6.5 ಲಕ್ಷ ಸಾಲದ ಹೊರೆ - ಆತ್ಮ*ಹತ್ಯೆಗೆ ಶರಣಾದ ನಗರ ಸಮೀಪದ ಮುಂಡಳ್ಳಿ ರೈತ
ಹೊಸನಗರ : ಸಾಲಬಾಧೆಗೆ ತುತ್ತಾಗಿ ತಾಲ್ಲೂಕಿನ ನಗರ ಹೋಬಳಿ ಮುಂಡಳ್ಳಿ ಸಮೀಪದ ನರ್ತಿಗೆ ಗ್ರಾಮದ ವಾಸಿ ರೈತ ಎನ್.ಟಿ. ತಿಮ್ಮಪ್ಪ (52) ಎನ್ನುವವರು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಇಂದು ಸಂಭವಿಸಿದೆ.
ತಮ್ಮ ತೋಟದಲ್ಲಿ ಕೆಲಸಕ್ಕೆಂದು ತೆರಳಿದ್ದ ತಿಮ್ಮಪ್ಪ ಇದೇ ವೇಳೆ ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ವಾಂತಿ ಮಾಡಿಕೊಳ್ಳುತ್ತಿದ್ದದ್ದನ್ನು ಗಮನಿಸಿದ ಮನೆಯವರು ವಿಚಾರಿಸಿದಾಗ ವಿಷದ ವಾಸನೆ ಬಂದಿದ್ದು, ತತ್ಕ್ಷಣ ಚಿಕಿತ್ಸೆ ಕೊಡಿಸಲು ಮುಂದಾದರೂ ಪ್ರಯೋಜನವಾಗದೆ ಅಸುನೀಗಿದ್ದಾರೆ.
ಮೃತರಿಗೆ 1.25 ಎಕರೆ ತರಿ, 2 ಎಕರೆ ಬಾಗಾಯ್ತು ಜಮೀನಿದ್ದು, ಕೃಷಿಗಾಗಿ ಧರ್ಮಸ್ಥಳ ಸಂಘ, ನಗರ ನೀಲಕಂಠೇಶ್ವರ ಸಹಕಾರ ಸಂಘ, ಜಯನಗರ ಉಜ್ಜೀವನ್ ಫೈನಾನ್ಸ್, ರಿಪ್ಪನ್ ಪೇಟೆಯ ಚೈತನ್ಯ ಗ್ರಾಮೀಣ ಬ್ಯಾಂಕ್, ಮೂಕಾಂಬಿಕ ಸ್ವಸಹಾಯ ಸಂಘ ಸೇರಿದಂತೆ, ತನ್ನ ಹಾಗೂ ಪತ್ನಿ ಹೆಸರಲ್ಲಿ ರೂ 6.5 ಲಕ್ಷ ಹಣವನ್ನು ಸಾಲ ಪಡೆದಿದ್ದರು. ಕೃಷಿಯಲ್ಲಿ ನಿರೀಕ್ಷಿತ ಆದಾಯ ಬಾರದ ಕಾರಣ ಸಾಲವನ್ನು ಮರುಪಾವತಿಸಲಾಗದೆ ನೊಂದು ಕೊನೆಗೆ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೃತರ ಪುತ್ರ ಅಮಿತ್ ನೀಡಿದ ದೂರಿನ ಮೇರೆಗೆ ನಗರ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಶಿವಾನಂದ ಕೋಳಿ ಪ್ರಕರಣ ದಾಖಲಿಸಿದ್ದಾರೆ.
ಕಾಮೆಂಟ್ಗಳಿಲ್ಲ