ಕ್ರೀಡೆಗಳಲ್ಲಿ ತೋರಿಸಿದ ಉತ್ಸಾಹವನ್ನೇ ಓದಿನಲ್ಲೂ ಪ್ರದರ್ಶಿಸಬೇಕು - ಹೊಸನಗರ ಕೊಡಚಾದ್ರಿ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಶಾಸಕ ಗೋಪಾಲಕೃಷ್ಣ ಬೇಳೂರು ಕಿವಿಮಾತು
ಹೊಸನಗರ : ಪಟ್ಟಣದಲ್ಲಿರುವ ಕೊಡಚಾದ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಮಗ್ರ ಬೆಳವಣಿಗೆಗೆ ನನ್ನ ಸಂಪೂರ್ಣ ಬೆಂಬಲವಿದ್ದು, ಇದೀಗ ಮತ್ತೆ ಕಾಲೇಜಿನ ಅಭಿವೃದ್ಧಿಗೆ 2 ಕೋಟಿ ರೂ.ಗಳ ಅನುದಾನ ಬಂದಿದ್ದು ಅದರಲ್ಲಿ ಸುಸಜ್ಜಿತ ಗ್ರಂಥಾಲಯ, ಶೌಚಾಲಯ, ಉತ್ತಮವಾದ ಕ್ಯಾಂಟೀನ್ ನಿರ್ಮಾಣ ಮಾಡಲಾಗುವುದು ಎಂದು ಸಾಗರ-ಹೊಸನಗರ ಕ್ಷೇತ್ರದ ಶಾಸಕರು, ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರು, ಕೊಡಚಾದ್ರಿ ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಬೇಳೂರು ಗೋಪಾಲಕೃಷ್ಣ ಅವರು ಹೇಳಿದರು.
ಅವರು ಇಂದು ಇಲ್ಲಿ ಕುವೆಂಪು ವಿಶ್ವವಿದ್ಯಾಲಯದ ಅಂತರ್ ಕಾಲೇಜು ಪುರುಷ ಮತ್ತು ಮಹಿಳೆಯರ ಗುಡ್ಡಗಾಡು ಓಟ ಸ್ಪರ್ಧೆಯ ವಿಜೇತರಿಗೆ ಪಾರಿತೋಷಕ ವಿತರಿಸಿ ಮಾತನಾಡುತ್ತಿದ್ದರು.
ಹೊಸನಗರದ ವಿದ್ಯಾರ್ಥಿಗಳು ಎಲ್ಲ ಕ್ರೀಡೆಗಲ್ಲೂ ತಮ್ಮ ಹಿರಿಮೆಯನ್ನು ಪ್ರದರ್ಶಿಸುತ್ತಿದ್ದು, ಕ್ರೀಡೆಗಳಲ್ಲಿ ತೋರಿಸಿದ ಉತ್ಸಾಹವನ್ನೇ ಓದಿನಲ್ಲೂ ಪ್ರದರ್ಶಿಸಿ ರಾಜ್ಯಮಟ್ಟದಲ್ಲೇ ತಮ್ಮ ಹಿರಿಮೆಯನ್ನು ಪ್ರದರ್ಶಿಸಬೇಕಿದೆ. ಇದಕ್ಕಾಗಿ ಯಾವುದೇ ಸೌಲಭ್ಯ ಬೇಕಿದ್ದರೂ ತಮ್ಮನ್ನು ಸಂಪರ್ಕಿಸುವಂತೆ ವಿದ್ಯಾರ್ಥಿಗಳಿಗೆ ಹೇಳಿದರು.
ಗುಡ್ಡಗಾಡು ಓಟ ಸ್ಪರ್ಧೆಯ ವಿಜೇತರು : 10 ಕಿ.ಮೀ ಅಂತರದ ಗುಡ್ಡಗಾಡು ಓಟದ ಸ್ಪರ್ಧೆಯಲ್ಲಿ ಈ ಹಿಂದಿನ 34 ನಿಮಿಷದ ದಾಖಲೆಯನ್ನು ಶಿವಮೊಗ್ಗ ಡಿವಿಎಸ್ ಕಾಲೇಜಿನ ಕೆ. ಕಿರಣ್ ಇಂದು ಕೇವಲ 32 ನಿಮಿಷಗಳಲ್ಲಿ ಕ್ರಮಿಸಿ ದಾಖಲೆ ನಿರ್ಮಿಸಿದರೆ, ಮಹಿಳೆಯರ ವಿಭಾಗದಲ್ಲಿ ಡಿವಿಎಸ್ ಕಾಲೇಜಿನ ಹೆಚ್. ವಿ. ದೀಕ್ಷಾ ಪ್ರಥಮ ಸ್ಥಾನ ಗಳಿಸುವ ಮೂಲಕ ಡಿವಿಎಸ್ ಕಾಲೇಜಿನ ಸ್ಪರ್ಧಿಗಳು ಪುರುಷ ಹಾಗೂ ಮಹಿಳಾ ವಿಭಾಗದ ಎರಡು ವಿಭಾಗಗಳಲ್ಲಿನ ಪಾರಿತೋಷಕವನ್ನು ಬಾಚಿಕೊಂಡರು.
ಮಹಿಳೆಯರ ವಿಭಾಗದಲ್ಲಿ ಶಂಕರಘಟ್ಟದ ಕೆ.ಪಿ. ಮಾನಸ ಎರಡನೇ ಸ್ಥಾನ, ತೀರ್ಥಹಳ್ಳಿಯ ಕೆ.ಎಸ್. ಸ್ವಾಗತ ಮೂರನೇ ಸ್ಥಾನ, ಹೊಸನಗರ ಕೊಡಚಾದ್ರಿ ಕಾಲೇಜಿನ ಎಂ.ಪಿ. ಪುಷ್ಪ ನಾಲ್ಕನೇ ಸ್ಥಾನ, ಸಾಗರದ ಎಸ್. ಸಂಜನಾ ಐದನೇ ಸ್ಥಾನ, ತೀರ್ಥಹಳ್ಳಿಯ ಡಿ.ಪಿ. ಪ್ರೀತಿ ಆರನೇಯ ಸ್ಥಾನ ಗಳಿಸಿದರು.
ಪುರುಷರ ವಿಭಾಗದಲ್ಲಿ ಎನ್.ಆರ್. ಪುರದ ಶರಪಂಜಿತ ಆರ್. ಎರಡನೇ ಸ್ಥಾನ, ಶಿವಮೊಗ್ಗ ಡಿವಿಎಸ್ ಕಾಲೇಜಿನ ಎಂ.ಎಸ್. ಆಶ್ರಿತ, ಹೊಸನಗರ ಕೊಡಚಾದ್ರಿ ಕಾಲೇಜಿನ ಶಶಾಂಕ್ ನಾಲ್ಕನೇ ಸ್ಥಾನ ಶಂಕರಘಟ್ಟದ ನಿತಿನ್ ಐದನೇ ಸ್ಥಾನ, ಶಿವಮೊಗ್ಗ ಡಿವಿಎಸ್ ಕಾಲೇಜಿನ ವೈ.ಎಸ್. ಸುದರ್ಶನ್ ಆರನೇಯ ಸ್ಥಾನ ಗಳಿಸಿದರು.
ಕೊಡಚಾದ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಕೆ. ಉಮೇಶ್ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ, ಕಾಲೇಜು ಅಭಿವೃದ್ದಿ ಸಮಿತಿಯ ಸದಸ್ಯರಾದ ಡಾ. ಕವಿತಾ ಪ್ರವೀಣ್, ಎಂ. ಗುಡ್ಡೇಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷ ಜಿ.ಎನ್. ಪ್ರವೀಣ, ಎಂ.ಪಿ. ಲೋಕೇಶ್ವರ, ವರ್ತಕ ಎಸ್. ಎನ್. ರಾಜಮೂರ್ತಿ, ಪೋಷಕ ಶಿಕ್ಷಕ ಸಮಿತಿಯ ಅಧ್ಯಕ್ಷ ಧರ್ಮರಾವ್, ಐಕ್ಯೂಏಸಿ ಸಂಚಾಲಕ ಸಿ.ಹೆಚ್. ರವಿ, ಕ್ರೀಡಾ ವಿಭಾಗದ ಸಂಚಾಲಕ ಡಾ. ಹೆಚ್. ಲೋಕೇಶಪ್ಪ, ಶ್ರೀಧರ್ ಹಳಗುಂದ, ಅಣ್ಣಪ್ಪ, ಮಹೇಂದ್ರ, ನಾಗೇಶ್, ಬೃಂದಾವನ ಪ್ರವೀಣ್, ಬಗರ್ಹುಕುಂ ಸಮಿತಿಯ ಶ್ರೀಮತಿ ಸಾಕಮ್ಮ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ನಿಶ್ಚಿತ ಸಂಗಡಿಗರಿಂದ ಪ್ರಾರ್ಥನೆಯಾದ ಬಳಿಕ, ಡಾ. ಶ್ರೀಪತಿ ಹಳಗುಂದ ಪ್ರಾಸ್ತಾವಿಕ ಭಾಷಣ ಮಾಡಿದರು. ಶ್ರೀಮತಿ ವಸುಧಾ ಕಾರ್ಯಕ್ರಮ ನಿರೂಪಿಸಿದರು ದೈಹಿಕ ಶಿಕ್ಷಣ ನಿರ್ದೇಶಕ ಬಿ.ಜಿ. ಸುಬ್ರಮಣ್ಯ ವಂದಿಸಿದರು.
ಕಾಮೆಂಟ್ಗಳಿಲ್ಲ