ಹೊಸನಗರ ಮೆಸ್ಕಾಂಗೆ ಬರಲಿದೆ ನೂತನ ಲಾರಿ - ನಾಳೆ ಸಾಗರದಲ್ಲಿ ನೂತನ ಲಾರಿಗಳಿಗೆ ಶಾಸಕ ಗೋಪಾಲಕೃಷ್ಣ ಬೇಳೂರು ಅವರಿಂದ ಚಾಲನೆ
ಹೊಸನಗರ : ಮೆಸ್ಕಾಂ ಸಾಗರ ಉಪವಿಭಾಗದ ವತಿಯಿಂದ ಮಂಜೂರಾಗಿರುವ ನೂತನ ಲಾರಿಗಳಿಗೆ ಶಾಸಕರು, ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕೆ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ನಾಳೆ ಚಾಲನೆ ನೀಡಲಿದ್ದು, ಹೊಸನಗರ ಮೆಸ್ಕಾಂ ವಿಭಾಗಕ್ಕೂ ಹೊಸ ಲಾರಿ ಲಭ್ಯವಾಗಲಿದೆ.
ವಿಸ್ತೀರ್ಣದಲ್ಲಿ ದೊಡ್ಡದಾಗಿರುವ ಹೊಸನಗರ ತಾಲ್ಲೂಕಿನ ಮೆಸ್ಕಾಂ ಇಲಾಖೆಗೆ ಸೂಕ್ತ ವಾಹನವಿಲ್ಲದೆ ವಿದ್ಯುತ್ ಸಂಪರ್ಕ, ನಿರ್ವಹಣೆಗೆ ಸಾಕಷ್ಟು ತೊಂದರೆಯಾಗಿತ್ತು. ಮೊದಲಿದ್ದ ಲಾರಿ ಅವಧಿ ಮುಗಿದು ಶೆಡ್ ಸೇರಿತ್ತು. ಈ ಬಗ್ಗೆ ಗಮನ ಸೆಳೆದ ನಂತರ ಬೇರೆ ಲಾರಿ ಕಳುಹಿಸಿಕೊಡಲಾಯಿತಾದರೂ, ಅದು ಕೂಡ ಸಂಚಾರಕ್ಕೆ ಯೋಗ್ಯವಲ್ಲದ ಕಾರಣ ಬರಬರುತ್ತಿದ್ದಂತೆ ಶೆಡ್ ಸೇರಿಕೊಂಡಿತ್ತು. ಈ ಬಗ್ಗೆ ಕೂಡಾ ಮಾಧ್ಯಮಗಳ ಮೂಲಕ ಬೆಳಕು ಚೆಲ್ಲಲಾಗಿತ್ತು. ಇದೀಗ ಈ ಸಮಸ್ಯೆ ಈಡೇರುವ ಸಮಯ ಬಂದಿದ್ದು, ನಾಳೆ ಹೊಸನಗರ ಮೆಸ್ಕಾಂಗೆ ಹೊಸ ಲಾರಿ ಲಭ್ಯವಾಗಲಿದೆ.
ಅರಸಾಳಿನಿಂದ ನಿಟ್ಟೂರಿನವರೆಗೆ, ಪುರಪ್ಪೇಮನೆಯಿಂದ ಯಡೂರುವರೆಗೆ ಮಾತ್ರವಲ್ಲದೇ ಮಾಣಿ ಜಲಾಶಯದ ಆಚೆಗಿರುವ ಕೊರನಕೋಟೆ ಸುತ್ತಮುತ್ತಲಿನ ಗ್ರಾಮದ ವಿದ್ಯುತ್ ಸಮಸ್ಯೆಯನ್ನು ಹೊಸನಗರ ಮೆಸ್ಕಾಂ ಇಲಾಖೆಯಿಂದಲೇ ನಿರ್ವಹಿಸಬೇಕಿತ್ತು. ಈ ಊರುಗಳಿಗೆ ಅಗತ್ಯ ಬಿದ್ದಾಗ ವಿದ್ಯುತ್ ಕಂಬಗಳು, ಪರಿವರ್ತಕ ಸರಬರಾಜು ಮಾಡಲು ಲಾರಿ ಇಲ್ಲದೆ ಒದ್ದಾಡಬೇಕಿತ್ತು. ಸಕಾಲದಲ್ಲಿ ಸೇವೆ ಸಲ್ಲಿಸಲು ಕೂಡ ಕಷ್ಟವಾಗಿತ್ತು. ಇದೀಗ ಹೊಸ ಲಾರಿ ಮಂಜೂರಾದ ಹಿನ್ನೆಲೆಯಲ್ಲಿ ಮೆಸ್ಕಾಂ ಇಲಾಖೆ ನೌಕರರು, ಕಾರ್ಮಿಕರು ನಿಟ್ಟುಸಿರು ಬಿಡುವಂತಾಗಿದೆ.
ಕಾಮೆಂಟ್ಗಳಿಲ್ಲ