ಜಯನಗರದಲ್ಲಿ ತಾಲ್ಲೂಕು ವಿಶ್ವಕರ್ಮ ಮಹಾಸಭಾದಿಂದ ವಿಶ್ವಕರ್ಮ ಮಹೋತ್ಸವ | ವಿಶ್ವಕರ್ಮ ಜನಾಂಗ ಇಲ್ಲದ ಜಗತ್ತು ಶೂನ್ಯ - ಕಣಿವೆ ಬಾಗಿಲು ಸುಬ್ರಹ್ಮಣ್ಯ
ಹೊಸನಗರ : ಬ್ರಾಹ್ಮಿ ಮುಹೂರ್ತದಲ್ಲಿ ಸ್ನಾನ, ಪ್ರಾತಃ ಸಂಧ್ಯಾದಿ ಕರ್ಮಗಳ ಅನುಷ್ಠಾನ ಕೈಗೊಳ್ಳುವ ಮಂದಿಗೆ ರೋಗರುಜಿನಾದಿಗಳು ಬರುವುದು. ಅಂತಹವರಿಗೆ ದೇವತೆಗಳ ಅನುಗ್ರಹ ದೊರೆತು ಉತ್ತಮ ಆರೋಗ್ಯ ಪ್ರಾಪ್ತಿಯಾಗುತ್ತದೆ ಎಂಬ ಸಂಗತಿ ನಮ್ಮ ಋಷಿಮುನಿ ಪರಂಪರೆಯಿಂದ ನಮಗೆ ಬಂದ ಬಳುವಳಿಯಾಗಿದೆ ಎಂದು ಪುರೋಹಿತ ದೇವೇಂದ್ರ ಶರ್ಮ ತಿಳಿಸಿದರು.
ಜಯನಗರದಲ್ಲಿ ತಾಲ್ಲೂಕು ವಿಶ್ವಕರ್ಮ ಮಹಾಸಭಾ ಹಮ್ಮಿಕೊಂಡಿದ್ದ ವಿಶ್ವಕರ್ಮ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು ಧಾರ್ಮಿಕ ವಿಶೇಷ ಉಪನ್ಯಾಸ ನೀಡಿದರು.
ಮನುಷ್ಯನಾಗಿ ಜನಿಸಿದ ಮೇಲೆ ಸಂಸ್ಕಾರಗಳು ಅಗತ್ಯ. ವಿಶ್ವಕರ್ಮಿಗಳು ಜಪ, ತಪ, ಪೂಜಾನುಷ್ಠಾನದಿಂದ ಮಾತ್ರವೇ ನೆಮ್ಮದಿ ಬದುಕು ಕಾಣಲು ಸಾಧ್ಯವಿದೆ ಎಂದು ಅವರು ಹೇಳಿದರು.
VIDEO - ಹೊಸನಗರದಲ್ಲಿ ಶ್ರೀ ವಿಶ್ವಕರ್ಮ ಜಯಂತ್ಯೋತ್ಸವಕ್ಕೆ ಅದ್ಧೂರಿ ಚಾಲನೆ
ಈ ಸಂದರ್ಭದಲ್ಲಿ ಕೊಡುಗೈ ದಾನಿ ರಾಮಚಂದ್ರಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಕಣಿವೆ ಬಾಗಿಲು ಸುಬ್ರಹ್ಮಣ್ಯ ಸನ್ಮಾನ ಸ್ವೀಕರಿಸಿ ಮಾತನಾಡಿ, ವಿಶ್ವಕರ್ಮಿಯರು ಪ್ರಾತಃಸ್ಮರಣೀಯರು. ಅವರಲ್ಲಿದಿರುವ ಜಗತ್ತನ್ನು ಊಹಿಸಲು ಆಗದು. ವಿವಿಧ ಕರಕುಶಲ ಕಾರ್ಯಗಳಲ್ಲಿ ಅವರು ಸಿದ್ಧಹಸ್ತರು. ಬೇಲೂರು-ಹಳೇಬೀಡು, ಆಯೋಧ್ಯೆ, ಮಥುರ ಶಿಲ್ಪಕಲೆಗಳೇ ಇದಕ್ಕೆ ಸಾಕ್ಷಿ. ವಿಶ್ವಕರ್ಮ ಚಿಕ್ಕ ಸಮಾಜವಾದರೂ ಇಡೀ ವಿಶ್ವಕ್ಕೆ ಮಾದರಿ ಹಾಗೂ ಅನಿವಾರ್ಯವಾಗಿದೆ. ಆದರೆ, ಸಂಘಟನೆ ಅತಿ ಮುಖ್ಯವಾಗಿದೆ. ಕಾರಣ ಸಂಘಟನೆಯಲ್ಲಿ ದೇವರನ್ನು ಕಾಣುವ ಸನಾತನ ಸಂಸ್ಕೃತಿ ನಮ್ಮದು. ಶಿಕ್ಷಣದ ಜೊತೆಗೆ ವಿವೇಕ ಮೈಗೂಡಿಸಿಕೊಂಡಾಗ ಮಾತ್ರ ಸಮಾಜ ಸುಸ್ಥಿತಿಯನ್ನು ಕಾಣಬಹುದಾಗಿದೆ ಎಂದರು.
ಮೇಲಿನಬೆಸಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀನಿವಾಸ ರೆಡ್ಡಿ ಮಾತನಾಡಿ, ದಾನಿಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯ ಆಗಬೇಕಿದೆ. ಈ ನಿಟ್ಟಿನಲ್ಲಿ ವಿಶ್ವಕರ್ಮ ಸಮಾಜ ಮುಂಚೂಣಿಯಲ್ಲಿದ್ದು, ರಾಜಕಾರಣ ಹೊರತು ಪಡಿಸಿ, ಅಗತ್ಯ ಸಂದರ್ಭಗಳಲ್ಲಿ ವೈಯಕ್ತಿಕ ಸಹಾಯ ನೀಡುವ ಭರವಸೆ ನೀಡಿದರು.
ಇದೇ ವೇಳೆ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳ ಜೊತೆಗೆ ಕ್ರೀಡಾಕೂಟದಲ್ಲಿ ವಿಜೇತ ಸ್ಪರ್ಧಾಳುಗಳಿಗೆ ಆತ್ಮೀಯ ಸನ್ಮಾನ ನೆರವೇರಿಸಲಾಯಿತು.
ತಾಲ್ಲೂಕು ವಿಶ್ವಕರ್ಮ ಸಮಾಜದ ಅಧ್ಯಕ್ಷ ದೇವದಾಸ ಆಚಾರ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು, ಮುಖ್ಯ ಅತಿಥಿಗಳಾಗಿ ಮಂಜುಳ ಗರ್ತಿಕೆರೆ, ಕಲುಗಡ್ಡೆ ಯಲ್ಲಪ್ಪ ಆಚಾರ್ಯ, ಪ್ರಭಾಕರ ಆಚಾರ್ಯ, ಬಾಬು ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು. ಶಿಲ್ಪ ಪ್ರಾರ್ಥಿಸಿ, ಅನುಷಾ ಸ್ವಾಗತಿಸಿದರು. ಸಂತೋಷ್ ಹಾಗೂ ಅಂಬಿಕಾ ನಾಗರಾಜ್ ಆಚಾರ್ಯ ನಿರೂಪಿಸಿ, ಸುರೇಶ್ ಆಚಾರ್ಯ ವಂದಿಸಿದರು.
ಕಾಮೆಂಟ್ಗಳಿಲ್ಲ