Sports Post

ಪುಸ್ತಕ ಖರೀದಿಗೆ ಇಲ್ಲಿ ಕ್ಲಿಕ್‌ ಮಾಡಿ

ಈಗ ಬಂದ ಸುದ್ದಿ...

ಹೊಸನಗರದಲ್ಲಿ ಕಚೇರಿ ಉದ್ಘಾಟಿಸಿದ ಪಕ್ಷೇತರ ಅಭ್ಯರ್ಥಿ ಕೆ.ಎಸ್‌. ಈಶ್ವರಪ್ಪ - ಮೋದಿ ನನ್ನ ಹಾರ್ಟಿನಲ್ಲಿದ್ದಾರೆ, ಪುತ್ರ ವ್ಯಾಮೋಹದಿಂದ ಬಿಜೆಪಿ ಹೊರತರಲು ನನ್ನ ಸ್ಪರ್ಧೆ ಎಂದು ಮತ್ತೆ ಕುಟುಕಿದ ಕೆ.ಎಸ್‌.ಈ

ಹೊಸನಗರ : ಇಂದು ಪಟ್ಟಣಕ್ಕೆ ಆಗಮಿಸಿದ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕೆ.ಎಸ್. ಈಶ್ವರಪ್ಪ, ಮಾಜಿ ಶಾಸಕ ಗೂಳಿಹಟ್ಟಿ ಶೇಖರ್‌ ಸೇರಿದಂತೆ ಸ್ಥಳೀಯ ಮುಖಂಡರು ಹಾಗೂ ನೂರಾರು ಬೆಂಬಲಿಗರೊಂದಿಗೆ ಶಿವಮೊಗ್ಗ ರಸ್ತೆಯಲ್ಲಿ ತಾಲ್ಲೂಕಿನ ತಮ್ಮ ಚುನಾವಣಾ ಕಚೇರಿಯನ್ನು ಉದ್ಘಾಟಿಸಿದರು. ಆನಂತರ ಬೆಂಬಲಿಗರೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯಲ್ಲಿ ಸಾಗಿದ ಈಶ್ವರಪ್ಪ ಮತ ಯಾಚಿಸಿ, ಈಡಿಗರ ಸಭಾ ಭವನದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಭಾಗಿಯಾದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಬಿಜೆಪಿ ಪಕ್ಷ ಸೈದ್ಧಾಂತಿಕ ತಳಹದಿಯ ಮೇಲೆ ಕೆಲಸ ಮಾಡುವ ಪಕ್ಷ. ಆದರೆ ಇತ್ತೀಚೆಗೆ ಕುಟುಂಬ ರಾಜಕಾರಣ, ಜಾತಿ ರಾಜಕಾರಣ ಪಕ್ಷದಲ್ಲಿ ಕಾಣುತ್ತಿರುವುದು ಪಕ್ಷದ ಬೆಳವಣಿಗೆಗೆ ಮಾರಕವಾಗಿದೆ ಎಂದು ಹೇಳಿದರು. 

ಯಡಿಯೂರಪ್ಪ ಹಾಗೂ ಅವರ ಮಕ್ಕಳು ಸಂಪೂರ್ಣ ಆಡಳಿತ ತಮ್ಮ ಕುಟುಂಬದಲ್ಲಿಯೇ ಇರಬೇಕೆಂಬ ಅಪೇಕ್ಷೆ ಹೊಂದಿದ್ದಾರೆ. ಆದರೆ ಬಿಜೆಪಿ ಲಕ್ಷಾಂತರ ಮಂದಿ ಕಾರ್ಯಕರ್ತರು ತಪಸ್ಸಿನಂತೆ ಕಟ್ಟಿ ಬೆಳೆಸಿದ ಪಕ್ಷ. ಕೇಂದ್ರದ ನಾಯಕರು ಹಾಗೂ ನರೇಂದ್ರ ಮೋದಿ ಅವರು ರಾಜ್ಯದ ಮೇಲೆ ಇಟ್ಟಿರುವ ಭರವಸೆಯನ್ನು ಹುಸಿಯಾಗಿಸಲು ಮುಂದಾಗಿದ್ದಾರೆ. ಹೊಂದಾಣಿಕೆಯ ರಾಜಕಾರಣದಿಂದ ಪಕ್ಷದ ಮೂಲ ಕಾರ್ಯಕರ್ತರು ನೊಂದಿದ್ದಾರೆ ಎಂದರು.

ಶಿವಮೊಗ್ಗ ಜಿಲ್ಲೆಯ ಮಣ್ಣಿಗೆ ಸಂಘಟನೆ, ಸಿದ್ದಾಂತಕ್ಕೆ ಬೆಲೆ ಇದೆ. ಲೋಕಸಭೆ ಚುನಾವಣೆಯಲ್ಲಿ ತಮ್ಮ ಉಮೇದುವಾರಿಕೆಯನ್ನು ಬೆಂಬಲಿಸುತ್ತಿರುವ ಅಪಾರ ಸಂಖ್ಯೆಯ ಜನಸಮೂಹವೇ ಇದಕ್ಕೆ ಸಾಕ್ಷಿ. ತಾವು ಯಾವುದೇ ಕಾರಣಕ್ಕೂ ಚುನಾವಣೆಯಿಂದ ಹಿಂದೆ ಸರಿಯುವುದಿಲ್ಲ. ಅಪಪ್ರಚಾರ ಮಾಡಿ ಗೆಲ್ಲಲು ಸಾಧ್ಯವಿಲ್ಲ. ಹಿಂದೂ ಸಂಘಟನೆಗಳು ತಮಗೆ ಬೆಂಬಲ ಸೂಚಿಸಿವೆ. ನನ್ನ ಗೆಲುವು ನಿಶ್ಚಿತ. ಎರಡನೇ ಸ್ಥಾನದಲ್ಲಿ ಬಿ.ವೈ.ರಾಘವೇಂದ್ರ ಹಾಗೂ ಗೀತಾ ಶಿವರಾಜ್ ಕುಮಾರ್‌ ಇವರಲ್ಲಿ ಯಾರಿರುತ್ತಾರೆ ಎಂದು ಹೇಳಲಿಕ್ಕಾಗುವುದಿಲ್ಲ ಎಂದರು.

ಗ್ರಾಮ ಪಂಚಾಯಿತಿ ಸದಸ್ಯ ವಾಟಗೋಡು ಸುರೇಶ್ ಮಾತನಾಡಿ, ಬಿಜೆಪಿಯನ್ನು ಸ್ವಚ್ಛಗೊಳಿಸಬೇಕಿದೆ. ಮೂಲ ಬಿಜೆಪಿ ಕಾರ್ಯಕರ್ತರನ್ನು ದೂರ ಮಾಡಲಾಗಿದೆ. ಸಾಗರ ಹಾಗೂ ಸೊರಬದಲ್ಲಿ ಬಿಜೆಪಿ ಅಭ್ಯರ್ಥಿಗಳಾದ ಹರತಾಳು ಹಾಲಪ್ಪ ಹಾಗೂ ಕುಮಾರ ಬಂಗಾರಪ್ಪಅವರ ಸೋಲಿಗೆ ಯಡಿಯೂರಪ್ಪ ಅವರೇ ಕಾರಣ. ಹಿಂದುಳಿದ ವರ್ಗಕ್ಕೆ ಸೇರಿದ ಅವರು ಈಗ ಈಶ್ವರಪ್ಪ ಅವರನ್ನು ಬೆಂಬಲಿಸುವ ಮೂಲಕ ತಮಗಾದ ಅನ್ಯಾಯಕ್ಕೆ ತಕ್ಕ ಉತ್ತರ ನೀಡಬೇಕು ಎಂದರು.

ಮಾಜಿ ಶಾಸಕ ಗೂಳಿಹಟ್ಟಿ ಶೇಖರ್, ನಳಿನಿ ರಾವ್ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದರು. ಪ್ರಮುಖರಾದ ತ.ಮ. ನರಸಿಂಹ, ವಡಾಹೊಸಳ್ಳಿ ಕುಮಾರಸ್ವಾಮಿ, ರಾಘವೇಂದ್ರ, ಅದರಂತೆ ಸತೀಶ್, ಕುಂಬ್ಳೆ ಸುರೇಶ್ ಮತ್ತಿತರರು ಉಪಸ್ಥಿತರಿದ್ದರು. 

ಕಾಮೆಂಟ್‌ಗಳಿಲ್ಲ