ನಗರ ಮತ್ತಿಕೈ ಮನೆ ಬಾಗಿಲು ಮುರಿದು ಕಳ್ಳತನ - ಆರೋಪಿಯನ್ನು ಬಂಧಿಸಿದ ನಗರ ಪೊಲೀಸರು
ಹೊಸನಗರ : ತಾಲ್ಲೂಕಿನ ನಗರ ಹೋಬಳಿ ಮತ್ತಿಕೈ ಗ್ರಾಮದಲ್ಲಿ ಇದೇ ತಿಂಗಳ 3ನೇ ತಾರೀಖಿನಂದು ನಡೆದ ಹಗಲುಗಳ್ಳತನ ಪ್ರಕರಣವೊಂದನ್ನು ಭೇದಿಸಿರುವ ನಗರ ಪೊಲೀಸರು, ಕಳ್ಳತನ ಮಾಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ದೂರುದಾರರಾದ ಮತ್ತಿಕೈ ದೊಡ್ಡಮನೆ ವಾಸಿ ಪರಮೇಶ್ವರಯ್ಯ ಬಿನ್ ಶಿವರಾಮಯ್ಯ ದಿನಾಂಕ 03-03-2025ರಂದು ಸಂಬಂಧಿಕರ ಮನೆಯಲ್ಲಿ ಉಪನಯನ ಕಾರ್ಯಕ್ರಮವಿದ್ದಿದ್ದರಿಂದ ಮಧ್ಯಾಹ್ನ 12.30ಕ್ಕೆ ತೆರಳಿದ್ದು, ಕಾರ್ಯಕ್ರಮ ಮುಗಿಸಿ ಮನೆಗೆ ವಾಪಾಸ್ಸು ಬಂದಾಗ ಮನೆ ಬಾಗಿಲು ಮುರಿದು ಕಳ್ಳತನವಾಗಿರುವ ಸಂಗತಿ ಬೆಳಕಿಗೆ ಬಂದಿತ್ತು. ಮನೆಯ ಮರದ ಕಪಾಟಿನಲ್ಲಿದ್ದ ಅಂದಾಜು 60 ಸಾವಿರ ರೂಪಾಯಿ ಮೌಲ್ಯದ ಸುಮಾರು 12 ಗ್ರಾಂ ತೂಕದ ಚಿನ್ನದ ಸರ, 15 ಸಾವಿರ ರೂಪಾಯಿ ನಗದು ಕಳ್ಳತನವಾಗಿದ್ದು, ಕಳ್ಳರನ್ನು ಪತ್ತೆ ಮಾಡಿಕೊಡುವಂತೆ ನಗರ ಠಾಣೆಗೆ ದೂರು ನೀಡಿದ್ದರು.
ನಗರ ಪೊಲೀಸರ ತಂಡವು ತನಿಖೆ ನಡೆಸಿ, ವೃತ್ತಿಯಲ್ಲಿ ಚಾಲಕನಾಗಿರುವ ಆರೋಪಿ ನಗರ ಹೋಬಳಿ ಕಟ್ಟಿನಹೊಳೆ ವಾಸಿ ಕೆ.ಆರ್. ಶರತ್ ಬಿನ್ ರವೀಶ್ (26 ವರ್ಷ)ನನ್ನು ಬಂಧಿಸಿದ್ದು, ಬಂಧಿತನಿಂದ 1 ಲಕ್ಷ ರೂಪಾಯಿ ಮೌಲ್ಯದ 12 ಗ್ರಾಂ ತೂಕದ ಬಂಗಾರದ ಸರ ಹಾಗೂ ಕೃತ್ಯಕ್ಕೆ ಬಳಸಿದ್ದ 65 ಸಾವಿರ ರೂಪಾಯಿ ಮೌಲ್ಯದ ಬೈಕ್ನ್ನು ವಶಪಡಿಸಿಕೊಂಡಿದ್ದಾರೆ.
ಹೊಸನಗರ ಸಿಪಿಐ ಗುರಣ್ಣ ಎಸ್. ಹೆಬ್ಬಾಳ್ ಮೇಲ್ವಿಚಾರಣೆಯಲ್ಲಿ ಆರೋಪಿಯ ಪತ್ತೆ ಮತ್ತು ಬಂಧನ ಕಾರ್ಯ ನಡೆದಿದ್ದು, ಪತ್ತೆ ಕಾರ್ಯದಲ್ಲಿ ನಗರ ಪಿಎಸ್ಐ ಶಿವಾನಂದ ಕೋಳಿ ನೇತೃತ್ವದಲ್ಲಿ ಪಾಲ್ಗೊಂಡಿದ್ದರು.
ಕಾಮೆಂಟ್ಗಳಿಲ್ಲ