂಕು ಉಸ್ತುವಾರಿ ಅಧಿಕಾರಿಗಳು ಜಿಲ್ಲಾ ಉಸ್ತುವಾರಿ
ಕಾರ್ಯದರ್ಶಿಗಳ ಮಾರ್ಗದರ್ಶನದಲ್ಲಿ ಕಾರ್ಯ ನಿರ್ವಹಿಸುವುದು ಮತ್ತು ಸಂಬಂಧಪಟ್ಟ ಜಿಲ್ಲಾ ಉಸ್ತುವಾರಿ
ಕಾರ್ಯದರ್ಶಿಗಳು ವಹಿಸುವ ಹೆಚ್ಚುವರಿ ಕಾರ್ಯಗಳನ್ನು ನಿರ್ವಹಿಸುವುದು.
ಕಾಮೆಂಟ್ಗಳಿಲ್ಲ