ರಾಜ್ಯ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ರವಿ ಬಿದನೂರಿಗೆ ಸಂಸದ ಬಿವೈಆರ್ ಅಭಿನಂದನೆ
ಹೊಸನಗರ : ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದಿಂದ ಕೊಡಮಾಡುವ ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿಗೆ ಭಾಜನರಾದ ತಾಲ್ಲೂಕಿನ ಹಿರಿಯ ಅನುಭವಿ ಪತ್ರಕರ್ತ ರವಿ ಬಿದನೂರು ಅವರಿಗೆ ಶಿವಮೊಗ್ಗ ಲೋಕಸಭಾ ಸದಸ್ಯ ಬಿ.ವೈ. ರಾಘವೇಂದ್ರ ಪತ್ರದ ಮೂಲಕ ಶುಭ ಹಾರೈಸಿದ್ದಾರೆ.
ಗ್ರಾಮೀಣ ಜನರ ವಿವಿಧ ಸಮಸ್ಯೆಗಳ ಕುರಿತು ತಮ್ಮ ವಸ್ತುನಿಷ್ಠ ವರದಿಯ ಮೂಲಕ ರಾಜ್ಯ ಸರ್ಕಾರವನ್ನು ಎಚ್ಚರಿಸುವ ಕಾರ್ಯದಲ್ಲಿ ಯಶಸ್ವಿಯಾದ ಕಾರಣಕ್ಕೆ, ಇದೇ 2025ರ ಜನವರಿ 18- 19ರಂದು ತುಮಕೂರಿನ ಸಿದ್ದಾರ್ಥ ತಾಂತ್ರಿಕ ವಿದ್ಯಾಲಯದ ಆವರಣದಲ್ಲಿ ನಡೆದ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಮ್ಮೇಳನದಲ್ಲಿ ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿಗೆ ರವಿ ಬಿದನೂರು ಅವರು ಭಾಜನರಾಗಿದ್ದರು.
ಈ ಹಿಂದೆ 2011ರಲ್ಲಿ ಭಾರತೀಯ ದಲಿತ ಸಾಹಿತ್ಯ ಅಕಾಡೆಮಿಯಿಂದ ದಲಿತ ಸಂವೇದನೆ ವರದಿಗಾಗಿ ಜ್ಯೋತಿಬಾ ಫುಲೆ ಫೆಲೋಶಿಪ್ ಪ್ರಶಸ್ತಿ ಹಾಗೂ 2017ರಲ್ಲಿ ತಾವು ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿರುವುದು ನನ್ನ ಕಣ್ಮಂದೆ ಇನ್ನೂ ಹಸಿರಾಗಿರುವಾಗಲೇ ತಾವು ಮತ್ತೊಂದು ರಾಜ್ಯಮಟ್ಟದ ಪ್ರಶಸ್ತಿ ಪುರಸ್ಕೃತರಾಗಿರುವುದು ಸಂತಸದ ಸಂಗತಿಯಾಗಿದೆ ಎಂದಿರುವ ಸಂಸದರು, ತಮ್ಮಿಂದ ಮುಂದೆಯೂ ಗ್ರಾಮೀಣ ಜನರಿಗೆ ಅನುಕೂಲ ಆಗುವಂತಹ ಕಾರ್ಯಗಳು ನಿರಂತರವಾಗಿ ನಡೆಯಲಿ ಎಂಬ ಶುಭ ಹಾರೈಸಿದ್ದಾರೆ.
ಕಾಮೆಂಟ್ಗಳಿಲ್ಲ