ಹೊಸನಗರದಲ್ಲಿ ಎಬಿವಿಪಿ ವಿದ್ಯಾರ್ಥಿ ನಾಯಕರ ಸಭೆ - ತಾಲ್ಲೂಕು ಸಂಚಾಲಕರಾಗಿ ಪ್ರಮೋದ್ ಮುಮ್ಮನೆ ಆಯ್ಕೆ
ಹೊಸನಗರ : ಪಟ್ಟಣದ ಕೊಡಚಾದ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ವಿದ್ಯಾರ್ಥಿಗಳ ’ವಿದ್ಯಾರ್ಥಿ ನಾಯಕರ ಸಭೆ’ ಗಾಯತ್ರಿ ಮಂದಿರದಲ್ಲಿ ಇಂದು ನಡೆಯಿತು.
ಬಿ.ಎಸ್. ಸುರೇಶ ಅವರು ಮಾತನಾಡಿ, ವಿಶ್ವದಲ್ಲೇ ಅತಿ ದೊಡ್ಡ ವಿದ್ಯಾರ್ಥಿ ಸಂಘಟನೆ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಆಗಿದ್ದು, ಪಟ್ಟಣದ ಕೊಡಚಾದ್ರಿ ಕಾಲೇಜು ಇಚ್ಛಾಶಕ್ತಿಯ ಕೊರತೆಯಿಂದ ಇದುವರೆಗೂ ಅಭಿವೃದ್ಧಿ ಕಂಡಿರಲಿಲ್ಲ. ಈಗ ಅಭಿವೃದ್ಧಿಗೆ ಸರ್ಕಾರದಿಂದ ಕೆಲಸ ನಡೆಯುತ್ತಿರುವುದು ಸ್ವಾಗತಾರ್ಹವಾಗಿದ್ದು ವಿದ್ಯಾರ್ಥಿಗಳು ಪಕ್ಷಾತೀತ ಹಾಗೂ ಜಾತ್ಯಾತೀತವಾಗಿ ನಾಯಕತ್ವ ಗುಣ ಬೆಳೆಸಿಕೊಳ್ಳುವ ಮೂಲಕ ಅಭಿವೃದ್ಧಿಯ ಶಕೆ ಕಂಡುಕೊಳ್ಳಬೇಕೆಂದರು.
ಎಬಿವಿಪಿಯ ಕರ್ನಾಟಕ ದಕ್ಷಿಣ ಪ್ರಾಂತ್ಯದ ಕಾರ್ಯದರ್ಶಿ ಎಚ್.ಸಿ. ಪ್ರವೀಣ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿ, ಎಬಿವಿಪಿ ವಿದ್ಯಾರ್ಥಿಗಳ ಜಗತ್ತಿನ ಏಕೈಕ ವಿದ್ಯಾರ್ಥಿ ಶಕ್ತಿಯಾಗಿ ರೂಪಗೊಂಡಿರುವುದು ಸ್ವಾಗತಾರ್ಹ ಎಂದರು.
VIDEO - ಹೊಸನಗರ ಪೊಲೀಸ್ ಠಾಣಾ ಸಿಬ್ಬಂದಿ ಕೌಸಲ್ಯ ಅವರಿಂದ ವಿಶಿಷ್ಟ ರೀತಿಯಲ್ಲಿ ಮಹಿಳಾ ದಿನಾಚರಣೆ
ಎಬಿವಿಪಿಯ ಕರ್ನಾಟಕದ ದಕ್ಷಿಣ ಪ್ರಾಂತ್ಯದ ವಿದ್ಯಾರ್ಥಿನಿ ಪ್ರಮುಖ್ ಕುಮಾರಿ ಸುಧಾ ಶೆಣೈ ಪ್ರಾಸ್ತಾವಿಕವಾಗಿ ಮಾತನಾಡಿ, ವಿದ್ಯಾರ್ಥಿಗಳು ಸಂಘಟಿತರಾಗದಿದ್ದಲ್ಲಿ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಎಬಿವಿಪಿ ವಿದ್ಯಾರ್ಥಿಗಳಿಂದ ವಿದ್ಯಾರ್ಥಿಗಳಿಗಾಗಿ ವಿದ್ಯಾರ್ಥಿಗಳೇ ರಚಿಸಿಕೊಂಡ ಸಂಘಟನೆಯಾಗಿದ್ದು ಎಲ್ಲರೂ ಇದರಡಿಯಲ್ಲಿ ಸಂಘಟಿತರಾಗಿ ಗುರಿ ಮುಟ್ಟಬೇಕೆಂದು ಕರೆ ನೀಡಿದರು.
ಕುಮಾರಿ ರಮ್ಯಾ ಅವರಿಂದ ಪ್ರಾರ್ಥನೆಯಾದ ಬಳಿಕ, ಎಬಿವಿಪಿ ಮುಖಂಡ ಪ್ರಮೋದ್ ಸ್ವಾಗತಿಸಿದರು. ಕುಮಾರಿ ಸ್ವಾತಿ ಕಾರ್ಯಕ್ರಮ ನಿರೂಪಿಸಿದರು. ಎಬಿವಿಪಿಯ ಶಿವಮೊಗ್ಗ ಜಿಲ್ಲಾ ಸಂಚಾಲಕ ಅಭಿಷೇಕ್ ವಂದಿಸಿದರು.
ಎಬಿವಿಪಿಯ ತಾಲ್ಲೂಕು ಸಂಚಾಲಕರಾಗಿ ಪ್ರಮೋದ್ ಮುಮ್ಮನೆ ಆಯ್ಕೆ :
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಹೊಸನಗರದಿಂದ ಇಂದು ಪಟ್ಟಣದಲ್ಲಿ ನಡೆದ ವಿದ್ಯಾರ್ಥಿ ನಾಯಕರ ಸಭೆಯಲ್ಲಿ ಹೊಸನಗರ ತಾಲ್ಲೂಕಿನ ಸಂಚಾಲಕರಾಗಿ ಪ್ರಮೋದ್ ಮುಮ್ಮನೆ ಆಯ್ಕೆ ಆಗಿದ್ದಾರೆ.
ಪ್ರಸ್ತುತ ಇವರು ಕೊಡಚಾದ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ತೃತೀಯ ಬಿ.ಎ ವ್ಯಾಸಂಗ ಮಾಡುತ್ತಿದ್ದಾರೆ.
ಕಾಮೆಂಟ್ಗಳಿಲ್ಲ