ಹಾನಿಗೊಳಗಾದ ಹುಲಿಕಲ್ ಘಾಟಿ ರಸ್ತೆ ವೀಕ್ಷಿಸಿದ ಅಧಿಕಾರಿಗಳ ತಂಡ - ಸಂಚಾರ ಬಂದ್ ಮಾಡುವ ಪ್ರಸ್ತಾಪವಿಲ್ಲ- ತಹಶೀಲ್ದಾರ್ ಸ್ಪಷ್ಟನೆ
ಹೊಸನಗರ : ತಾಲ್ಲೂಕಿನಲ್ಲಿ ಈ ಬಾರಿಯ ಮುಂಗಾರು ಮಳೆಗೆ ಹಾನಿಗೊಳಗಾದ ಹೆದ್ದಾರಿಗಳ ವೀಕ್ಷಣೆಗೆ ಜಿಲ್ಲಾ ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ತಂಡವು ತಾಲ್ಲೂಕು ಆಡಳಿತದ ನೇತೃತ್ವದಲ್ಲಿ ವಿವಿಧೆಡೆ ನಿನ್ನೆ ಭೇಟಿ ನೀಡಿತು.
ರಾಜ್ಯ ಹೆದ್ದಾರಿ 52ರ ತೀರ್ಥಹಳ್ಳಿ- ಕುಂದಾಪುರ ಸಂಪರ್ಕ (ಕಾಕೋಡು ಕ್ರಾಸ್) ಹಾಗೂ ಮಾಸ್ತಿಕಟ್ಟೆ ಹುಲಿಕಲ್ ಘಾಟಿಯ ಮಾವಿನಗದ್ದೆ ಗ್ರಾಮದ ಸಮೀಪದ ಧರೆ ಕುಸಿದ ಸ್ಥಳಕ್ಕೆ ಭೇಟಿ ನೀಡಿದ ತಂಡ ಪರಿಶೀಲನೆ ನಡೆಸಿತು.
ಲೋಕೋಪಯೋಗಿ ಇಲಾಖೆಯ ಕಾರ್ಯ ಪಾಲಕ ಇಂಜಿನಿಯರ್ ಜಗದೀಶ್ ನಾಯ್ಕ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಬಿ.ಎಸ್ ನಾಗೇಶ್, ಎಇಇ ಸಂತೋಷ ನಾಯ್ಕ್, ಹೊಸನಗರ ಲೋಕೋಪಯೋಗಿ ವಿಭಾಗದ ಸಹಾಯಕ ಇಂಜಿನಿಯರ್ ಕೊಟ್ರೇಶ್ ಹಾಗೂ ವಿಶ್ವಾಸ್ ಸ್ಥಳ ಪರಿಶೀಲನೆ ಮಾಡಿ, ಮಳೆಗಾಲದ ಬಳಿಕ ಕಾಮಗಾರಿ ಅನುಷ್ಠಾನಕ್ಕೆ ಮುಂದಾಗುವಂತೆ ಗುತ್ತಿಗೆದಾರ ಸಿ.ವಿ. ಚಂದ್ರಶೇಖರ್, ಹೆಚ್.ಎಸ್. ಪ್ರದೀಪ್ ಕುಮಾರ್ ಅವರಿಗೆ ಸೂಚಿಸಿದರು.
ಇದೇ ವೇಳೆ ಹುಲಿಕಲ್ ಘಾಟಿ ರಸ್ತೆಯ ವಾಹನ ಸಂಚಾರ ಬಂದ್ ಮಾಡುವ ಬಗ್ಗೆ ಯಾವುದೇ ಪ್ರಸ್ತಾಪ ತಾಲ್ಲೂಕು ಆಡಳಿತದ ಮುಂದೆ ಇಲ್ಲ ಎಂದು ತಹಶೀಲ್ದಾರ್ ರಶ್ಮಿ ಹೆಚ್.ಜೆ ಸ್ಪಷ್ಟ ಪಡಿಸಿದ್ದಾರೆ.
ಕಾಮೆಂಟ್ಗಳಿಲ್ಲ