ರೂ 49,24,344 ಲಾಭದಲ್ಲಿ ಹೊಸನಗರದ ಕೊಡಚಾದ್ರಿ ಅಡಿಕೆ ಸೌಹಾರ್ದಾ ಸಹಕಾರಿ ಸಂಘ
ಹೊಸನಗರ : ಪ್ರಸಕ್ತ ಸಾಲಿನಲ್ಲಿ ಸಂಸ್ಥೆ ರೂ. 49,24,344 ನಿವ್ವಳ ಲಾಭ ಗಳಿಸಿದ್ದು, ಷೇರುದಾರರಿಗೆ ಶೇ. ರೂ 8 ಲಾಭಾಂಶ ಘೋಷಿಸಿದೆ ಎಂದು ಅಧ್ಯಕ್ಷ ಅವುಕ ಹೆಚ್.ಎಂ. ರಾಘವೇಂದ್ರ ತಿಳಿಸಿದರು.
ನ್ಯೂಸ್ ಪೋಸ್ಟ್ಮಾರ್ಟಮ್ ಮಾಸಪತ್ರಿಕೆಯ PDF ಪ್ರತಿಯನ್ನು ಡೌನ್ಲೋಡ್ ಮಾಡಿಕೊಂಡು ಓದಲು ಕ್ಲಿಕ್ ಮಾಡಿ
ಪಟ್ಟಣದ ಗಾಯತ್ರಿ ಮಂದಿರದಲ್ಲಿ ಶುಕ್ರವಾರ ನಡೆದ ಕೊಡಚಾದ್ರಿ ಅಡಿಕೆ ಸೌಹಾರ್ದ ಸಹಕಾರಿ ಸಂಘದ 2023-24ನೇ ಸಾಲಿನ ಸರ್ವ ಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ದುಡಿಯುವ ಬಂಡವಾಳ ಮೀರಿ ಸದಸ್ಯರಿಗೆ ಕೆಲವು ಪ್ರಕರಣಗಳಲ್ಲಿ ಸಾಲ ವಿತರಿಸಲಾಗಿದ್ದು, ಶೀಘ್ರದಲ್ಲಿಯೇ ಸದರಿ ಸಾಲಗಳ ಚುಕ್ತಕ್ಕೆ ಕ್ರಮ ಕೈಗೊಳ್ಳಲಾಗುವುದು. ಷೇರುದಾರರು ಈ ಕುರಿತು ಆತಂಕ ಪಡುವ ಅಗತ್ಯವಿಲ್ಲ ಎಂದು ಅವರು ಭರವಸೆ ನೀಡಿದರು.
ಸದರಿ ಷೇರುದಾರರ ಸಂಖ್ಯೆಯನ್ನು 6 ಸಾವಿರಕ್ಕೆ ಏರಿಸಲಾಗುವುದು. ಸಹಕಾರಿ ವ್ಯವಹಾರಕ್ಕೆ ರೂ. 10 ಕೋಟಿ ಅಗತ್ಯ ಸಾಲವನ್ನು ಡಿಸಿಸಿ ಬ್ಯಾಂಕಿನಿಂದ ಪಡೆಯುವುದಾಗಿ ಸಭೆಗೆ ತಿಳಿಸಿದರು.
ಸಿಇಓ ಎನ್. ಬಿ. ಬಾಲಚಂದ್ರ ಮಾತನಾಡಿ, ಪಟ್ಟಣದ ನೆಹರು ರಸ್ತೆಯ ನೂತನ ಕಟ್ಟಡಕ್ಕೆ ಪ್ರಧಾನ ಕಚೇರಿಯನ್ನು ಸ್ಥಳಾಂತರ ಮಾಡಿ, ಎಪಿಎಂಸಿ ಪ್ರಾಂಗಣದ ಕಟ್ಟಡವನ್ನು ಅಡಿಕೆ ದಲ್ಲಾಳಿ ಮಂಡಿ ವ್ಯಾಪಾರಕ್ಕೆ ಮೀಸಲಿಡಲು ಆಡಳಿತ ಸಮಿತಿ ತೀಮಾನಿಸಿದೆ. ಆನಂದಪುರ ಎಪಿಎಂಸಿ ಪ್ರಾಂಗಣದಲ್ಲಿ ನೂತನ ಅಡಿಕೆ ದಲ್ಲಾಳಿ ಶಾಖೆ ತೆರೆಯುವುದು ಹಾಗೂ ಸಾಗರದ ವರದಾ ರಸ್ತೆಯ ಹೆಚ್ಡಿಕೆ ಕಟ್ಟಡದಲ್ಲಿ ತೋಟಗಾರಿಕಾ ಮತ್ತು ಅರಣ್ಯ ಉಪ ಉತ್ಪನ್ನ ನೇರ ಖರೀದಿ ಮತ್ತು ಮಾರಾಟ ಕೇಂದ್ರ ತೆರೆಯಲು ಚಿಂತನೆ ನಡೆದಿದೆ ಎಂದರು.
ಇದಕ್ಕೂ ಮೊದಲು ನಿಧನ ಹೊಂದಿದ ಸಹಕಾರಿ ಸದಸ್ಯ ರೈತರಿಗೆ ಶ್ರದ್ಧಾಂಜಲಿ, ಅವರ ಶೈಕ್ಷಣಿಕ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನಡೆಯಿತು.
ಮಹಾಸಭೆಯ ತಿಳುವಳಿಕೆ ಪತ್ರ ಓದಿ, ಹಾಜರಾತಿ ದೃಢೀಕರಿಸಿದರು. 2023-24ನೇ ಸಾಲಿನ ಆಡಳಿತ - ಲೆಕ್ಕಪರಿಶೋಧನಾ ವರದಿ ಮಂಡನೆ, ಆಯವ್ಯಯ ಪತ್ರ ಅಂಗೀಕಾರ ನಡೆಯಿತು.
ವೇದಿಕೆಯಲ್ಲಿ ಉಪಾಧ್ಯಕ್ಷ ವಸವೆ ಈಶ್ವರಪ್ಪ, ನಿರ್ದೇಶಕರಾದ ಹನಿಯ ರವಿ, ಕುಂಬತ್ತಿ ಕೃಷ್ಣಮೂರ್ತಿ, ಹುಲಗಾರು ಜಗದೀಶ್, ದುಮ್ಮ ಗಣಪತಿ, ಬಣ್ಣುಮನೆ ಆದಿತ್ಯ, ಭದ್ರಾಪುರ ರಾಜಶೇಖರ, ನಿವಣೆ ಪ್ರತಿಮಾ ಭಟ್, ವಿದ್ಯಾ ಸಂತೋಷ್ ಪೈ ಇದ್ದರು.
ಸಿಇಓ ಬಾಲಚಂದ್ರ ಸ್ವಾಗತಿಸಿ, ಮರುಡುಮನೆ ಎಂ.ಜಿ.ರಾಮಚಂದ್ರ ನಿರೂಪಿಸಿದರು.
ಕಾಮೆಂಟ್ಗಳಿಲ್ಲ