ಹೊಸನಗರದ ಮಣಸೆಟ್ಟೆ ಗ್ರಾಮದ ಅಕ್ರಮ ಭೂ ಮಂಜೂರಾತಿ ರದ್ದು : ಲೋಕಾಯುಕ್ತಕ್ಕೆ ಸಾಬೀತು ಪಡಿಸಿದ ಉಪವಿಭಾಗಾಧಿಕಾರಿಗಳು.
ಹೊಸನಗರ : ತಾಲ್ಲೂಕಿನ ಕಸಬಾ ಹೋಬಳಿಯ ಮಣಸಟ್ಟೆ ಗ್ರಾಮದ ಸರ್ವೆ ನಂಬರ್ 17ರಲ್ಲಿ ಎಂಪಿಎಂ ನಡುತೋಪನ್ನು ಬಗರ್ಹುಕುಂ ಅರ್ಜಿದಾರರಿಗೆ ಮಂಜೂರು ಮಾಡಿದ್ದ ಆದೇಶವನ್ನು ತಕ್ಷಣವೇ ರದ್ದುಪಡಿಸಿದ್ದಲ್ಲದೆ, ಪಹಣಿ ಮತ್ತು ಎಂ.ಆರ್ ಕೂಡಾ ರದ್ದುಪಡಿಸಿ ಸಾಗರ ಉಪ ವಿಭಾಗಾಧಿಕಾರಿಗಳು ಆದೇಶಿಸಿದ್ದಾರೆ.
ಟಿ ಎಂ ಅಶೋಕ್ ಗೌಡ ಬಿನ್ ಮಂಜಪ್ಪ ಗೌಡರವರು ಮಣಸಟ್ಟೆ ಗ್ರಾಮದ ಸರ್ವೆ ನಂಬರ್ 17ರಲ್ಲಿ ಅಡಿಕೆ, ಬಾಳೆ, ತೆಂಗು, ಶುಂಠಿ ಬೆಳೆ ಬೆಳೆದಿರುವದಾಗಿ ನಕಲಿ ದಾಖಲೆ ಸೃಷ್ಟಿಸಿ, ಬಗರ್ಹುಕುಂ ಮಂಜೂರಾತಿಗೆ ಅರ್ಜಿ ಸಲ್ಲಿಸಿದ್ದರು, ಸದರಿ ಅರ್ಜಿಯನ್ನು ಸರಿಯಾಗಿ ಪರಿಶೀಲಿಸದೆ ವಿ ಎ ಮತ್ತು ಆರ್ ಐ ಹಾಗೂ ತಹಶೀಲ್ದಾರ್ರವರು ಸ್ಥಳ ಪರಿಶೀಲಿಸದೆ ಭ್ರಷ್ಟಾಚಾರವೆಸಗಿ, ಅಕ್ರಮವಾಗಿ ಅಶೋಕ್ ಗೌಡರವರಿಗೆ 3 ಎಕರೆ 38 ಗುಂಟೆ ಜಾಗವನ್ನು 11-7-2014ರಲ್ಲಿ ಮಂಜೂರು ಮಾಡಿಕೊಟ್ಟಿದ್ದರು.
![]() |
ಅಕ್ರಮವಾಗಿ ಮಂಜೂರು ಮಾಡಿದ್ದ ಎಂಪಿಎಂ ನೆಡುತೋಪು |
ಸದರಿ ಪ್ರಕರಣದ ವಿಚಾರಣಾ ಹಂತವಾಗಿ ಲೋಕಾಯುಕ್ತ ಅಧಿಕಾರಿಗಳು ಸಾಗರ ಉಪ ವಿಭಾಗಾಧಿಕಾರಿಗಳಿಗೆ ಈ ಪ್ರಕರಣದ ಸತ್ಯಾಸತ್ಯತೆಯನ್ನು ಪರಿಶೀಲಿಸಿ ವರದಿ ನೀಡುವಂತೆ ಆದೇಶಿಸಿರುತ್ತಾರೆ. ಅದರಂತೆ ಮಾನ್ಯ ಹೊಸನಗರ ತಾಲೂಕು ತಹಶೀಲ್ದಾರ್ ಹಾಗೂ ತಾಲ್ಲೂಕು ದಂಡಾಧಿಕಾರಿಗಳು ಸ್ಥಳ ಪರಿಶೀಲನೆಗೆ ಹೋದಾಗ ಅಲ್ಲಿ ಎಂಪಿಎಂ ನಡುತೋಪು ಬೆಳೆದಿರುವುದು ಮತ್ತು ಅರ್ಜಿದಾರರು ಸಲ್ಲಿಸಿರುವ ಯಾವುದೇ ಬೆಳೆ ಮತ್ತು ಇನ್ನಿತರ ಯಾವುದೇ ಕುರುಹುಗಳಿಲ್ಲದಿರುವುದರಿಂದ ಕಂಡು ಬಂದು, ಮೇಲ್ನೋಟಕ್ಕೆ ಅಕ್ರಮ ನಡೆದಿರುವುದು ಸಾಬೀತಾಗಿರುತ್ತದೆ.
![]() |
ಗಿರೀಶ್ ಆಚಾರ್ |
ಅಕ್ರಮ ಭೂ ಮಂಜೂರಾತಿಯ ಪ್ರಕರಣವನ್ನು ಮುನ್ನಲೆಗೆ ತಂದು, ನಕಲಿ ದಾಖಲೆಗಳನ್ನು ಸೃಷ್ಟಿಸಿ ಭೂ ಕಬಳಿಸಲು ಪ್ರಯತ್ನಿಸಿದ್ದ ಪ್ರಕರಣವನ್ನು ಸುಖಾಂತ್ಯಗೊಳಿಸಿದ ಗಿರೀಶ್ ಆಚಾರ್ರವರನ್ನು ಮಣಸೆಟ್ಟೆ ಗ್ರಾಮದ ಜನರು ಅಭಿನಂದಿಸಿದ್ದಾರೆ. ಆದರೆ ಅಕ್ರಮ ಭೂ ಮಂಜೂರಾತಿಯಲ್ಲಿ ಪಾಲ್ಗೊಂಡಿರುವ ಭ್ರಷ್ಟ ಅಧಿಕಾರಿಗಳಿಗೆ ಇಲಾಖೆ ಯಾವ ರೀತಿಯ ಶಿಸ್ತು ಕ್ರಮ ಜರುಗಿಸುತ್ತದೆ ಎನ್ನುವುದನ್ನು ಕಾದು ನೋಡಬೇಕಾಗಿದೆ.
ಕಾಮೆಂಟ್ಗಳಿಲ್ಲ