ರಿಪ್ಪನ್ಪೇಟೆಯಲ್ಲಿ ಅದ್ಧೂರಿಯಾಗಿ ನಡೆಯಿತು ಕನ್ನಡ ರಾಜ್ಯೋತ್ಸವ - ತಾಯಿ ಭುವನೇಶ್ವರಿ, ಅಪ್ಪು ಭಾವಚಿತ್ರದೊಂದಿಗೆ ಸಾಗಿದ ಕನ್ನಡ ಮೆರವಣಿಗೆ
ರಿಪ್ಪನ್ಪೇಟೆ : ಇಲ್ಲಿನ ಕಸ್ತೂರಿ ಕನ್ನಡ ಸಂಘ ಮತ್ತು ಪುನೀತ್ ರಾಜ್ಕುಮಾರ್ ಅಭಿಮಾನಿ ಬಳಗ ರಿಪ್ಪನ್ ಪೇಟೆ ಇವರ ವತಿಯಿಂದ ಅದ್ಧೂರಿಯಾಗಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು.
ತಾಯಿ ಭುವನೇಶ್ವರಿ ಹಾಗೂ ಪುನೀತ್ ರಾಜಕುಮಾರ್ರವರ ಭಾವಚಿತ್ರಗಳನ್ನೊಳಗೊಂಡ ರಾಜ್ಯೋತ್ಸವದ ರಾಜಬೀದಿ ಉತ್ಸವಕ್ಕೆ ರಿಪ್ಪನ್ಪೇಟೆ ಠಾಣೆಯ ಪಿಎಸ್ಐ ಪ್ರವೀಣ್ ಎಸ್.ಪಿ, ಉಪತಹಶೀಲ್ದಾರ್ ಹುಚ್ಚರಾಯಪ್ಪ, ಕಸ್ತೂರಿ ಕನ್ನಡ ಸಂಘದ ಅಧ್ಯಕ್ಷರಾದ ಉಲ್ಲಾಸ್ ತೆಂಕೋಲ್ ಅವರು ಕನ್ನಡ ಧ್ವಜ ಹಾರಿಸುವ ಮೂಲಕ ಚಾಲನೆ ನೀಡಿದರು.
ತಾಯಿ ಭುವನೇಶ್ವರಿ ಮತ್ತು ಪುನೀತ್ ರಾಜ್ಕುಮಾರ್ ಭಾವಚಿತ್ರವನ್ನೊಳಗೊಂಡ ರಾಜಬೀದಿ ಉತ್ಸವದಲ್ಲಿ ನೂರಾರು ಜನರು ಪಾಲ್ಗೊಂಡಿದ್ದು, ಜಾನಪದ ಕಲಾ ತಂಡಗಳ ಚಂಡೆ ವಾದನ, ಶಾಲಾ ಮಕ್ಕಳ ವಿವಿಧ ಬಗೆಯ ವೇಷಭೂಷಣ, ಡೊಳ್ಳು ಕುಣಿತ, ಕೊರಗಜ್ಜ ನೃತ್ಯ ತಂಡದ ನೃತ್ಯ ಸೇರಿದಂತೆ ವಿವಿಧ ಬಗೆಯ ಜಾನಪದ ನೃತ್ಯಗಳು ಮೆರವಣಿಗೆಯ ಚೆಲುವನ್ನು ಇಮ್ಮಡಿಗೊಳಿಸಿತ್ತು. ರಿಪ್ಪನ್ಪೇಟೆ ಸುತ್ತಮುತ್ತಲಿನ ಶಾಲಾ ಮಕ್ಕಳು ರಾಜಬೀದಿ ಉತ್ಸವದಲ್ಲಿ ಪಾಲ್ಗೊಂಡು ಮೆರವಣಿಗೆಗೆ ಇನ್ನಷ್ಟು ಕಳೆ ಮೂಡಿಸಿದರು.
ರಾಜ್ಯೋತ್ಸವದ ವೇದಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ.ಮಂಜುನಾಥ ಅವರು, ಮಕ್ಕಳಿಗೆ ಎಲ್.ಕೆ.ಜಿ, ಯು.ಕೆ.ಜಿ ಮಟ್ಟದಲ್ಲಿ ಕನ್ನಡವನ್ನು ಬಿಟ್ಟು ಅನ್ಯಭಾಷೆಯನ್ನು ಕಲಿಸುವುದರಿಂದಾಗಿ ಭವಿಷ್ಯದಲ್ಲಿ ಕನ್ನಡ ಸಾಕಷ್ಟು ತೊಂದರೆಯನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಮುಖ್ಯಮಂತ್ರಿ ಸಿದ್ಧರಾಮಯ್ಯ ಉಡುಗೊರೆ ನೀಡುವಾಗ ಪುಸ್ತಕಗಳನ್ನು ಉಡುಗೊರೆಯಾಗಿ ನೀಡಿ ಎಂದು ಹೇಳಿರುವ ಬಗ್ಗೆ ಪ್ರಸ್ತಾಪಿಸಿದ ಮಂಜುನಾಥ್ ಅವರು, ಮುಖ್ಯಮಂತ್ರಿಗಳು ಹೇಳಿದ್ದಾರೆಂದು ನಾವು ಮಂತ್ರಿಗಳು ಸೇರಿದಂತೆ ಯಾವುದೇ ಜನಪ್ರತಿನಿಧಿಗಳಿಗೆ ಪುಸ್ತಕಗಳನ್ನು ನೀಡಿದರೆ ಅವರು ಪುಸ್ತಕದೊಂದಿಗೆ ನಮ್ಮನ್ನು ನೋಡುವ ದೃಷ್ಟಿಯೇ ಬೇರೆಯಾಗಿರುತ್ತದೆ ಎಂದು ವಾಸ್ತವ ಸ್ಥಿತಿಯನ್ನು ತೆರೆದಿಟ್ಟರು. ನಮ್ಮ ಕನ್ನಡ ನಾಡಿನಲ್ಲಿದ್ದುಕೊಂಡೇ ನಮ್ಮ ನಾಡು ನುಡಿಯನ್ನು ಉಳಿಸಿಕೊಳ್ಳಲು ನಾವು ಜಾಗೃತರಾಗಬೇಕಾದ ಸ್ಥಿತಿ ಎದುರಾಗಿರುವ ಬಗ್ಗೆ ಅವರು ಬೇಸರ ವ್ಯಕ್ತ ಪಡಿಸಿದರು.
ಕಸ್ತೂರಿ ಕನ್ನಡ ಸಂಘದ ಅಧ್ಯಕ್ಷರಾದ ಉಲ್ಲಾಸ್ ತೆಂಕೋಲ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ರಿಪ್ಪನ್ಪೇಟೆ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಧನಲಕ್ಷ್ಮಿ, ಉಪಾಧ್ಯಕ್ಷ ಸುಧೀಂದ್ರ ಪೂಜಾರಿ, ಜಿ.ಆರ್.ಕೆ ಮೂರ್ತಿ ಪ್ರತಿಷ್ಠಾನದ ಸಂಸ್ಥಾಪಕ ಜಿ.ಆರ್. ಗೋಪಾಲಕೃಷ್ಣ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ತ.ಮ. ನರಸಿಂಹ, ಜಾನಪದ ಸಾಂಸ್ಕೃತಿಕ ವೇದಿಕೆಯ ಮಂಜುನಾಥ ಕಾಮತ್, ಜೆಡಿಎಸ್ ಮುಖಂಡರಾದ ಚಾಬುಸಾಬ್, ಕಾಂಗ್ರೆಸ್ ಮುಖಂಡ ಅಮೀರ್ ಹಂಜಾ, ಸ್ಥಳೀಯ ಮುಖಂಡರಾದ ಫ್ಯಾನ್ಸಿ ರಮೇಶ್, ಹೆಚ್.ಎನ್. ಉಮೇಶ್ ಮೊದಲಾದವರು ಪಾಲ್ಗೊಂಡಿದ್ದರು.
ಕಾಮೆಂಟ್ಗಳಿಲ್ಲ