ಹೊಸನಗರದಲ್ಲಿ ಯಶಸ್ವಿಯಾಗಿ ನಡೆದ 10ನೇ ತಾಲ್ಲೂಕು ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ | ಮಕ್ಕಳನ್ನು ಸಾಹಿತ್ಯ ಕ್ರೇತ್ರದೊಂದಿಗೆ ಸೇರಿಸಿಕೊಂಡು ಕನ್ನಡ ಸಾಹಿತ್ಯವನ್ನು ಬೆಳೆಸಬೇಕಾಗಿದೆ -ಸಮ್ಮೇಳನದ ಸರ್ವಾಧ್ಯಕ್ಷೆ ಕು. ಯಶಸ್ವಿನಿ ಓ.ಕೆ
ಹೊಸನಗರ : ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಮಕ್ಕಳ ಕೊಡುಗೆ ಅಮೂಲ್ಯವಾಗಿದ್ದು ಮಕ್ಕಳನ್ನು ಸಾಹಿತ್ಯ ಕ್ರೇತ್ರದೊಂದಿಗೆ ಸೇರಿಸಿಕೊಂಡು ಕನ್ನಡ ಸಾಹಿತ್ಯವನ್ನು ಬೆಳೆಸಬೇಕಾಗಿದೆ ಎಂದು 10ನೇ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆ ಕು. ಯಶಸ್ವಿನಿ ಓ.ಕೆ ಹೇಳಿದರು.
ಪಟ್ಟಣದ ಹೊರವಲಯದ ಮಾವಿನಕೊಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಆವರಣದಲ್ಲಿ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ, ಕನ್ನಡ ಸಾಹಿತ್ಯ ಪರಿಷತ್, ತಾಲ್ಲೂಕು ಪಂಚಾಯತಿ, ಸಾರ್ವಜನಿಕ ಶಿಕ್ಷಣ ಇಲಾಖೆ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ ಮಾವಿನಕೊಪ್ಪ, ಕರ್ನಾಟಕ ಜಾನಪದ ಪರಿಷತ್, ಅಕಾಡೆಮಿ ಆಫ್ ಬಿದನೂರು ಕಲ್ಚರ್ ನಗರ, ಮಲೆನಾಡು ವಾಯ್ಸ್ ಪತ್ರಿಕೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಹೊಸನಗರ ತಾಲ್ಲೂಕು 10ನೇ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆಯಾಗಿ ಅವರು ಮಾತನಾಡಿದರು.
ಕನ್ನಡ ಸಾಹಿತ್ಯ ಬೆಳವಣಿಗೆಯಲ್ಲಿ ಮಕ್ಕಳನ್ನು ಕೂಡಾ ಈ ಕ್ಷೇತ್ರದಲ್ಲಿ ಪ್ರೋತ್ಸಾಹಿಸುವುದರಿಂದ ಸಾಹಿತ್ಯದಲ್ಲಿ ಹೆಚ್ಚಿನ ಬೆಳವಣಿಗೆ ಕಾಣಬಹುದು. ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ ಯಾವಾಗಲೂ ಯಶಸ್ವಿಯಾಗಿ ಆಚರಣೆಯಾಗಬೇಕು. ಮಕ್ಕಳಲ್ಲಿ ಸಾಹಿತ್ಯದೆಡೆಗೆ ಹೆಚ್ಚಿನ ಆಸಕ್ತಿ ಮೂಡುವಂತೆ ಶಾಲೆಯ ಶಿಕ್ಷಕ ವರ್ಗ ಪ್ರೇರೇಪಣೆ ನೀಡಬೇಕು. ಇದಕ್ಕೆ ಪೋಷಕರು ಕೈಜೋಡಿಸಬೇಕು. ಮಕ್ಕಳು ಪಠ್ಯ ಪುಸ್ತಕಗಳನ್ನು ಓದುವುದರ ಜೊತೆಗೆ ಸಾಹಿತ್ಯವನ್ನು ಕೂಡ ಓದಬೇಕು. ಬರೆಯುವ ಅಭ್ಯಾಸ ಮಾಡಿಕೊಳ್ಳಬೇಕು. ಆಗ ಮಾತ್ರ ಹಿಂದಿನವರು ಹಾಕಿಕೊಟ್ಟ ಸಾಹಿತ್ಯದ ಹಾದಿಯನ್ನು ನಮ್ಮಂತವರು ಮುಂದುವರೆಸಿಕೊಂಡು ಹೋಗಬಹುದು. ಆದ್ದರಿಂದ ಎಲ್ಲ ಮಕ್ಕಳು ಸಾಹಿತ್ಯಕ್ಕೆ ಒಲವು ತೋರಿಸುವುದರ ಜೊತೆಗೆ ಸಾಹಿತ್ಯ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಲಿ ಎಂದು ಸರ್ವಾಧ್ಯಕ್ಷೆ ಹೇಳಿದರು.
ಮಕ್ಕಳನ್ನು ಸಮಾಜದ ಏಳಿಗೆಗೆ ಪ್ರಯತ್ನಿಸುವಂತೆ ಮಾಡುವುದು ಸಾಹಿತ್ಯದ ಶಕ್ತಿ ; ಅರ್ಜುನ್ರಾಜ್
ಹೊಸನಗರ ತಾಲ್ಲೂಕು 10ನೇ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ 10ನೇ ತರಗತಿಯ ವಿದ್ಯಾರ್ಥಿ ಅರ್ಜುನ್ರಾಜ್ರವರು, ಮಕ್ಕಳಲ್ಲಿ ಹುದುಗಿರುವ ಅಮೂಲ್ಯವಾದ ಸಾಹಿತ್ಯ ಶಕ್ತಿಯನ್ನು ವೃದ್ಧಿಗೊಳಿಸಿ ಮಕ್ಕಳನ್ನು ಕೂಡ ಸಮಾಜದ ಏಳಿಗೆಗೆ ಪ್ರಯತ್ನಿಸುವಂತೆ ಮಾಡುವುದು ಸಾಹಿತ್ಯದ ಶಕ್ತಿ ಎಂದು ಹೇಳಿದರು.
ಕನ್ನಡ ಸಾಹಿತ್ಯವು ಪಂಪನಿಂದ ಕುವೆಂಪುರವರ ತನಕ ವಿಶಾಲವಾದ ಒಂದು ಹಾದಿಯಾಗಿದೆ. ಈ ಹಾದಿಯನ್ನು ನಾವು ಜೋಪಾನವಾಗಿ ಕಾಪಾಡಿಕೊಂಡು ಮುನ್ನಡೆಸಿಕೊಂಡು ಹೋಗಬೇಕು. ಮಕ್ಕಳಲ್ಲಿ ಬಾಲ್ಯದಲ್ಲಿಯೇ ಸಾಹಿತ್ಯಿಕ ಆಸಕ್ತಿಯನ್ನು ಹುಟ್ಟಿಸಿ ಅವರು ಕೂಡಾ ಸಾಹಿತ್ಯದ ಮೂಲಕ ಈ ದೇಶಕ್ಕೆ ಕೊಡುಗೆ ನೀಡುವಂತೆ ಪ್ರೇರೇಪಿಸಬೇಕು. ಮಕ್ಕಳಿಗೆ ಸಾಹಿತ್ಯದ ಬಗ್ಗೆ ಸಣ್ಣವರಿರುವಾಗಲೇ ಅರಿವು ಮೂಡಿಸಿದರೇ ಮುಂದೆ ಸಾಹಿತ್ಯ ಕ್ಷೇತ್ರವನ್ನು ಬೆಳೆಸಲು ಸಾಧ್ಯ ಎಂದು ಅರ್ಜುನ್ರಾಜ್ರವರು ಹೇಳಿದರು.
ಹೊಸನಗರ ಪದವಿ ಪೂರ್ವ ಕಾಲೇಜ್ ಹೈಸ್ಕೂಲ್ ವಿಭಾಗದ ಆವರಣದಿಂದ ಪ್ರಮುಖ ಬೀದಿಗಳಲ್ಲಿ ಸಮ್ಮೆಳನಾಧ್ಯಕ್ಷರ ಹಾಗೂ ಉದ್ಘಾಟಕರ ಮೆರವಣಿಗೆಯನ್ನು ಎಲ್ಲ ಸಂಘ ಸಂಸ್ಥೆಗಳ ಹಾಗೂ ಶಾಲಾ ವಿದ್ಯಾರ್ಥಿನಿಯರ ಜೊತೆ ನಡೆಸಲಾಯಿತು.
ಸಮ್ಮೇಳನದ ಸಭಾ ಕಾರ್ಯಕ್ರಮದಲ್ಲಿ ಶಾಸಕರಾದ ಬೇಳೂರು ಗೋಪಾಲಕೃಷ್ಣ, ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್.ಆರ್. ಕೃಷ್ಣಮೂರ್ತಿ, ಎಸ್ಡಿಎಂಸಿ ಅಧ್ಯಕ್ಷ ಗುರುರಾಜ್ ಆರ್, ರಾಮಕೃಷ್ಣ ಶಾಲೆಯ ವ್ಯವಸ್ಥಾಪಕ ದೇವರಾಜ್, ಪರಿಸರ ಪ್ರೇಮಿ ಎಸ್.ಹೆಚ್. ನಿಂಗಮೂರ್ತಿ, ಕಸಾಪ ತಾಲ್ಲೂಕು ಅಧ್ಯಕ್ಷರಾದ ತ.ಮ.ನರಸಿಂಹ, ಚಂದ್ರಶೇಖರ ಶೇಟ್, ಶಿಕ್ಷಕರು ಸಾಹಿತಿಗಳಾದ ತಿರುಪತಿನಾಯ್ಕ್, ಶಿಕ್ಷಕರ ಸಂಘದ ಅಧ್ಯಕ್ಷ ಹೆಚ್.ಆರ್. ಸುರೇಶ್, ನೌಕರರ ಸಂಘದ ಅಧ್ಯಕ್ಷ ಬಸವಣ್ಯಪ್ಪ, ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯ ನಗರ ರಾಘವೇಂದ್ರ, ಪತ್ರಕರ್ತರ ಸಂಘದ ಅಧ್ಯಕ್ಷ ವೆಂಕಟೇಶ್ಮೂರ್ತಿ, ಮಾವಿನಕೊಪ್ಪ ಶಾಲೆಯ ಮುಖ್ಯ ಶಿಕ್ಷಕ ಕುಬೇಂದ್ರಪ್ಪ, ಡಾ. ಅಂಜಲಿ, ಅಶ್ವಿನಿ, ಸುಧೀಂದ್ರ ಪಂಡಿತ್, ಗೌತಮ್ ಕುಮಾರಸ್ವಾಮಿ, ಹೆಚ್.ಆರ್ ಪ್ರಕಾಶ್, ಪರಮೇಶ್ವರಪ್ಪ, ಕರಿಬಸಪ್ಪ, ಕೆ.ಇ.ಬಿ ಪ್ರಶಾಂತ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.
ಕಾಮೆಂಟ್ಗಳಿಲ್ಲ