ಹೊಸನಗರ ಕಳೂರು ಸೊಸೈಟಿಗೆ ಭೇಟಿ ನೀಡಿದ ಆರ್.ಎಂ. ಮಂಜುನಾಥಗೌಡ - ವಿನಯಕುಮಾರ್ ತಂಡದ ಗೆಲುವಿಗೆ ಪ್ರಶಂಸೆ
ಹೊಸನಗರ : ಅಭಿವೃದ್ಧಿ ಇದ್ದಲ್ಲಿ ಮಾತ್ರವೇ ಎದುರಾಳಿಗಳ ಹುಟ್ಟಿಗೆ ಕಾರಣ ಎಂಬಂತೆ ಇತ್ತೀಚೆಗೆ ಪಟ್ಟಣದ ಕಳೂರು ಶ್ರೀ ರಾಮೇಶ್ವರ ಸಹಕಾರಿ ಸಂಘದ ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಕ್ಕೆ ನಡೆದ ಚುನಾವಣೆಯು ಜ್ವಲಂತ ಸಾಕ್ಷಿಯಾಗಿದೆ ಎಂದು ಜಿಲ್ಲಾ ಡಿಸಿಸಿ ಬ್ಯಾಂಕ್ ಅಧ್ಯಕ್ಷ, ಸಹಕಾರಿ ಧುರೀಣ ಡಾ. ಆರ್. ಎಂ. ಮಂಜುನಾಥಗೌಡ ಅಭಿಪ್ರಾಯ ವ್ಯಕ್ತ ಪಡಿಸಿದರು.
2025ರ ಹೊಸವರ್ಷದ ಮೊದಲ ದಿನವೇ ಇಲ್ಲಿನ ಕಳೂರು ಶ್ರೀ ರಾಮೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ರೂ 2.5 ಕೋಟಿ ಅನುದಾನದಲ್ಲಿ ಪಟ್ಟಣದ ಬಸ್ ನಿಲ್ದಾಣದ ಸಮೀಪ ನಿರ್ಮಿಸುತ್ತಿರುವ ವಿಶಾಲ, ಸುಸಜ್ಜಿತ ನೂತನ ಕಟ್ಟಡ ಕಾಮಗಾರಿಯನ್ನು ವೀಕ್ಷಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡುತ್ತಿದ್ದರು.
ಕಳೆದ 2024ರ ಡಿಸೆಂಬರ್ 28 ರಿಂದ 30ರ ವರೆಗೆ ಮೂರು ದಿನಗಳ ಕಾಲ ಜಿಲ್ಲೆಯ ಸಹಕಾರಿ ಕ್ಷೇತ್ರದಲ್ಲಿ, ಅದರಲ್ಲೂ ಶೇ. 90ರಷ್ಟು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಅದರಲ್ಲಿ ಪಟ್ಟಣದ ಪ್ರತಿಷ್ಠಿತ ಕಳೂರು ಶ್ರೀ ರಾಮೇಶ್ವರ ಸಹಕಾರಿ ಸಂಘವೂ ಒಂದು. ಸಂಘದ ನಿಕಟಪೂರ್ವ ಅಧ್ಯಕ್ಷ, ಹಾಲಿ ನಿರ್ದೇಶಕ ಡಿ.ಆರ್. ವಿನಯಕುಮಾರ್ ನೇತೃತ್ವದ ತಂಡ ಭಾರೀ ಗೆಲುವು ದಾಖಲಿಸುವ ಮೂಲಕ ಯಶಸ್ಸು ಕಂಡಿದೆ. ಜಿಲ್ಲೆಯ ಇತ್ತೀಚಿನ ಯುವ ಸಹಕಾರಿಗಳಲ್ಲಿ ದುಮ್ಮ ವಿನಯ್ ಕುಮಾರ್ ಸಹ ಓರ್ವ. ಆತ ಅಧ್ಯಕ್ಷನಾಗಿರುವ ತುಂಗಾ ಸೌಹಾರ್ದ ಅಡಿಕೆ ಸಹಕಾರಿ ಸಂಘವು ಸಹ ಲಾಭದಾಯಕವಾಗಿದೆ. ಕಳೂರು ಶ್ರೀ ರಾಮೇಶ್ವರ ಸಂಘದ ಅಧ್ಯಕ್ಷರಾಗಿ ಕಳೆದ ಸಾಲಿನಲ್ಲಿ ಆತ ರೈತಾಪಿ ವರ್ಗಕ್ಕೆ ಅನುಕೂಲ ಆಗುವ ರೀತಿಯಲ್ಲಿ ದಕ್ಷ, ಪ್ರಾಮಾಣಿಕ ಹಾಗೂ ಪಾರದರ್ಶಕ ಆಡಳಿತ ನೀಡಿದ್ದು, ಈ ಬಾರಿಯ ಚುನಾವಣಾ ಯಶಸ್ಸಿಗೆ ಕಾರಣವಾಯ್ತು. ಅಲ್ಲದೇ, ವಿನಯ್ ಕುಮಾರ್ ಮುಂದಾಳತ್ವದಲ್ಲಿ ಜಿಲ್ಲೆಯಲ್ಲೇ ಅತ್ಯಂತ ಬಹುದೊಡ್ಡ ಸಂಘದ ವ್ಯವಸ್ಥಿತ ಕಟ್ಟಡ ನಿರ್ಮಾಣ ಆಗುತ್ತಿದೆ. ಇದು ವಿರೋಧಿಗಳ ಕೆಂಗಣ್ಣಿಗೆ ಗುರಿಯಾದ ಕಾರಣಕ್ಕೆಈ ಬಾರಿ ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಕ್ಕೆ ನಡೆದ ಚುನಾವಣೆ ರಂಗೇರಲು ಕಾರಣವೆಂದರು.
ಸಂಘವು ತಾಲ್ಲೂಕಿನ ರೈತರಿಗೆ ಬೇಕಾಗುವ ಎಲ್ಲಾ ರೀತಿಯ ಅಗತ್ಯ ಗೊಬ್ಬರ, ಔಷಧವನ್ನು ಪೂರೈಕೆ ಮಾಡುತ್ತಿದ್ದು, ದಿನಸಿ ವಿತರಣೆ ಸೇರಿದಂತೆ ಹೊಸ ವಾಣಿಜ್ಯ ಸಂಕಿರ್ಣ ನಿರ್ಮಿಸುವ ಗುರಿ ಹೊಂದಿದ್ದು ರೈತಪರ ನಿಲುವು ಹೊಂದಿದೆ ಎಂದರು. ಈ ಬಾರಿ ನಡೆದ ಚುನಾವಣೆಯಿಂದ ವಿನಯ್ ಕುಮಾರ್ ಹಾಗೂ ಅವರ ತಂಡದ ಶಕ್ತಿ ಜನರಿಗೆ ಅರ್ಥವಾಗಿದ್ದು, ಸಹಕಾರಿ ಕ್ಷೇತ್ರದಲ್ಲಿ ರಾಜಕೀಯ ಸಲ್ಲದು ಎಂಬ ಕಿವಿಮಾತು ಹೇಳಿದರು.
ಈ ವೇಳೆ ಸಂಘದ ನೂತನ ನಿರ್ದೇಶಕರಾದ ಸೀಗೆಕೊಪ್ಪ ವಿರುಪಾಕ್ಷಿ, ಗುಬ್ಬಿಗ ರವಿ, ಹೆಚ್. ಶ್ರೀನಿವಾಸ್, ಪಟ್ಟಣ ಪಂಚಾಯಿತಿ ಅಧ್ಯಕ್ಷ ನಾಗಪ್ಪ, ಶಾಸಕ ಬೇಳೂರು ಗೋಪಾಲಕೃಷ್ಣ ಅವರ ಆಪ್ತ ಕಾರ್ಯದರ್ಶಿ ಸಣ್ಣಕ್ಕಿ ಮಂಜು, ಬ್ರಹ್ಮೇಶ್ವರ ಸುಧೀರ್, ಉದಯ್ ಗೌಡ, ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ವಾರಂಬಳ್ಳಿ ಹಾಲಪ್ಪ, ಹುಲಿ ಕೃಷ್ಣಮೂರ್ತಿ, ಶಿವಕುಮಾರ್, ವ್ಯವಸ್ಥಾಪಕ ವೀರೇಂದ್ರ ಮೊದಲಾದವರು ಹಾಜರಿದ್ದರು.
ಕಾಮೆಂಟ್ಗಳಿಲ್ಲ