Sports Post

ಪುಸ್ತಕ ಖರೀದಿಗೆ ಇಲ್ಲಿ ಕ್ಲಿಕ್‌ ಮಾಡಿ

ಈಗ ಬಂದ ಸುದ್ದಿ...

ಅವಳಿ ಹಳ್ಳಕ್ಕೆ ಸೇತುವೆ ನಿರ್ಮಿಸಿ ಕೊಡಿ - ಹೊಸನಗರ ತ್ರಿಣಿವೆ ಗ್ರಾಮ ಪಂಚಾಯಿತಿ ಗೊಗ್ಗಿ ಗ್ರಾಮಸ್ಥರ ಆಗ್ರಹ

ಹೊಸನಗರ : ಹಲವು ದಶಕದಿಂದ ಮೂಲಭೂತ ಸೌಕರ್ಯಗಳಿಂದ ವಂಚಿತ ಗ್ರಾಮ ಎಂದೇ ಗುರುತಿಸಲ್ಪಟ್ಟಿರುವ ತಾಲ್ಲೂಕಿನ ತ್ರಿಣಿವೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಲುವೀಡು-ಅಬ್ಬಿಗಲ್ಲು ಗ್ರಾಮಕ್ಕೆ ಸಮೀಪ ಇರುವ ಗೊಗ್ಗಿ ಅವಳಿ ಗ್ರಾಮಗಳ ಸಂಪರ್ಕ ಸೇತುವೆ ನಿರ್ಮಾಣಕ್ಕೆ ಆಗ್ರಹಿಸಿ ಮತ್ತೊಮ್ಮೆ ಇಲ್ಲಿನ ಜನರು ದನಿ ಎತ್ತಿದ್ದಾರೆ. ಕಳೆದ ಹಲವು ವರ್ಷಗಳಿಂದ ನಿರಂತರವಾಗಿ ಈ ಭಾಗದ ಗ್ರಾಮಸ್ಥರಿಂದ ಸೇತುವೆ ನಿರ್ಮಾಣ ಸೇರಿ ಮೂಲಭೂತ ಸೌಕರ್ಯ ನೀಡುವಂತೆ ಕೂಗು ಕೇಳಿ ಬರುತ್ತಿದ್ದರೂ, ಈವರೆಗೂ ಆ ಧ್ವನಿ ಸಂಬಂಧಪಟ್ಟವರಿಗೆ ತಲುಪದಿರುವುದು ವಿಷಾದದ ಸಂಗತಿಯಾಗಿದೆ.

ಇಟ್ಟಕ್ಕಿ ಮುಖ್ಯರಸ್ತೆಯಿಂದ ಮೇಲಿನ ಗೊಗ್ಗಿ ಹಾಗೂ ಕೆಳಗಿನ ಗೊಗ್ಗಿ ಗ್ರಾಮಗಳಿಗೆ ತೆರಳಲು ಎರಡು ಅವಳಿ ಹಳ್ಳಗಳನ್ನು ದಾಟ ಬೇಕಿದ್ದು, ಮಳೆಗಾಲದಲ್ಲಿ ಈ ಹಳ್ಳಗಳು ಉಕ್ಕಿ ಹರಿಯುವ ಕಾರಣ ರಸ್ತೆ ಸಂಪರ್ಕ ಕಡಿತಗೊಳ್ಳುತ್ತದೆ. ಶಾಲಾ ವಿದ್ಯಾರ್ಥಿಗಳು, ವಯೋವೃದ್ದರು, ಆನಾರೋಗ್ಯ ಪೀಡಿತರಿಗೆ ಇದರಿಂದ ಸಾಕಷ್ಟು ತೊಂದರೆ ಆಗುತ್ತಿದೆ. ಈ ಬಾರಿ ಸುರಿದ ಮಳೆಗೆ ವಿದ್ಯಾರ್ಥಿಗಳು ಹಲವು ದಿನಗಳ ಕಾಲ ಶಾಲೆಯ ಕಡೆಗೆ ಮುಖ ಮಾಡಲಾಗದಿರುವುದು ಗ್ರಾಮಸ್ಥರನ್ನು ದಿಕ್ಕೇ ತೋಚದಂತೆ ಮಾಡಿದೆ. ಇದು ಹೀಗೆ ಮುಂದುವರೆದಲ್ಲಿ ಮುಂದೇನು?! ಎಂಬ ಪ್ರಶ್ನೆ ಗೊಗ್ಗಿ ಗ್ರಾಮಸ್ಥರನ್ನು ಈಗಲೂ ಕಾಡುತ್ತಿದೆ. ಮೇಲಿನ ಗೊಗ್ಗಿ-ಕೆಳಗಿನ ಗೊಗ್ಗಿ ಗ್ರಾಮಗಳಲ್ಲಿ ಸುಮಾರು ಇಪ್ಪತ್ತಕ್ಕೂ ಹೆಚ್ಚು ಕಡು ಬಡ ಕುಟುಂಬಗಳು ವಾಸವಿದ್ದು, ಸಂಪರ್ಕ ಕೊರತೆಯ ಕಾರಣ ಹೊರಗಿನ ಆಧುನಿಕ ಪ್ರಪಂಚದಿಂದ ದೂರವೇ ಉಳಿದಿವೆ.

''ಈ ಹಿಂದೆ ರೂ 30 ಲಕ್ಷದ ಅಂದಾಜು ಪಟ್ಟಿ ತಯಾರಿಸಿ, ಕ್ಷೇತ್ರದ ಶಾಸಕರ ಗಮನಕ್ಕೆ ತರಲಾಗಿತ್ತು. ಕಾರಣಾಂತರದಿಂದ ಸೇತುವೆ ನಿರ್ಮಾಣ ಕಾಮಗಾರಿಗೆ ಹಿನ್ನಡೆ ಆಯ್ತು. ನಾಲ್ಕೈದು ಬಾರಿ ಶಾಸಕರಾಗಿ ಆಯ್ಕೆಯಾದ ಆರಗ ಜ್ಞಾನೇಂದ್ರ ಇತ್ತ ಚಿತ್ತ ಹರಿಸಬೇಕು.''

-ತೊಗರೆ ಕೃಷ್ಣಮೂರ್ತಿ, ಹಾಲಿ ಸದಸ್ಯ, ಮಾಜಿ ಉಪಾಧ್ಯಕ್ಷ, ತ್ರಿಣಿವೆ ಗ್ರಾಮ ಪಂಚಾಯಿತಿ, ಹೊಸನಗರ

ಈ ಭಾಗದಲ್ಲಿ ಹರಿಯುವ ಅವಳಿ ಹಳ್ಳಕ್ಕೆ ನೂತನ ಸೇತುವೆ ನಿರ್ಮಾಣ ಕಾಮಗಾರಿ ಕೈಗೊಂಡಲ್ಲಿ ಮಾತ್ರವೇ ಶಾಶ್ವತ ಪರಿಹಾರ ನೀಡಲು ಸಾಧ್ಯ ಎಂಬುದು ಗ್ರಾಮಸ್ಥರ ಒಕ್ಕೊರಲಿನ ಆಗ್ರಹವಾಗಿದ್ದು, ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಗ್ರಾಮಸ್ಥರ ಕೂಗಿಗೆ ಕಿವಿಗೊಡುವರೇ ಎನ್ನುವುದನ್ನು ಕಾದು ನೋಡಬೇಕಿದೆ.

ಕಾಮೆಂಟ್‌ಗಳಿಲ್ಲ