ಹೊಸನಗರದಲ್ಲಿ ಎಂಎಲ್ಸಿ ರುದ್ರೇಗೌಡ ಸುದ್ದಿಗೋಷ್ಠಿ | ರೈತರ ಪಹಣಿಯಲ್ಲಿ ವಕ್ಫ್ ಬೋರ್ಡ್ ಹೆಸರು - ರಾಜ್ಯ ಸರ್ಕಾರದ ಕ್ರಮ ಖಂಡಿಸಿ ನವೆಂಬರ್4ಕ್ಕೆ ರಾಜ್ಯವಾಪ್ತಿ ಬಿಜೆಪಿ ಉಗ್ರ ಪ್ರತಿಭಟನೆ
ಹೊಸನಗರ : ರಾಜ್ಯ ಕಾಂಗ್ರೆಸ್ ಸರ್ಕಾರ ಪ್ರಸ್ತುತ ಹಲವು ಸರಣಿ ಹಗರಣಗಳ ಮೂಲಕ ಜನವಿರೋಧಿ ಆಡಳಿತಕ್ಕೆ ಮುಂದಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ರುದ್ರೇಗೌಡ ಆರೋಪಿಸಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಬಲಿಪಾಡ್ಯಮಿ ದಿನವಾದ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಸಂಸತ್ತಿನ ಕಲಾಪದ ವೇಳೆ ವಕ್ಫ್ ಬೋರ್ಡ್ ಕಾಯ್ದೆ ಕುರಿತಂತೆ ಚರ್ಚೆ ನಡೆದು, ಕಲಾಪದಲ್ಲಿ ಜಂಟಿ ಸಮಿತಿ ರಚಿಸಿ, ಸಮಿತಿಯ ನಿರ್ಧಾರ ಹೊರ ಬೀಳುವ ಮುನ್ನವೇ ರಾಜ್ಯದಲ್ಲಿ ಸಚಿವ ಜಮೀರ್ ಅಹಮದ್ ನೇತೃತ್ವದಲ್ಲಿ ವಕ್ಫ್ ಸಮಿತಿ ಹೆಸರಿನಲ್ಲಿ ರೈತರ ಜಮೀನು ಕಬಳಿಸಲು ಏನೆಲ್ಲಾ ಹುನ್ನಾರ ನಡೆಸಬೇಕಿದೆಯೋ ಅದನ್ನು ನಡೆಸುತ್ತಿದ್ದು, ಇದಕ್ಕೆ ರಾಜ್ಯ ಸರ್ಕಾರ ಕುಮ್ಮಕ್ಕು ನೀಡುತ್ತಿದೆ ಎಂದು ದೂರಿದರು.
ಈ ಹಿನ್ನೆಲೆಯಲ್ಲಿ ರಾಜ್ಯದ ಯಾವೊಬ್ಬ ರೈತನು ನೆಮ್ಮದಿಯಿಂದ ಜೀವನ ನಡೆಸುವುದು ಕಷ್ಟವಾಗಿದೆ. ಯಾವ ಘಳಿಗೆಯಲ್ಲಿ ತಮ್ಮ ಪಹಣಿಗಳಲ್ಲಿ ತಮ್ಮ ಹೆಸರು ಹೋಗಿ ವಕ್ಫ್ ಬೋರ್ಡ್ ಎಂದು ನಮೂದಾಗುವುದೋ ಎಂಬ ಆತಂಕದಲ್ಲಿ ರೈತಾಪಿ ವರ್ಗವಿದೆ. ಇದಕ್ಕೆ ಮಠ-ಮಂದಿರಗಳು ಕೂಡಾ ಹೊರತಾಗಿಲ್ಲ ಎಂದ ಶಾಸಕ ರುದ್ರೇಗೌಡ, ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಹಲವು ಹಿಂದೂ ದೇವಾಲಯಗಳ ಜಮೀನು ಸಹ ಇಂದು ವಕ್ಫ್ ಬೋರ್ಡ್ ಹೆಸರಿಗೆ ಪಹಣಿಯಲ್ಲಿ ನೋಂದಣಿಯಾಗಿರುವುದು ದುರಂತದ ಸಂಗತಿ ಎಂದರು.
ಪಕ್ಷದ ಹಿರಿಯ ಸಂಸದ ಗೋವಿಂದ ಕಾರಜೋಳ ನೇತೃತ್ವದಲ್ಲಿ ಪಕ್ಷದ ಹಲವು ನಾಯಕರು ಘಟನೆ ನಡೆದ ಸ್ಥಳವಾದ ವಿಜಯಪುರ ಜಿಲ್ಲೆಯ ಕೆಲವು ಗ್ರಾಮೀಣ ಪ್ರದೇಶಗಳಿಗೆ ಭೇಟಿ ನೀಡಿ, ಪಹಣಿ ಸಮಸ್ಯೆಗಳನ್ನು ರೈತರಿಂದ ಆಲಿಸಿದ್ದು, ಬಿಜೆಪಿ ರಾಜ್ಯಾದ್ಯಂತ ಗಂಭೀರ ಹೋರಾಟಕ್ಕೆ ಮುಂದಾಗಿದೆ. ರಾಜ್ಯದ ಪ್ರತಿ ಮಂಡಲ ವ್ಯಾಪ್ತಿಯಲ್ಲಿ ರೈತರಲ್ಲಿ ಈ ಕುರಿತು ಜಾಗೃತಿ ಮೂಡಿಸಲು ಬಿಜೆಪಿ ಕ್ರಮ ಕೈಗೊಂಡಿದ್ದು, ಇದೇ ನವೆಂಬರ್ 4ರಂದು ರಾಜ್ಯಾದ್ಯಂತ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ನೇತೃತ್ವದಲ್ಲಿ ಪಹಣಿ ತಿದ್ದುಪಡಿ ಕುರಿತಂತೆ ಬೃಹತ್ ಹೋರಾಟ ನಡೆಯಲಿದೆ. ಅಲ್ಪಸಂಖ್ಯಾತ ಸಮುದಾಯವನ್ನು ತುಷ್ಟೀಕರಿಸುವ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಈ ಪ್ರತಿಭಟನೆ ಒಂದು ಎಚ್ಚರಿಕೆ ಘಂಟೆ ಆಗಲಿದೆ ಎನ್ನುವ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಮತ್ತಿಮನೆ ಸುಬ್ರಹ್ಮಣ್ಯ, ಕಾರ್ಯದರ್ಶಿ ಮೋಹನ್ ಮಂಡಾನಿ, ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ ಎ.ವಿ. ಮಲ್ಲಿಕಾರ್ಜುನ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸುರೇಶ್ ಸ್ವಾಮಿರಾವ್, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಆಲುವಳ್ಳಿ ವೀರೇಶ್, ದೇವಾನಂದ್, ಉಮೇಶ್ ಕಂಚುಗಾರ್, ಶಿವಾನಂದ, ಯುವರಾಜ, ನಾಗಾರ್ಜುನ ಸ್ವಾಮಿ, ತೀರ್ಥೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕಾಮೆಂಟ್ಗಳಿಲ್ಲ