ಡಿಕೆಶಿ ಸಚಿವ ಸಂಪುಟ ವಿಸ್ತರಣೆ - ಪ್ರಭಾವಿಗಳ ಮಕ್ಕಳಿಗೆ ಮಣೆ, ಮಹಿಳೆ ಮತ್ತು ವಿಪ್ರ ಸಮುದಾಯಕ್ಕೆ ಅನ್ಯಾಯ: ಮಾಜಿ ಶಾಸಕ ಬಿ.ಸ್ವಾಮಿರಾವ್ ಆರೋಪ
ಹೊಸನಗರ: ಬಹು ನಿರೀಕ್ಷಿತ ರಾಜ್ಯ ಕಾಂಗ್ರೆಸ್ ಸರ್ಕಾರದ ಸಚಿವ ಸಂಪುಟ ಸೋಮವಾರ ವಿಸ್ತರಣೆ ಆಗಿದೆ. ಆದರೆ, ಈ ವೇಳೆ ವಿಪ್ರ ಸಮುದಾಯಕ್ಕೆ ಅನ್ಯಾಯವಾಗಿದೆ. ಮಹಿಳೆಯರನ್ನು ಕಡೆಗಣಿಸಲಾಗಿದೆ. ಸಂಪುಟ ಹಂಚಿಕೆಯಲ್ಲಿ ಪ್ರದೇಶವಾರು ಸಚಿವ ಸ್ಥಾನ ಹಂಚಿಕೆ ಮಾಡುವಲ್ಲಿ ಕಾಂಗ್ರೆಸ್ ಹೈ ಕಮಾಂಡ್ ಸಂಪೂರ್ಣ ವಿಫಲವಾಗಿದ್ದು, ಇದು ಮುಂಬರುವ ದಿನಗಳಲ್ಲಿ ರಾಜ್ಯ ರಾಜಕಾರಣದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ವ್ಯಾಪಕ ಹಿನ್ನಡೆಯನ್ನುಂಟು ಮಾಡಲಿದೆ ಎಂದು ಹೊಸನಗರ ಕ್ಷೇತ್ರದ ಮಾಜಿ ಶಾಸಕ, ರಾಜ್ಯದ ಹಿರಿಯ ರಾಜಕೀಯ ಮುತ್ಸದ್ಧಿ ಬಿ.ಸ್ವಾಮಿರಾವ್ ಭವಿಷ್ಯ ನುಡಿದಿದ್ದಾರೆ.
ಇಂದು ಅವರು ಸೊನಲೆಯ ತಮ್ಮ ಸ್ವಗೃಹದಲ್ಲಿ ಪತ್ರಕರ್ತರನ್ನುದ್ದೇಶಿಸಿ ಮಾತನಾಡಿ, ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆದ ಬಳಿಕ ಸಚಿವ ಸಂಪುಟ ವಿಸ್ತರಣೆಗೆ ಕಾಂಗ್ರೆಸ್ ಹೈಕಮಾಂಡ್ ಹಿಂದೆಂದಿಗಿಂತಲೂ ಹೆಚ್ಚಿನ ಕಾಲಾವಕಾಶ ಪಡೆದು, ಹಲವು ದಶಕಗಳಿಂದ ಪಕ್ಷಕ್ಕಾಗಿ ಪ್ರಾಮಾಣಿಕವಾಗಿ ದುಡಿದ ಶಾಸಕರನ್ನು ಮೂಲೆಗುಂಪು ಮಾಡಿ, ಪದೇ ಪದೇ ಹಳೇ ಮುಖ್ಯಮಂತ್ರಿಗಳ ಪುತ್ರರಿಗೆ ಮಣೆ ಹಾಕುವ ಮೂಲಕ ಪಕ್ಷನಿಷ್ಠರಿಗೆ ಅನ್ಯಾಯವೆಸಗಿದೆ. ಅಲ್ಲದೆ, ಪಕ್ಷದ ಹೈಕಮಾಂಡ್ ಕೂಡಾ ನಿರಂತರವಾಗಿ ರಾಜ್ಯ ರಾಜಕಾರಣದಲ್ಲಿ ವಿನಾ ಕಾರಣ ಪದೆಪದೇ ಮೂಗು ತೂರಿಸಿ, ಸಾಂವಿಧಾನಿಕವಾಗಿ ಆಯ್ಕೆಯಾದ ಜನಪ್ರತಿನಿಧಿಗಳ ಹಕ್ಕುಗಳಿಗೆ ಚ್ಯುತಿ ತಂದಿರುವುದು ದುರಂತವೇ ಸರಿ ಎಂದು ತೀವ್ರವಾಗಿ ಟೀಕಿಸಿದರು.
ಆರು ಬಾರಿ ಶಾಸಕ ಸಭೆಗೆ ಆಯ್ಕೆಯಾಗಿರುವ ಹಿರಿಯ ಶಾಸಕ ವೈ.ಕೆ. ಗೋಪಾಲಕೃಷ್ಣ, ಸೌಮ್ಯ ಸ್ವಭಾವದ ಬ್ರಾಹ್ಮಣ ಸಮುದಾಯದ ಮಾಜಿ ಮುಖ್ಯಮಂತ್ರಿ ಗುಂಡೂರಾವ್ ಅವರ ಪುತ್ರ ದಿನೇಶ್, ಮೈಸೂರಿನ ತನ್ವೀರ್ ಸೇಠ್, ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ ಸೇರಿದಂತೆ ಹಲವು ಪ್ರಾಮಾಣಿಕರಿಗೆ ಸಚಿವ ಸ್ಥಾನ ನೀಡದ ಹಿನ್ನೆಲೆಯ ಹಿಂದೆ ಹಲವು ಅನುಮಾನ ಸಾರ್ವಜನಿಕವಾಗಿ ಕೇಳಿ ಬಂದಿದೆ. ರಾಜ್ಯ ರಾಜಕೀಯ ಇತಿಹಾಸದಲ್ಲೇ ಮೊದಲ ಬಾರಿಗೆ ಮಹಿಳಾ ಸಚಿವ ರಹಿತ ಸಂಪುಟ ಘೋಷಣೆ ಆಗಿರುವುದು ಕಾಂಗ್ರೆಸ್ ಪಕ್ಷ ಮಹಿಳೆಯರಿಗೆ ಸಂಪುಟ ಸ್ಥಾನದಿಂದ ದೂರವಿಟ್ಟು ದೊಡ್ಡ ತಪ್ಪು ಮಾಡಿದೆ. ಭ್ರಷ್ಟಾಚಾರದ ಆರೋಪ ಹೊತ್ತ ಕೆಲವರು ಸಂಪುಟಕ್ಕೆ ಸೇರ್ಪಡೆ ಆಗಿರುವುದು ಜನತೆ ಪ್ರಶ್ನಿಸುವಂತಿದೆ. ಮೂರು ನಾಲ್ಕು ಬಾರಿಗೆ ಗೆಲವು ಸಾಧಿಸಿದ್ದ ಯುವ ಶಾಸಕರನ್ನು ವಿನಾಕಾರಣ ಸಚಿವ ಸಂಪುಟದಿಂದ ದೂರವೇ ಇಡಲಾಗಿದೆ. 60:40ರ ಅನುಪಾತದಲ್ಲಿ ಹಿರಿಯ: ಕಿರಿಯ ಶಾಸಕರ ಆಯ್ಕೆಗೆ ದೆಹಲಿಯ ಹೈಕಮಾಂಡ್ ಸಚಿವ ಸಂಪುಟ ಹಂಚಿಕೆಗೆ ಮುಂದಾಗಿದೆ ಎಂಬ ಸಂಗತಿಯು ಸತ್ಯಕ್ಕೆ ದೂರ ಎಂಬಂತೆ ಈಗ ತೋರಿ ಬರುತ್ತಿದ್ದು, ಮುಂದಾದರೂ, ಪಕ್ಷದ ನಾಯಕರು, ಪ್ರದೇಶವಾರು, ಜಾತಿವಾರು, ಕ್ಷೇತ್ರವಾರು ಸಮಗ್ರ ಅಭಿವೃದ್ಧಿ ಕಾರ್ಯಗಳಿಗೆ ಮನ್ನಣೆ ನೀಡಿದಲ್ಲಿ ಮಾತ್ರವೇ ವಿಪಕ್ಷಗಳ ಕೆಂಗಣ್ಣಿನಿಂದ ಡಿಕೆಶಿ ನೇತೃತ್ವದ ಸರ್ಕಾರ ಒಂದಿಷ್ಟು ಪ್ರಾಮಾಣಿಕ ಕಾರ್ಯ ನೆರವೇರಿಸಲು ಸಾಧ್ಯವಾದೀತು ಎಂದು ಕಿವಿಮಾತು ಹೇಳಿದರು.





ಕಾಮೆಂಟ್ಗಳಿಲ್ಲ