Sports Post

ಪುಸ್ತಕ ಖರೀದಿಗೆ ಇಲ್ಲಿ ಕ್ಲಿಕ್‌ ಮಾಡಿ

ಈಗ ಬಂದ ಸುದ್ದಿ...

ಹೊಸನಗರದ ಕುವೆಂಪು ವಿದ್ಯಾ ಸಂಸ್ಥೆಯಲ್ಲಿ ಪ್ರತಿಭಾ ಪುರಸ್ಕಾರ ಹಾಗೂ ಪ್ರತಿಭಾ ಪ್ರದರ್ಶನ ಸಮಾರಂಭ - ವಿದ್ಯಾರ್ಥಿಗಳಿಗೆ ಶಿಕ್ಷಣದ ಮಹತ್ವ ತಿಳಿಸಿದ ಮಳಲಿ ಶ್ರೀಗಳು

ಹೊಸನಗರ : ಮನುಷ್ಯತ್ವ, ಮಾನವೀಯತೆಯನ್ನು ಹೊಂದಬೇಕಾದರೆ ಸುಸಂಸ್ಕೃತವಾದ ಶಿಕ್ಷಣ ಅಗತ್ಯ. ವಿದ್ಯೆ ವ್ಯಕ್ತಿಯ ಆಕರ್ಷಣೆ. ಆದ್ದರಿಂದ ಸಂಸ್ಕಾರಯುತ ಶಿಕ್ಷಣ ಕಲಿತು ಧರ್ಮವಂತರಾಗಿ ಬಾಳುವಂತೆ ಕೋಣಂದೂರು ಸಮೀಪದ ಮಳಲಿ ಮಠದ  ಶ್ರೀ ಡಾ. ಗುರು ನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಗಳು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಅವರು ಇಲ್ಲಿನ ಕುವೆಂಪು ವಸತಿ ವಿದ್ಯಾ ಸಂಸ್ಥೆಯಲ್ಲಿ ನಿನ್ನೆ ನಡೆದ ಪ್ರತಿಭಾ ಪುರಸ್ಕಾರ ಹಾಗೂ ಪ್ರದರ್ಶನ ಸಮಾರಂಭದಲ್ಲಿ ಆಶೀರ್ವಚನ ನೀಡುತ್ತಾ, ಕ್ಷಮೆ ಮತ್ತು ಅಹಂ ಎರಡು ಗುಣಗಳು. ಕ್ಷಮೆ ಎನ್ನುವುದು ಸಂಬಂಧವನ್ನು ಉಳಿಸಿದರೆ ಅಹಂ ಎನ್ನುವುದು ಸಂಬಂಧಗಳನ್ನು ನಾಶಪಡಿಸುತ್ತದೆ ಎಂದು ಹೇಳಿದರು.

ಪ್ರತಿಯೊಬ್ಬರಿಗೂ ಕ್ಷಮಾಗುಣ ಅತ್ಯಂತ ಅವಶ್ಯಕ. ಆದ್ದರಿಂದ ಶ್ರೀ ಜಗದ್ಗುರು ರೇಣುಕಾ ಭಗವತ್ಪಾದರು ಸಿದ್ಧಾಂತ ಶಿಖಾಮಣಿಯಲ್ಲಿ ದಶ ಸೂತ್ರಗಳನ್ನು ಬೋಧಿಸುವಾಗ, ಕ್ಷಮಾ ಗುಣದ ಬಗ್ಗೆ ಅತ್ಯಂತ ಅಮೂಲ್ಯವಾಗಿ ಬೋಧಿಸಿದ್ದಾರೆ. ಕ್ಷಮೆಯ ಗುಣವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವುದರಿಂದ ಪಾವನ ಬದುಕನ್ನು ಕಾಣಬಹುದೆಂದರು.

ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಶುದ್ಧವಾದ ಕ್ಷಮಾಗುಣವನ್ನು ಅಳವಡಿಸಿಕೊಂಡು ಅಧ್ಯಯನ ನಡೆಸಿದರೆ ವಿದ್ಯೆಯು ಸಮೃದ್ಧಿಗೊಂಡು ಬದುಕು ಸಮೃದ್ಧವಾಗಿರಲು ಸಾಧ್ಯ ಎಂದು ತಿಳಿಸಿದ ಶ್ರೀ ಡಾ. ಗುರು ನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಗಳು, ಮಾತಾ ಪಿತೃಗಳನ್ನು ಗುರುಹಿರಿಯರನ್ನು ಗೌರವದಿಂದ ಕಾಣುವುದೇ ಉತ್ತಮ ಹಾಗೂ ನಿಜ ಜೀವನದ ಸಾರಾಂಶವಾಗಿದೆ ಎಂದರು.

ಕುವೆಂಪು ವಸತಿ ವಿದ್ಯಾಲಯದ ವ್ಯವಸ್ಥಾಪಕರು, ಭಾರತ ಸೇವಾರತ್ನ ಮತ್ತು ಪ್ರೈಡ್ ಆಫ್ ಕರ್ನಾಟಕ ಪ್ರಶಸ್ತಿ ಪುರಸ್ಕೃತರಾದ ಸೊನಲೆ ಶ್ರೀನಿವಾಸ್ ಅಧ್ಯಕ್ಷತೆ ವಹಿಸಿದ್ದ ಸಮಾರಂಭವನ್ನು ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಂ.ವಿ. ಜಯರಾಮ್ ಉದ್ಘಾಟಿಸಿದರು.

ಎಂ. ಗುಡ್ಡೆಕೊಪ್ಪ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಶ್ರೀಮತಿ ಸುಧಾ ಚೆನ್ನಪ್ಪ ಸಂಸ್ಥೆಯ ’ನವಚೈತನ್ಯ’ ಕೃತಿ ಬಿಡುಗಡೆ ಮಾಡಿದರೆ, ’FLAIR’ ಆಂಗ್ಲ ಭಾಷೆ ಕೃತಿಯನ್ನು ಸಾಹಿತಿಗಳು ಹಾಗೂ ಶಿಕ್ಷಣ ತಜ್ಞರಾದ ತಿರುಪತಿ ನಾಯಕ್ ಅವರು ಬಿಡುಗಡೆ ಮಾಡಿದರು.

ಸಾಮಾಜಿಕ ಕಾರ್ಯಕರ್ತ ಎನ್. ಆರ್. ದೇವಾನಂದ್, ಎನ್. ಶ್ರೀಧರ ಉಡುಪ, ಪರಿಸರ ಪ್ರೇಮಿ ಚಕ್ರವಾಕ ಸುಬ್ರಹ್ಮಣ್ಯ, ಪಟ್ಟಣ ಪಂಚಾಯತಿ ಮಾಜಿ ಉಪಾಧ್ಯಕ್ಷೆ ಶ್ರೀಮತಿ ಕೃಷ್ಣವೇಣಿ, ನಗರ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಕೆ.ಎನ್. ಗಂಗಾಧರ, ಅಂತರಗಂಗೆಯ ಕರ್ನಾಟಕ ಪಬ್ಲಿಕ್ ಸ್ಕೂಲ್ ಶಿಕ್ಷಕ ಕೆ. ಕೆ. ಸುರೇಶ್, ಶಿಕ್ಷಣ ಇಲಾಖೆಯ ಪರಮೇಶ್ವರಪ್ಪ, ಸಿಆರ್‌ಪಿ ಮಂಜಪ್ಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು, ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಪ್ರಶಸ್ತಿ ಪತ್ರ ಹಾಗೂ ಪಾರಿತೋಷಕ ವಿತರಿಸಿದರು.

ಕುವೆಂಪು ವಿದ್ಯಾ ಶಾಲೆಯ ಮುಖ್ಯೋಪಾಧ್ಯಾಯ ಎನ್. ನಾಗೇಂದ್ರ ಸ್ವಾಗತಿಸಿದರು. ಅಶ್ವಿನಿ ಕಾರ್ಯಕ್ರಮ ನಿರೂಪಿಸಿದರು. ಆಶಾ ನಾಗಭೂಷಣ ವಂದಿಸಿದರು.

ಶಾಲೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು.

ಕಾಮೆಂಟ್‌ಗಳಿಲ್ಲ