Sports Post

ಪುಸ್ತಕ ಖರೀದಿಗೆ ಇಲ್ಲಿ ಕ್ಲಿಕ್‌ ಮಾಡಿ

ಈಗ ಬಂದ ಸುದ್ದಿ...

ಕೊಡಚಾದ್ರಿ ಕಾಲೇಜಿನಲ್ಲಿ ’ನಮ್ಮೂರು ಹೊಸನಗರ’ ಪುಸ್ತಕ ಪರಿಚಯ ಹಾಗೂ ಹೊಸನಗರ ಜಾನಪದ ಒಳನೋಟ ವಿಚಾರ ಸಂಕಿರಣ - ಕಲೆ, ಸಾಹಿತ್ಯ ವಿದ್ಯಾರ್ಥಿಗಳ ಬದುಕಿನ ಅಂಗವಾಗಲಿ : ಶಾಸಕ ಗೋಪಾಲಕೃಷ್ಣ ಬೇಳೂರು

ಹೊಸನಗರ : ಜಾನಪದ ಕಲೆ, ಇತಿಹಾಸ, ಸಾಹಿತ್ಯ ಸೇರಿದಂತೆ ನಮ್ಮ ಪೂರ್ವಿಕರ ಬಳುವಳಿಯನ್ನು ಉಳಿಸಿ, ಬೆಳೆಸಿ, ಸಂರಕ್ಷಿಸಿ ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಗುರುತರ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಕಾರ್ಯೋನ್ಮುಖರಾಗಬೇಕಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಇಲ್ಲಿನ ಕೊಡಚಾದ್ರಿ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಇಂದು ರಾಜ್ಯ ಜಾನಪದ ಪರಿಷತ್ತು ಹಾಗೂ ಸ್ಥಳೀಯ ಘಟಕಗಳು ಹಮ್ಮಿಕೊಂಡಿದ್ದ ಹಿರಿಯ ಸಾಹಿತಿ ಡಾ. ಎಸ್.ಪಿ. ಪದ್ಮಪ್ರಸಾದ್ ಅವರ ’ನಮ್ಮೂರು ಹೊಸನಗರ’ ಪುಸ್ತಕ ಪರಿಚಯ ಹಾಗೂ ಹೊಸನಗರ ಜಾನಪದ ಒಳನೋಟ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಮೊಬೈಲ್, ಟಿವಿಗಳಂತಹ ಆಧುನಿಕ ಸಾಧನ ಹಾಗು ಅವುಗಳ ತಂತ್ರಜ್ಞಾನ ವಿದ್ಯಾರ್ಥಿ ದಿಸೆಯಲ್ಲೆ ದುರ್ಬಳಕೆ ಆಗುತ್ತಿದೆ ಎಂದು ಆತಂಕ ವ್ಯಕ್ತ ಪಡಿಸಿದ ಶಾಸಕ ಬೇಳೂರು, ಇಂತಹ ವಿಚಾರ ಸಂಕಿರಣಗಳು ವಿದ್ಯಾರ್ಥಿಗಳಲ್ಲಿ ಪುಸ್ತಕ ಓದುವ ಹವ್ಯಾಸ ರೂಢಿಸಿಕೊಳ್ಳಲು ಸಹಕಾರಿ ಆಗುತ್ತವೆ ಎಂಬ ಅಭಿಪ್ರಾಯ ವ್ಯಕ್ತ ಪಡಿಸಿದರು. ಇದೇ ಸಂದರ್ಭದಲ್ಲಿ ಕಾಲೇಜಿನ ಮೂಲ ಸೌಕರ್ಯಗಳ ಅಭಿವೃದ್ಧಿಗೆ ತಾವು ಸದಾ ಸಿದ್ಧರಿದ್ದು, ಶೀಘ್ರದಲ್ಲೇ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯ ಅನುಕೂಲಕ್ಕಾಗಿ ತಾಲ್ಲೂಕಿನ ಹಲವು ಮಾರ್ಗಗಳಲ್ಲಿ ಕೆಎಸ್‌ಆರ್‌ಟಿಸಿ ಬಸ್ ಸಂಚಾರಕ್ಕೆ ಅನುವು ಮಾಡಿಕೊಡುವುದಾಗಿ ಭರವಸೆ ನೀಡಿದರು.

ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಆರಂಭಗೊಂಡಾಗ ನನ್ನಿಂದ ರಚಿತಗೊಂಡ ಸಂಗ್ರಹವಾದ ಮೊದಲ ಕೃತಿಯೇ ’ನಮ್ಮೂರು ಹೊಸನಗರ’. ಯಾವುದೇ ವ್ಯಕ್ತಿಯ ಯಶಸ್ಸಿಗೆ ವಿವೇಕ, ಜ್ಞಾನ ಹಾಗೂ ಧೈರ್ಯವೇ ಮೂಲಮಂತ್ರವಾಗಿದೆ. ಇವುಗಳ ಅಳವಡಿಕೆಯಿಂದ ಮಾತ್ರವೇ ವ್ಯಕ್ತಿ ಯಶಸ್ಸಿನ ತುಟ್ಟತುದಿ ಏರಲು ಸಾಧ್ಯ ಎಂದು ಕೃತಿಕಾರರಾದ ಡಾ. ಎಸ್.ಪಿ. ಪದ್ಮಪ್ರಸಾದ್ ಅವರು ಹೇಳಿದರು.

ಇದೇ ಸಂದರ್ಭದಲ್ಲಿ ಪಂಚಾಯತ್‌ ರಾಜ್ ಪರಿಷತ್ತು ನೀಡುವ ಡಾ. ಚಿಕ್ಕಕೊಮಾರಿಗೌಡ ದತ್ತಿ ಪ್ರಶಸ್ತಿಗೆ ಭಾಜನರಾಗಿರುವ ಶಿವಮೊಗ್ಗ ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ, ಸೋಲಿಲ್ಲದ ಸರದಾರ ಪ್ರಶಸ್ತಿ ಪುರಸ್ಕೃತ ಕಲಗೋಡು ರತ್ನಾಕರ್ ಅವರನ್ನು ಪರಿಷತ್ತು ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.  ಮುಖ್ಯ ಅತಿಥಿಗಳಾಗಿ ತಾಲ್ಲೂಕು ಕಜಾಪ ಅಧ್ಯಕ್ಷ ಎಂ.ಎಂ. ಪರಮೇಶ್, ,ತಾಲ್ಲೂಕು ಕಸಾಪ ಅಧ್ಯಕ್ಷ ತ.ಮ. ನರಸಿಂಹ, ಕಾಲೇಜು ಅಭಿವೃದ್ದಿ ಸಮಿತಿ ಉಪಾಧ್ಯಕ್ಷ ಮಾಸ್ತಿಕಟ್ಟೆ ಸುಬ್ರಹ್ಮಣ್ಯ, ಪಟ್ಟಣ ಪಂಚಾಯತಿ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಹಾಲಗದ್ದೆ ಉಮೇಶ್, ಕಸಾಪ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಂಜುನಾಥ ಕಾಮತ್, ತಾಲ್ಲೂಕು ಕಸಾಪ ಪ್ರಧಾನ ಕಾಯದರ್ಶಿ ವಿಜೇಂದ್ರ ಶೇಟ್ ಭಾಗವಹಿಸಿದ್ದರು.

ನಂತರ ನಡೆದ ವಿಚಾರ ಸಂಕಿರಣದಲ್ಲಿ ಹೊಸನಗರ ಜಾನಪದ ಮಹತ್ವ ವಿಷಯ ಕುರಿತಂತೆ ರಿಪ್ಪನ್‌ಪೇಟೆ ಸರ್ಕಾರಿ ಪ್ರಥಮದರ್ಜೆ ಕಾಲೇಜು ಉಪನ್ಯಾಸಕ ಡಾ. ರತ್ನಾಕರ್ ಸಿ ಕುನುಗೋಡು, ಹೊಸನಗರ ಐತಿಹಾಸಿಕ ತಾಣಗಳು ವಿಷಯ ಕುರಿತು ಶಿವಮೊಗ್ಗ ವಿಶ್ರಾಂತ ಪ್ರಾಧ್ಯಾಪಕ ಡಾ. ಕೆ.ಜಿ. ವೆಂಕಟೇಶ್ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

ಸಾಹಿತಿ ನಾಗರಕೊಡಿಗೆ ಗಣೇಶ್ ಮೂರ್ತಿ, ಕೊಡಚಾದ್ರಿ ಕಾಲೇಜು ಕನ್ನಡ ವಿಭಾಗದ ಮುಖ್ಯಸ್ಥ, ಸಾಹಿತಿ ಡಾ. ಶ್ರೀಪತಿ ಹಳಗುಂದ ಉಪಸ್ಥಿತರಿದ್ದರು. 4ನೇ ಜಾನಪದ ಸಮ್ಮೇಳನಾಧ್ಯಕ್ಷ ಬಟ್ಟೆಮಲ್ಲಪ್ಪ ಆಂಜನೇಯ ಜೋಗಿ ಉಪಸ್ಥಿತರಿದ್ದು, ಹಲವು ಕಿಂದರಜೋಗಿ ಪದ ಹಾಡಿದರು. ಈ ವೇಳೆ ನಮ್ಮೂರು ಹೊಸನಗರ ಪುಸ್ತಕವನ್ನು ಶೇ.50 ರಿಯಾಯಿತಿ ದರದಲ್ಲಿ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿತ್ತು.

ಕಾಮೆಂಟ್‌ಗಳಿಲ್ಲ